ಹಾಜಿ ಅಲಿ ದರ್ಗಾ ನವೀಕರಣಕ್ಕೆ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​

ಆಗಸ್ಟ್​ 9ರಂದು ಅಕ್ಷಯ್​ ಕುಮಾರ್​ ಅಭಿನಯದ ‘ಖೇಲ್​ ಖೇಲ್​ ಮೇ’ ಚಿತ್ರ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಅವರು ಮುಂಬೈನ ಹಾಜಿ ಅಲಿ ದರ್ಗಾಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ದರ್ಗಾದ ನವೀಕರಣ ಕಾರ್ಯ ನಡೆಯುತ್ತಿದೆ. ಹಾಗಾಗಿ ಅಕ್ಷಯ್​ ಕುಮಾರ್​ ಅವರು 1.21 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಹಾಜಿ ಅಲಿ ದರ್ಗಾ ನವೀಕರಣಕ್ಕೆ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​
ಹಾಜಿ ಅಲಿ ದರ್ಗಾದಲ್ಲಿ ಅಕ್ಷಯ್​ ಕುಮಾರ್​ ಪ್ರಾರ್ಥನೆ

Updated on: Aug 08, 2024 | 7:39 PM

ನಟ ಅಕ್ಷಯ್​ ಕುಮಾರ್​ ಅವರು ಇಂದು (ಆಗಸ್ಟ್​ 8) ಮುಂಬೈನ ಹಾಜಿ ಅಲಿ ದರ್ಗಾಗೆ ಭೇಟಿ ನೀಡಿದ್ದಾರೆ. ಈ ವಿಚಾರ ಸಖತ್​ ಸುದ್ದಿ ಆಗಿದೆ. ಯಾಕೆಂದರೆ, ಅವರು ಈ ದುರ್ಗಾ ನವೀಕರಣಕ್ಕೆ ಬರೋಬ್ಬರಿ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಮೊದಲಿನಿಂದಲೂ ಕೂಡ ಅಕ್ಷಯ್​ ಕುಮಾರ್​ ಅವರು ಸಮಾಜಮುಖಿ ಕಾರ್ಯಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಸಿನಿಮಾಗಳು ಸತತವಾಗಿ ಸೋತಿದ್ದರೂ ಕೂಡ ಅವರ ಮನೋಭಾವದಲ್ಲಿ ಬದಲಾವಣೆ ಆಗಿಲ್ಲ. ಹಾಜಿ ಅಲಿ ದರ್ಗಾಗೆ ಕೋಟ್ಯಂತರ ರೂಪಾಯಿ ನೀಡಿದ್ದಕ್ಕೆ ಅನೇಕರು ಭೇಷ್​ ಎಂದಿದ್ದಾರೆ.

ಅಕ್ಷಯ್​ ಕುಮಾರ್​ ಅವರು ನೀಡಿರುವ 1.21 ಕೋಟಿ ರೂಪಾಯಿ ಹಣದ ಸಹಾಯದಿಂದ ಹಾಲಿ ಅರ್ಲಿ ದರ್ಗಾದ ನವೀಕರಣ ಮಾಡಲಾಗುವುದು. ಇಂದು (ಆ.8) ಅಕ್ಷಯ್​ ಕುಮಾರ್​ ಅವರು ತಮ್ಮ ಬ್ಯುಸಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ದರ್ಗಾಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಸ್ವರ್ಗದಲ್ಲಿರುವ ತಮ್ಮ ಪಾಲಕರ ಸಲುವಾಗಿ ಅವರು ದರ್ಗಾದಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್​’ ಬಿಟ್ಟುಕೊಡುವ ದಿನಾಂಕದಲ್ಲಿ ರಿಲೀಸ್​ ಆಗತ್ತಾ ಅಕ್ಷಯ್​ ಕುಮಾರ್​ ಸಿನಿಮಾ?

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್​ ಕುಮಾರ್​ ನಟನೆಯ ‘ಖೇಲ್​ ಖೇಲ್​ ಮೇ’ ಸಿನಿಮಾ ಆಗಸ್ಟ್​ 9ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಮುದಾಸರ್​ ಅಜೀಜ್​ ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ಜೊತೆ ಫರ್ದೀನ್​ ಖಾನ್​, ವಾಣಿ ಕಪೂರ್​, ತಾಪ್ಸಿ ಪನ್ನು, ಪ್ರಗ್ಯಾ ಜೈಸ್ವಾಲ್​ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಜೊತೆ ಶ್ರದ್ಧಾ ಕಪೂರ್​ ನಟನೆಯ ‘ಸ್ತ್ರೀ 2’, ಜಾನ್​ ಅಬ್ರಾಹಂ ನಟನೆಯ ‘ವೇದಾ’ ಸಿನಿಮಾ ಕೂಡ ಪೈಪೋಟಿಗೆ ಇಳಿದಿವೆ. ಹಾಗಾಗಿ ಸ್ಪರ್ಧೆ ಜೋರಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ಸರಿಯಾದ ಗೆಲುವು ಸಿಕ್ಕಿಲ್ಲ. ಸಿನಿಮಾಗಳ ಆಯ್ಕೆಯಲ್ಲಿ ಅವರು ಎಡವುತ್ತಿದ್ದಾರೆ ಎಂಬ ಅಭಿಪ್ರಾಯ ಹಲವರದ್ದು. ಅಲ್ಲದೇ, ಅವಸರದಲ್ಲಿ ಸಿನಿಮಾದ ಕೆಲಸಗಳನ್ನು ಮುಗಿಸುತ್ತಿರುವುದರಿಂದ ಗುಣಮಟ್ಟದ ಕಡೆಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಟೀಕಿಸಿದ್ದಾರೆ. ಈ ಶುಕ್ರವಾರವಾದರೂ (ಆಗಸ್ಟ್​ 9) ಅಕ್ಷಯ್​ ಕುಮಾರ್​ ಅವರಿಗೆ ಗೆಲುವು ಸಿಗುತ್ತಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us