ಆಮಿರ್ ಖಾನ್​ ಜತೆ ಸುಪ್ರೀಂ ಕೋರ್ಟ್​ಗೆ ಹೋದ ಮಾಜಿ ಪತ್ನಿ ಕಿರಣ್​ ರಾವ್​ಗೆ ಬಂತು ಹೊಸ ಆಸೆ

ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರಿಗೆ ಸುಪ್ರೀಂ ಕೋರ್ಟ್​ಗೆ ತೆರಳುವ ಅವಕಾಶ ಸಿಕ್ಕಿದೆ. ಅಲ್ಲಿಗೆ ಹೋಗಿ ಬಂದ ಬಳಿಕ ಕಿರಣ್​ ರಾವ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವರ್ಷ ತೆರೆಕಂಡು ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದ ‘ಲಾಪತಾ ಲೇಡಿಸ್​’ ಸಿನಿಮಾಗೆ ಕಿರಣ್​ ರಾವ್​ ನಿರ್ದೇಶನ ಮಾಡಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.

ಆಮಿರ್ ಖಾನ್​ ಜತೆ ಸುಪ್ರೀಂ ಕೋರ್ಟ್​ಗೆ ಹೋದ ಮಾಜಿ ಪತ್ನಿ ಕಿರಣ್​ ರಾವ್​ಗೆ ಬಂತು ಹೊಸ ಆಸೆ
ಆಮಿರ್​ ಖಾನ್​, ಕಿರಣ್​ ರಾವ್​

Updated on: Aug 09, 2024 | 8:44 PM

2021ರಲ್ಲಿ ವಿಚ್ಛೇದನ ಪಡೆದ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ನಡುವೆ ಈಗಲೂ ಆತ್ಮೀಯತೆ ಇದೆ. ಇಂದು (ಆಗಸ್ಟ್​ 9) ಅವರು ಸುಪ್ರೀಂ ಕೋರ್ಟ್​ಗೆ ತೆರಳಿದ್ದಾರೆ. ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದ ಮಾತ್ರಕ್ಕೆ ಏನೋ ಕಿರಿಕ್​ ಇರಬಹುದು ಎಂದುಕೊಳ್ಳುವಂತಿಲ್ಲ. ಇಂದು ಅವರಿಬ್ಬರು ಕೋರ್ಟ್​ಗೆ ಹೋಗಿರುವುದು ಒಂದು ಒಳ್ಳೆಯ ಕಾರಣದಿಂದ. ಹೌದು, ಆಮಿರ್​ ಖಾನ್​ ನಿರ್ಮಿಸಿ, ಕಿರಣ್​ ರಾವ್​ ನಿರ್ದೇಶನ ಮಾಡಿದ್ದ ‘ಲಾಪತಾ ಲೇಡೀಸ್’ ಸಿನಿಮಾ ಸುಪ್ರೀಂ ಕೋರ್ಟ್​ನಲ್ಲಿ ಪ್ರದರ್ಶನ ಕಂಡಿದೆ. ಆ ಬಳಿಕ ಕಿರಣ್​ ರಾವ್​ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್​ನ 75ನೇ ವಾರ್ಷಿಕೋತ್ಸವದ ಸಲುವಾಗಿ ‘ಲಾಪತಾ ಲೇಡೀಸ್​’ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಭಾಗಿಯಾಗಲು ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರನ್ನು ಆಹ್ವಾನಿಸಲಾಗಿತ್ತು. ಈ ವಿಶೇಷ ಅವಕಾಶವನ್ನು ಮಾಜಿ ದಂಪತಿ ಸದುಪಯೋಗ ಮಾಡಿಕೊಂಡಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ಮಾಧ್ಯಮಗಳ ಜೊತೆ ಕಿರಣ್​ ರಾವ್​ ಮಾತನಾಡಿದ್ದಾರೆ. ಅವರಿಗೆ ಈಗ ಕೋರ್ಟ್​ ಕುರಿತು ಕಥೆ ಇರುವ ಸಿನಿಮಾವನ್ನು ಮಾಡುವ ಆಸೆ ಬಂದಿದೆ.

‘ಸುಪ್ರೀಂ ಕೋರ್ಟ್​ ಜಡ್ಜ್​​ಗಳು, ಅವರ ಕುಟುಂಬದವರು ಹಾಗೂ ಅಧಿಕಾರಿಗಳಿಗಾಗಿ ನಮ್ಮ ಸಿನಿಮಾ ಪ್ರದರ್ಶನಗೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ಇಲ್ಲಿಗೆ ಬಂದಿದ್ದಕ್ಕೆ ಬಹಳ ಖುಷಿ ಆಗಿದೆ’ ಎಂದು ಅವರು ಹೇಳಿದ್ದಾರೆ. ಈ ಅನುಭವದಿಂದ ಮುಂದೇನಾದರೂ ಕೋರ್ಟ್​ ರೂಂ ಡ್ರಾಮಾ ಸಿನಿಮಾವನ್ನು ಮಾಡುವ ಆಸೆ ಇದೆಯಾ ಎಂದು ಕೇಳಿದ್ದಕ್ಕೆ, ‘ಮಾಡಲು ಇಷ್ಟ ಇದೆ. ಇದನ್ನೆಲ್ಲ ಒಂದು ದಿನ ಪೂರ್ತಿ ನೀಡಿದ್ದರೆ ಚೆನ್ನಾಗಿತ್ತು. ಮುಂದೊಂದು ದಿನ ಆ ರೀತಿ ಸಿನಿಮಾ ಮಾಡಬಹುದು’ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರಿಂದ ಭೇಷ್​ ಎನಿಸಿಕೊಂಡ ‘ಲಾಪತಾ ಲೇಡೀಸ್​’ ನಿರ್ದೇಶಕಿ ಕಿರಣ್​ ರಾವ್​

ವಿಶೇಷ ಕಥಾಹಂದರ ಸಿನಿಮಾಗಳನ್ನು ಮಾಡುವಲ್ಲಿ ಕಿರಣ್​ ರಾವ್​ ಅವರು ಫೇಮಸ್​ ಆಗಿದ್ದಾರೆ. ‘ಲಾಪತಾ ಲೇಡೀಸ್​’ ಸಿನಿಮಾದಲ್ಲಿ ಗಂಡು-ಹೆಣ್ಣಿನ ನಡುವಿನ ಲಿಂಗ ಸಮಾನತೆ ಬಗ್ಗೆ ಸಂದೇಶ ನೀಡಲಾಗಿದೆ. ಆ ಕಾರಣದಿಂದಲೇ ಈ ಚಿತ್ರವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಇದರಿಂದ ಇಡೀ ತಂಡಕ್ಕೆ ಖುಷಿ ಆಗಿದೆ. ಪ್ರತಿಭಾ ರಂಟಾ, ನಿತಾಂಷಿ ಘೋಯಲ್​, ಸ್ಪರ್ಶ್​ ಶ್ರೀವಾಸ್ತವ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us