
ಬಾಲಿವುಡ್ನ ‘ಭಾಯಿ’ ಮತ್ತು ‘ಬ್ಯಾಡ್ ಬಾಯ್’ ಎರಡೂ ಆಗಿರುವ ಸಲ್ಮಾನ್ ಖಾನ್ (Salman Khan) ಬಗ್ಗೆ ಸಿನಿಮಾ ಒಂದು ಬಿಡುಗಡೆಗೆ ರೆಡಿಯಾಗಿದೆ. ಸಲ್ಮಾನ್ ಖಾನ್ ಅವರೇ ಮಾಡಿದ್ದಾರೆ ಎನ್ನಲಾಗುತ್ತಿರುವ ಕುಕೃತ್ಯವಾಗಿರುವ ಕೃಷ್ಣಮೃಗ ಭೇಟೆ ಪ್ರಕರಣದ ಕುರಿತಾದ ಕತೆಯನ್ನು ಒಳಗೊಂಡಿರುವ ‘ಕಾಲಾ ಹಿರನ್’ ಸಿನಿಮಾ ಈಗಾಗಲೇ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದ ಬಿಡುಗಡೆಯನ್ನು ತಡೆಯಲು ಸಲ್ಮಾನ್ ಖಾನ್ ಹಾಗೂ ಅವರ ಕಾನೂನು ತಂಡ ಅವಿರತ ಪ್ರಯತ್ನ ಮಾಡುತ್ತಿದೆ. ಆದರೆ ‘ಕಾಲಾ ಹಿರನ್’ ಸಿನಿಮಾದ ನಿರ್ಮಾಪಕರು ಪಟ್ಟು ಸಡಿಸಲು ನಿರಾಕರಿಸಿದ್ದು, ಸಿನಿಮಾವನ್ನು ಬಲು ಅದ್ಧೂರಿಯಾಗಿ ತೆರೆಗೆ ತರಲಿದ್ದೇನೆ ಎಂದಿದ್ದಾರೆ.
‘ಕಾಲಾ ಹಿರನ್’ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ಅಮಿತ್ ಜೈನ್ ತುದಿಗಾಲಮೇಲಿದ್ದಾರೆ. ಆದರೆ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಟ್ವಿಟ್ಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಿತ್ ಜೈನ್, ‘ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ತಡೆ ಆಜ್ಞೆಯಾಗಲಿ, ಸಿನಿಮಾದ ವಿರುದ್ಧ ನಿಷೇಧದ ಆಜ್ಞೆಯಾಗಲಿ ಸಲ್ಮಾನ್ ಖಾನ್ಗೆ ದೊರಕಿಲ್ಲ. ಪ್ರಕರಣದ ವಿಚಾರಣೆಯನ್ನು ಜುಲೈ 6ಕ್ಕೆ ದೆಹಲಿ ಹೈಕೋರ್ಟ್ ಮುಂದೂಡಿದೆ ಅಷ್ಟೆ. ನಾನು ಈ ಹಿಂದೆಯೂ ಹೇಳಿದ್ದೆ, ನ್ಯಾಯಾಲಯದ ಎದುರು ಯಾವುದೇ ಸ್ಟಾರ್ ಅಥವಾ ಸೆಲೆಬ್ರಿಟಿ ಎಂಬುದು ನಡೆಯಲ್ಲ, ನ್ಯಾಯಾಲವು ಯಾವುದೇ ಗ್ಲಾಮರ್ ಅನ್ನು ಒಪ್ಪಿಕೊಳ್ಳುವುದಿಲ್ಲ, ‘ಬಾಲಿವುಡ್ನ ಭಾಯಿ’ ಎಂದು ಕರೆದುಕೊಳ್ಳುವುದರಿಂದ ‘ಕಾಲಾ ಹಿರನ್’ ಸಿನಿಮಾ ನಿಲ್ಲುವುದಿಲ್ಲ. ನಮ್ಮ ಸಿನಿಮಾ ಇಡೀ ಪ್ರಪಂಚದಾದ್ಯಂತ 8000 ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ಕರ್ಣನ ಪಾತ್ರದಲ್ಲಿ ಮಿಂಚಲಿರುವ ಸಲ್ಮಾನ್ ಖಾನ್, ಪ್ರಭಾಸ್ರ ಮೀರಿಸಬಲ್ಲರೆ?
ಅಮಿತ್ ಜೈನ್ ಅವರು ‘ಕಾಲಾ ಹಿರನ್’ ಸಿನಿಮಾದ ನಿರ್ಮಾಪಕರಾಗಿದ್ದು, ತಾವು ಯಾವುದೇ ಕಾರಣಕ್ಕೂ ಸಿನಿಮಾ ಬಿಡುಗಡೆ ಮಾಡಿಯೇ ಸಿದ್ದ ಎಂದಿದ್ದಾರೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ನಲ್ಲಿ ನಡೆದ ವಾದದ ಸಂದರ್ಭದಲ್ಲಿ, ‘ಕಾಲಾ ಹಿರನ್’ ಸಿನಿಮಾ ಇನ್ನೂ ಸಿಬಿಎಫ್ಸಿಗೆ ಸಲ್ಲಿಕೆ ಸಹ ಆಗಿಲ್ಲ, ಆಗಲೇ ಸಿನಿಮಾದ ವಿರುದ್ಧ ತಡೆ ಆಜ್ಞೆಗೆ ಯತ್ನಿಸಲಾಗಿದೆ. ಇದು ಅಕ್ಷಮ್ಯ, ಸಿನಿಮಾದ ವಸ್ತು-ವಿಷಯವೇ ತಿಳಿಯದೇ ಅರ್ಜಿ ಹಾಕಲಾಗಿದೆ’ ಎಂದು ವಾದಿಸಿದ್ದಾರೆ. ಅಲ್ಲದೆ, ಮುಂದಿನ ಅರ್ಜಿ ವಿಚಾರಣೆ ನಡೆಯುವವರೆಗೆ ಅಂದರೆ ಜುಲೈ 6ರವರೆಗೆ ಸಿನಿಮಾವನ್ನು ಸಿಬಿಎಫ್ಸಿಗೆ ಕಳಿಸುವುದಿಲ್ಲ ಎಂದು ಸಹ ನಿರ್ಮಾಪಕರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
1998 ರ ಸಿನಿಮಾ ‘ಹಮ್ ಸಾಥ್ ಸಾಥ್ ಹೇ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್, ಕೃಷ್ಣಮೃಗವನ್ನು ಭೇಟೆ ಆಡಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದು. ಪ್ರಕರಣದಲ್ಲಿ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರ, ಟಬು ಇನ್ನೂ ಕೆಲವರು ಆರೋಪಿಗಳಾಗಿದ್ದರು. ಆದರೆ ಸಲ್ಮಾನ್ ಖಾನ್ ಹೊರತಾಗಿ ಇತರರ ಮೇಲೆ ಆರೋಪಗಳನ್ನು ಕೈಬಿಡಲಾಯ್ತು. ಜೋದ್ಪುರ ನ್ಯಾಯಾಲಯವು ಸಲ್ಮಾನ್ ಖಾನ್ ಅನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ರಾಜಸ್ಥಾನ ಹೈಕೋರ್ಟ್ ಸಲ್ಮಾನ್ ಖಾನ್ ಅವರನ್ನು ಪ್ರಕರಣದಿಂದ ಖುಲಾಸೆ ಗೊಳಿಸಿತ್ತು. ಈಗಲೂ ಸಹ ಪ್ರಕರಣದ ವಿಚಾರಣೆ ಚಾಲ್ತಿಯಲ್ಲೇ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ