ಬಾಲಿವುಡ್‌ನ ಮುಖವಾಡ ಬಿಚ್ಚಿಟ್ಟ ರಕುಲ್ ಪ್ರೀತ್ ಸಿಂಗ್: ಬಿಟೌನ್ ಮಂದಿಗೆ ಬರೀ ಅಸೂಯೆ

ಹಿಂದಿ ಚಿತ್ರರಂಗದಲ್ಲಿ ಇರುವ ಹುಳುಕನ್ನು ನಟಿ ರಕುಲ್ ಪ್ರೀತ್ ಸಿಂಗ್ ಬಹಿರಂಗಪಡಿಸಿದ್ದಾರೆ. ಅವರ ಈ ನೇರ ನುಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ವಿಶೇಷವಾಗಿ ದಕ್ಷಿಣ ಭಾರತದ ಸಿನಿಪ್ರೇಕ್ಷಕರು ರಕುಲ್ ಅವರ ಧೈರ್ಯವನ್ನು ಮೆಚ್ಚಿದ್ದಾರೆ. ರಕುಲ್ ಪ್ರೀತ್ ಸಿಂಗ್ ಹೇಳಿದ್ದೇನು? ಇಲ್ಲಿದೆ ಉತ್ತರ..

ಬಾಲಿವುಡ್‌ನ ಮುಖವಾಡ ಬಿಚ್ಚಿಟ್ಟ ರಕುಲ್ ಪ್ರೀತ್ ಸಿಂಗ್: ಬಿಟೌನ್ ಮಂದಿಗೆ ಬರೀ ಅಸೂಯೆ
Rakul Preet Singh

Updated on: Jul 17, 2026 | 5:13 PM

ಮುಖ್ಯಾಂಶಗಳು

  • ಇಂಡಸ್ಟ್ರಿಗಳ ವ್ಯತ್ಯಾಸ: ಬಾಲಿವುಡ್‌ನಲ್ಲಿ ಅಸೂಯೆ, ಅಭದ್ರತೆ ಹೆಚ್ಚಾಗಿದ್ದರೆ, ದಕ್ಷಿಣದ ತೆಲುಗು ಚಿತ್ರರಂಗದಲ್ಲಿ ಒಗ್ಗಟ್ಟು ಇದೆ ಎಂದು ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.
  • ನೆಗೆಟಿವ್ ಪಿಆರ್ ವಿರುದ್ಧ ಕಿಡಿ: ಮುಂಬೈನಲ್ಲಿ ಒಬ್ಬರ ಸಿನಿಮಾವನ್ನು ಮತ್ತೊಬ್ಬರು ಬೆಂಬಲಿಸಲ್ಲ. 'ನೆಗೆಟಿವ್ ಪಿಆರ್' ತಂತ್ರ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
  • ಮುಂದಿನ ಸಿನಿಮಾ: ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲಿ ಇತ್ತೀಚೆಗೆ ನಟಿಸಿದ್ದ ರಕುಲ್, ಶೀಘ್ರದಲ್ಲೇ ಬಿಗ್ ಬಜೆಟ್‌ನ ‘ರಾಮಾಯಣ’ ಸಿನಿಮಾದಲ್ಲಿ ಕಾಣಿಸಿಕೊಳ್ಳಳಿದ್ದಾರೆ.

ಚಿತ್ರರಂಗದಲ್ಲಿ ಸದಾ ಮುನ್ನೆಲೆಗೆ ಬರುವ ‘ಬಾಲಿವುಡ್ ವರ್ಸಸ್ ದಕ್ಷಿಣ ಭಾರತದ ಚಿತ್ರರಂಗ’ ಎಂಬ ಚರ್ಚೆಗೆ ಈಗ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಹೊಸ ಕಿಡಿ ಹೊತ್ತಿಸಿದ್ದಾರೆ. ಮುಂಬೈನ ಹಿಂದಿ ಚಿತ್ರರಂಗದಲ್ಲಿರುವ ಅಸೂಯೆ ಮತ್ತು ನೆಗೆಟಿವ್ ಪಿಆರ್ (Negative PR) ತಂತ್ರಗಳ ವಿರುದ್ಧ ಕಿಡಿಕಾರಿರುವ ರಕುಲ್, ತೆಲುಗು ಚಿತ್ರರಂಗದ ಒಗ್ಗಟ್ಟನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ನಂತರ ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್ ನಟಿಯಾಗಿ ಬೆಳೆದ ರಕುಲ್ ಪ್ರೀತ್ ಸಿಂಗ್, 2014ರಲ್ಲಿ ‘ಯಾರಿಯಾ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಾಲಿವುಡ್ ಮತ್ತು ಟಾಲಿವುಡ್ (Telugu Film Industry) ನಡುವಿನ ಕೆಲಸದ ಸಂಸ್ಕೃತಿಯ ವ್ಯತ್ಯಾಸಗಳನ್ನು ಬಹಿರಂಗಪಡಿಸಿದ್ದಾರೆ.

ಸೌತ್‌ನಲ್ಲಿ ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುತ್ತಾರೆ:

ತೆಲುಗು ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ರಕುಲ್, ‘ಟಾಲಿವುಡ್‌ನಲ್ಲಿ ತೀವ್ರ ಪೈಪೋಟಿ ಇದ್ದಾಗಲೂ ಚಿತ್ರನಿರ್ಮಾಪಕರು ಮತ್ತು ಕಲಾವಿದರು ಪರಸ್ಪರ ಬೆಂಬಲಿಸುತ್ತಾರೆ. ಒಬ್ಬರ ಸಿನಿಮಾದ ಟ್ರೇಲರ್ ಅನ್ನು ಮತ್ತೊಬ್ಬರು ಪ್ರಮೋಟ್ ಮಾಡುತ್ತಾರೆ. ಪ್ರಚಾರದ ಈವೆಂಟ್‌ಗಳಿಗೆ ಹಾಜರಾಗುತ್ತಾರೆ. ಸಿನಿಮಾ ಯಶಸ್ವಿಯಾದಾಗ ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಾರೆ. ಈ ರೀತಿಯ ಆರೋಗ್ಯಕರ ವಾತಾವರಣ ತೆಲುಗು ಇಂಡಸ್ಟ್ರಿಯಲ್ಲಿದೆ’ ಎಂದಿದ್ದಾರೆ.

ಬಾಲಿವುಡ್‌ನಲ್ಲಿ ಕಾಲೆಳೆಯುವ ತಂತ್ರ, ಅಸೂಯೆ ಹೆಚ್ಚು:

ಇದೇ ವೇಳೆ ಬಾಲಿವುಡ್‌ನಲ್ಲಿರುವ ನೆಗೆಟಿವ್ ಧೋರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ರಕುಲ್ ಪ್ರೀತ್ ಸಿಂಗ್ ಅವರು, ‘ಮುಂಬೈನಲ್ಲಿ ಒಬ್ಬರ ಸಿನಿಮಾವನ್ನು ಮತ್ತೊಬ್ಬರು ಬೆಂಬಲಿಸುವುದಿಲ್ಲ. ಇದಕ್ಕೆ ಅಲ್ಲಿರುವ ಅಭದ್ರತೆ ಮತ್ತು ಅಸೂಯೆಯೇ ಕಾರಣ. ಒಬ್ಬರ ಚಿತ್ರವನ್ನು ಸೋಲಿಸಲು ಮತ್ತೊಬ್ಬರ ವಿರುದ್ಧ ನೆಗೆಟಿವ್ ಪಿಆರ್ ಮಾಡಿಸುವುದು ಇಲ್ಲಿ ಕಾಮನ್ ಆಗಿದೆ. ಬಾಲಿವುಡ್ ಕೂಡ ಸೌತ್ ಇಂಡಸ್ಟ್ರಿಯಂತೆ ನೆಗೆಟಿವ್ ಪಿಆರ್ ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ನಮ್ಮ ಭಾರತೀಯ ಚಿತ್ರರಂಗ ಇಡೀ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾಗಲಿದೆ’ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಹೆಸರಿನಲ್ಲಿ ವಾಟ್ಸಪ್ ಮೂಲಕ ದೋಖಾ: ಎಚ್ಚರಿಕೆ ನೀಡಿದ ನಟಿ

ರಕುಲ್ ಮುಂಬರುವ ಸಿನಿಮಾಗಳು:

ಇತ್ತೀಚೆಗಷ್ಟೇ ಆಯುಷ್ಮಾನ್ ಖುರಾನಾ, ವಾಮಿಕಾ ಗಬ್ಬಿ ಮತ್ತು ಸಾರಾ ಅಲಿ ಖಾನ್ ನಟನೆಯ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಕುಲ್ ಪ್ರೀತ್ ಸಿಂಗ್, ಮುಂದಿನ ದಿನಗಳಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಪೌರಾಣಿಕ ಚಿತ್ರದಲ್ಲಿ ಅವರು ‘ಶೂರ್ಪನಖಿ’ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:12 pm, Fri, 17 July 26

Follow Us