‘ಪ್ರಧಾನಿ ಕಚೇರಿಯವರು ಹೀಗೆಲ್ಲ ಬರೆಯಲು ಸಾಧ್ಯವೇ’; ‘ಧುರಂಧರ್ 2’ ನಟನ ನೇರ ಪ್ರಶ್ನೆ

ಬಾಲಿವುಡ್‌ನ 'ಧುರಂಧರ್ 2' ಸಿನಿಮಾ ಪ್ರಧಾನಿ ಮೋದಿ ಕುರಿತ ಪ್ರಚಾರ ಚಿತ್ರ ಎಂಬ ಆರೋಪ ಎದುರಿಸುತ್ತಿದೆ. ಇದರ ಸ್ಕ್ರಿಪ್ಟ್ PMOನಿಂದಲೇ ಸಿದ್ಧವಾಯಿತು ಎಂದೂ ಹೇಳಲಾಗಿದೆ. ಆದರೆ, ನಟ ರಾಕೇಶ್ ಬೇಡಿ ಈ ಆರೋಪಗಳನ್ನು ಹಾಸ್ಯಭರಿತವಾಗಿ ತಳ್ಳಿಹಾಕಿದ್ದಾರೆ. PMO ಕಚೇರಿಯಲ್ಲಿ ತಾವು ಹೇಳಿದಂತಹ ಹಾಸ್ಯಮಯ ಡೈಲಾಗ್‌ಗಳನ್ನು ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ಚಿತ್ರಕ್ಕೆ ಕಾಮಿಡಿ ಸ್ಪರ್ಶ ನೀಡಿದ ಕುರಿತು ಮತ್ತು ಸಾಮಾಜಿಕ ಮಾಧ್ಯಮದ ಶಕ್ತಿಯ ಬಗ್ಗೆ ವಿವರಿಸಿದ್ದಾರೆ.

‘ಪ್ರಧಾನಿ ಕಚೇರಿಯವರು ಹೀಗೆಲ್ಲ ಬರೆಯಲು ಸಾಧ್ಯವೇ’; ‘ಧುರಂಧರ್ 2’ ನಟನ ನೇರ ಪ್ರಶ್ನೆ
ರಾಕೇಶ್ ಬೇಡಿ

Updated on: Jun 18, 2026 | 2:35 PM

ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿದೆ. ಆದರೆ, ಈ ಚಿತ್ರದ ವಿರುದ್ಧ ‘ಪ್ರೊಪೊಗಾಂಡ ಸಿನಿಮಾ’ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ತೋರಿಸಿರುವುದು, ಅವರು ಕೈಗೊಂಡ ನೋಟು ಅಮಾನ್ಯೀಕರಣ ಕ್ರಮವನ್ನು ಶ್ಲಾಘಿಸಿರುವುದು ಮತ್ತು ಅದರ ಅಸಲಿ ಕಾರಣವನ್ನು ವಿವರಿಸಿರುವುದೇ ಈ ಆರೋಪಕ್ಕೆ ಮುಖ್ಯ ಕಾರಣವಾಗಿತ್ತು. ಈ ಸಿನಿಮಾದ ಸ್ಕ್ರಿಪ್ಟ್ ಅನ್ನು ಸ್ವತಃ ಮೋದಿಯವರೇ ಫೈನಲ್ ಮಾಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರಂತೂ ಈ ಕಥೆ ಸಿದ್ಧವಾಗಿದ್ದೇ ಪ್ರಧಾನಿ ಕಚೇರಿಯಲ್ಲಿ ಎಂದು ಆರೋಪಿಸಿದ್ದರು. ಇದೀಗ ಈ ಎಲ್ಲಾ ಆರೋಪಗಳಿಗೆ ಚಿತ್ರದ ಹಿರಿಯ ನಟ ರಾಕೇಶ್ ಬೇಡಿ ಅವರು ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಹಾಗೂ ಖಡಕ್ ಆಗಿ ಉತ್ತರಿಸಿದ್ದಾರೆ.

ಪಿಎಂಒ ಕಚೇರಿಯಲ್ಲಿ ಇಂತಹ ಡೈಲಾಗ್ ಬರೆಯಲು ಸಾಧ್ಯವೇ?

ರಾಕೇಶ್ ಬೇಡಿ ಅವರು ‘ಧುರಂಧರ್ 2’ ಚಿತ್ರದಲ್ಲಿ ಜಮೀಲ್ ಜಮಾಲಿ ಹೆಸರಿನ ಪಾಕಿಸ್ತಾನ ರಾಜಕಾರಣಿ ಪಾತ್ರ ಮಾಡಿದ್ದಾರೆ. ಚಿತ್ರದ ಯಶಸ್ಸಿನ ನಂತರ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ, ‘ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಕೆಲವರು ಈ ಚಿತ್ರದ ಸ್ಕ್ರಿಪ್ಟ್ ನೇರವಾಗಿ ಪ್ರಧಾನಿ ಕಚೇರಿಯಿಂದಲೇ ಬರೆದು ಬಂದಿದೆ ಎಂದು ಹೇಳಲಾರಂಭಿಸಿದರು. ಆದರೆ ನಾನು ಅವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ; ಚಿತ್ರದಲ್ಲಿ ನಾನು ಬಾತುಕೋಳಿಗಳ ಗುಂಪನ್ನು ನೋಡಿ ‘ನಿಮ್ಮ ವೃಷಣಗಳು ತುಂಬಾ ಬಿಳಿಯಾಗಿವೆ’ ಎನ್ನುತ್ತೇನೆ. ಪಿಎಂಒ ಕಚೇರಿಯಲ್ಲಿ ಕುಳಿತು ಇಂತಹ ಲೈನ್‌ಗಳನ್ನು ಬರೆಯುವ ವ್ಯಕ್ತಿ ಯಾರಿದ್ದಾರೆ ಹೇಳಿ? ಇಂತಹ ಡೈಲಾಗ್ ಅನ್ನು ಅಲ್ಲಿನವರು ಯೋಚಿಸಲು ಕೂಡ ಸಾಧ್ಯವಿಲ್ಲ’ ಎಂದು ಹಾಸ್ಯಭರಿತವಾಗಿ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಸ್ಕ್ರಿಪ್ಟ್‌ಗೆ ಕಾಮಿಡಿ ಟಚ್ ನೀಡಿದ ರಾಕೇಶ್:

‘ನಾನು ಮೊದಲು ಚಿತ್ರದ ಸ್ಕ್ರಿಪ್ಟ್ ಓದಿದಾಗ ಅದು ಕೇವಲ ಟೆನ್ಷನ್ ಅಷ್ಟೇ ಅಲ್ಲ, ಅತ್ಯಂತ ಗಂಭೀರವಾದ ಕಥೆ ಎಂದು ತಿಳಿಯಿತು. ನಾನು ಮೂಲತಃ ಕಾಮಿಡಿ ಕಲಾವಿದನಾದ್ದರಿಂದ, ಇಷ್ಟು ಗಂಭೀರವಾದ ಕಥೆಯ ಮಧ್ಯೆ ಪ್ರೇಕ್ಷಕರಿಗೆ ಸ್ವಲ್ಪ ರಿಲೀಫ್ ನೀಡಲು ಕೆಲವು ಕಾಮಿಡಿ ದೃಶ್ಯಗಳನ್ನು ಸೇರಿಸಬಹುದೇ ಎಂದು ನಿರ್ದೇಶಕ ಆದಿತ್ಯ ಧರ್ ಅವರನ್ನು ಕೇಳಿದೆ. ಆರಂಭದಲ್ಲಿ ಅವರು ಸ್ವಲ್ಪ ಹಿಂಜರಿದರೂ, ಶೂಟಿಂಗ್ ಪ್ರಗತಿಯಾದಂತೆ ಆ ಕಾಮಿಡಿ ಟಚ್ ಅನ್ನು ಅವರೂ ಇಷ್ಟಪಟ್ಟರು, ನಾನೂ ಎಂಜಾಯ್ ಮಾಡಿದೆ’ ಎಂದು ರಾಕೇಶ್ ಬೇಡಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದಿದ್ದಕ್ಕೆ ನಟ ರಾಕೇಶ್ ಬೇಡಿಗೆ 1 ಕೋಟಿ ರೂಪಾಯಿ ಬೋನಸ್ ಕೊಟ್ಟ ನಿರ್ಮಾಪಕರು

ಸೋಶಿಯಲ್ ಮೀಡಿಯಾ ಪವರ್ ಬಿಚ್ಚಿಟ್ಟ ನಟ:

‘ಹಿಂದಿನ ಕಾಲದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಜನರಿಗೆ ತಿಳಿಯಲು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿತ್ತು. ಆದರೆ ಇಂದು ಒಂದೇ ಒಂದು ಬಟನ್ ಒತ್ತಿದರೆ ಸಾಕು, ಕೇವಲ ಒಂದು ಸೆಕೆಂಡ್‌ನಲ್ಲಿ ಕೋಟ್ಯಂತರ ಜನರಿಗೆ ಮಾಹಿತಿ ತಲುಪುತ್ತದೆ. ಇನ್‌ಸ್ಟಾಗ್ರಾಮ್ ಮತ್ತು ಇತರೆ ಸೋಷಿಯಲ್ ಮೀಡಿಯಾಗಳಿಂದಾಗಿ ‘ಧುರಂಧರ್’ ಚಿತ್ರಕ್ಕೆ ಜಗತ್ತಿನಾದ್ಯಂತ ಸಿಕ್ಕ ಪ್ರತಿಕ್ರಿಯೆ ಕೋಟ್ಯಂತರ ಪಟ್ಟು ಹೆಚ್ಚಾಗಿದೆ. ಈ ಹಿಂದೆ ನನ್ನ ‘ಚಶ್ಮೇ ಬದ್ದೂರ್’ ಮತ್ತು ‘ಯೇ ಜೋ ಹೈ ಜಿಂದಗಿ’ ಸೀರಿಯಲ್ ಸಮಯದಲ್ಲೂ ನನಗೆ ಇಷ್ಟೇ ಪ್ರೀತಿ ಸಿಕ್ಕಿತ್ತು. ಆದರೆ ಇಂದಿನ ರೀಚ್ ಮತ್ತು ಸಕ್ಸಸ್‌ನ ತೀವ್ರತೆ ಹಳೆಯ ಕಾಲಕ್ಕಿಂತ ಲಕ್ಷಾಂತರ ಪಟ್ಟು ದೊಡ್ಡದಾಗಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us