Adipurush Movie: ರಾಮ ನವಮಿಗೆ ‘ಆದಿಪುರುಷ್​’ ಪೋಸ್ಟರ್ ರಿಲೀಸ್; ‘ಇದು ಯಾವ ಫಿಲ್ಟರ್​’ ಎಂದು ಟೀಕಿಸಿದ ನೆಟ್ಟಿಗರು

ಗ್ರಾಫಿಕ್ಸ್​ನಲ್ಲಿ ಕೆಲ ಬದಲಾವಣೆ ಮಾಡಲು ತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ, ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿದೆ.

Adipurush Movie: ರಾಮ ನವಮಿಗೆ ‘ಆದಿಪುರುಷ್​’ ಪೋಸ್ಟರ್ ರಿಲೀಸ್; ‘ಇದು ಯಾವ ಫಿಲ್ಟರ್​’ ಎಂದು ಟೀಕಿಸಿದ ನೆಟ್ಟಿಗರು
ಆದಿಪುರುಷ್ ಪೋಸ್ಟರ್

Updated on: Mar 30, 2023 | 8:42 AM

ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ ಸಿನಿಮಾಗೆ ಒಂದರ ಮೇಲೆ ಒಂದರಂತೆ ಹಿನ್ನಡೆ ಆಗುತ್ತಲೇ ಇದೆ. ಈ ಮೊದಲು ರಿಲೀಸ್ ಆಗಿದ್ದ ಟೀಸರ್​ಗೆ ಎಲ್ಲ ಕಡೆಗಳಿಂದ ಟೀಕೆ ಬಂದಿತ್ತು. ಈಗ ಸಿನಿಮಾ ಮತ್ತೆ ಟೀಕೆಗೆ ಒಳಗಾಗಿದೆ. ಇಂದು (ಮಾರ್ಚ್​ 30) ರಾಮ ನವಮಿ ಹಬ್ಬ. ಈ ವಿಶೇಷ ದಿನದಂದು ‘ಆದಿಪುರುಷ್’ (Adipurush Movie) ಟೀಂ ಹೊಸ ಪೋಸ್ಟರ್ ಹಂಚಿಕೊಂಡಿದೆ. ಇದಕ್ಕೆ ಎಲ್ಲ ಕಡೆಗಳಿಂದ ಟೀಕೆ ವ್ಯಕ್ತವಾಗಿದೆ. ಯಾವುದೋ ಇನ್​ಸ್ಟಾಗ್ರಾಮ್ ಫಿಲ್ಟರ್ ಹಾಕಿ ಪೋಸ್ಟರ್ ಎಡಿಟ್ ಮಾಡಿದಂತಿದೆ ಎಂದು ಅನೇಕರು ಟ್ರೋಲ್ ಮಾಡಿದ್ದಾರೆ.

‘ಆದಿಪುರುಷ್’ ಸಿನಿಮಾ ಹಲವು ಕಾರಣದಿಂದ ನಿರೀಕ್ಷೆ ಸೃಷ್ಟಿ ಮಾಡಿತ್ತು. ಪ್ರಭಾಸ್ ಅವರು ರಾಮನ ಅವತಾರದಲ್ಲಿ ಕಾಣಿಸಿಕೊಂಡರೆ, ಕೃತಿ ಸನೋನ್ ಅವರು ಸೀತೆಯ ಅವತಾರ ತಾಳಿದ್ದಾರೆ. ಓಂ ರಾವತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನೂರಾರು ಕೋಟಿ ಸುರಿಯಲಾಗಿದೆ. ಗ್ರಾಫಿಕ್ಸ್ ಗಮನ ಸೆಳೆಯಲಿದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ ಆಗಿತ್ತು. ಆದರೆ, ಈ ನಿರೀಕ್ಷೆ ಸುಳ್ಳಾಯಿತು. ಕಳೆದ ವರ್ಷ ರಿಲೀಸ್ ಆದ ಟೀಸರ್ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ನುಚ್ಚು ನೂರು ಮಾಡಿತ್ತು. ಇದೇ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ ಎಂದು ವರದಿ ಆಗಿತ್ತು.

ಇದನ್ನೂ ಓದಿ: ‘ಆದಿಪುರುಷ್​​’ ಚಿತ್ರಕ್ಕೆ ಮುಳುವಾದ ವಿವಾದ; ಉತ್ತರಿಸಲು ಸೆನ್ಸಾರ್ ಮಂಡಳಿಗೆ ಕೋರ್ಟ್​ ಆದೇಶ

ಗ್ರಾಫಿಕ್ಸ್​ನಲ್ಲಿ ಕೆಲ ಬದಲಾವಣೆ ಮಾಡಲು ತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ, ಹೊಸ ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ರಾಮ, ಲಕ್ಷ್ಮಣ ಹಾಗೂ ಸೀತೆ ನಿಂತಿದ್ದಾರೆ. ಹನುಮಂತ ಇವರಿಗೆ ನಮಿಸುತ್ತಿದ್ದಾನೆ. ಈ ರೀತಿಯಲ್ಲಿ ಪೋಸ್ಟರ್ ಮೂಡಿ ಬಂದಿದೆ. ಈ ಮೊದಲು ರಾಮಾಯಣದ ಕುರಿತು ಸಿದ್ಧಗೊಂಡ ಸೀರಿಯಲ್​ಗಳಲ್ಲಿ ಇದೇ ಮಾದರಿಯ ಪೋಸ್ಟರ್​ಗಳು ಇರುತ್ತಿದ್ದವು. ಇದನ್ನು ಪ್ರೇಕ್ಷಕರು ನೆನಪಿಸಿಕೊಂಡಿದ್ದಾರೆ. ಹೀಗಾಗಿ ಇದರಲ್ಲಿ  ಹೊಸದೇನು ಇಲ್ಲ ಎನ್ನುತ್ತಿದ್ದಾರೆ. ಕೆಲವರು ಇದು ಯಾವ ಫಿಲ್ಟರ್ ಎಂದು ಕೇಳಿದ್ದಾರೆ.

ಇದನ್ನೂ ಓದಿ: Om Raut: ಮತ್ತೆ ಟ್ರೋಲ್​ ಆದ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​; ಈ ಬಾರಿ ಫ್ಯಾನ್ಸ್​ ಕೋಪಕ್ಕೆ ಕಾರಣ ಏನು?

‘ಆದಿಪುರುಷ್​’ ಟೀಸರ್ ರಿಲೀಸ್ ಆದಾಗ ಪ್ರಭಾಸ್ ಅವರು ಸಿಟ್ಟಿನಲ್ಲಿ ‘ಓಂ ನನ್ನ ರೂಂಗೆ ಬನ್ನಿ’ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅನೇಕರು ಹೊಸ ಪೋಸ್ಟರ್​ಗೆ ಅದೇ ಕಮೆಂಟ್ ಹಾಕಿದ್ದಾರೆ. ಈ ಬೆಳವಣಿಗೆಯಿಂದ ಚಿತ್ರಕ್ಕೆ ಹಿನ್ನಡೆ ಆಗುವ ಸೂಚನೆ ಸಿಕ್ಕಿದೆ.

ಆದಿಪುರುಷ್ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಇದೆ. ಈ ಚಿತ್ರವನ್ನು ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ಭುಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್​, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us