ಸೈಫ್ ಅಲಿ ಖಾನ್ ಮೇಲೆ ದಾಳಿ ಆಗಲು ಮಹಿಳೆ ಕಾರಣ? ಪಶ್ಚಿಮ ಬಂಗಾಳದಲ್ಲಿ ಬಂಧನ

ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ದರೋಡೆಗೆ ಯತ್ನಿಸಿದ ವ್ಯಕ್ತಿಗಳ ಜಾಡು ಹಿಡಿದು ಮುಂಬೈ ಪೊಲೀಸರು ಹೊರಟಿದ್ದಾರೆ. ತನಿಖೆ ಮುಂದುವರಿದಂತೆಲ್ಲ ಹೊಸ ಹೊಸ ವಿವರಗಳು ಹೊರಬರುತ್ತಿವೆ. ಶಾಕಿಂಗ್ ಸಂಗತಿ ಏನೆಂದರೆ, ಈ ಘಟನೆಯ ಹಿಂದೆ ಮಹಿಳೆಯೊಬ್ಬರ ಕೈವಾಡ ಕೂಡ ಇದೆಯೇ ಎಂಬ ಪ್ರಶ್ನೆ ಉದ್ಭವ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸೈಫ್ ಅಲಿ ಖಾನ್ ಮೇಲೆ ದಾಳಿ ಆಗಲು ಮಹಿಳೆ ಕಾರಣ? ಪಶ್ಚಿಮ ಬಂಗಾಳದಲ್ಲಿ ಬಂಧನ
Saif Ali Khan

Updated on: Jan 27, 2025 | 6:17 PM

ಮುಂಬೈನ ಬಾಂದ್ರಾದಲ್ಲಿ ಇರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್​ಮೆಂಟ್​ನಲ್ಲಿ ದರೋಡೆಕೋರರು ನುಗ್ಗಿದ ಘಟನೆ ನಡೆದು 10 ದಿನಗಳ ಕಳೆದಿವೆ. ಮುಂಬೈ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಮೊದಲು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನ ಹಿನ್ನೆಲೆಯನ್ನು ಕೆದಕಿದಾಗ ಮಹಿಳೆಯೊಬ್ಬರ ಸಂಪರ್ಕ ಇರುವುದು ತಿಳಿದು ಬಂದಿದೆ. ಹೌದು, ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಬಳಸುತ್ತಿದ್ದ ಸಿಮ್ ಕಾರ್ಡ್​ ರಿಜಿಸ್ಟರ್​ ಆಗಿರುವುದು ಮಹಿಳೆಯ ಹೆಸರಿನಲ್ಲಿ. ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್​ನ ಹಿನ್ನೆಲೆಯನ್ನು ಹುಡುಕಿ ಹೊರಟಿರುವ ಪೊಲೀಸರು ಸಿಮ್ ಕಾರ್ಡ್​ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಪಶ್ಚಿಮ ಬಂಗಾಳದ ಓರ್ವ ಮಹಿಳೆಯ ಹೆಸರಿನಲ್ಲಿ ಈ ಸಿಮ್ ಕಾರ್ಡ್​ ಇರುವುದರಿಂದ ಅಲ್ಲಿಗೆ ತೆರಳಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಮಹಿಳೆಯನ್ನು ಬಂಧಿಸಿ ಮುಂಬೈಗೆ ಕರೆತರಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ.

ಸದ್ಯಕ್ಕಂತೂ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಸಿಸಿಟಿವಿಯಲ್ಲಿ ಕಾಣಿಸಿದ ವ್ಯಕ್ತಿಯ ಮುಖಕ್ಕೂ, ಪೊಲೀಸರು ಬಂಧಿಸಿರುವ ಆರೋಪಿ ಇಸ್ಲಾಂ ಶೆಹಜಾದ್​ನ ಮುಖಕ್ಕೂ ಸಾಮ್ಯತೆಯೇ ಕಾಣುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪೊಲೀಸರು ತಪ್ಪಾದ ವ್ಯಕ್ತಿಯನ್ನು ಅರೆಸ್ಟ್ ಮಾಡಿರಬಹುದು ಎಂಬ ಶಂಕೆ ಹಲವರಿಗೆ ಇದೆ.

ಇತ್ತೀಚೆಗೆ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್​ನ ಫಿಂಗರ್​ಪ್ರಿಂಟ್​ ಮಾದರಿಯನ್ನು ಪರಿಶೀಲನೆಗೆ ಕಳಿಸಲಾಗಿತ್ತು. ಆದರೆ ಸೈಫ್ ಮನೆಯಲ್ಲಿ ಇರುವ ಬೆರಳಚ್ಚಿಗೂ ಬಂಧಿತ ಆರೋಪಿಯ ಬೆರಳಚ್ಚಿಗೂ ತಾಳೆ ಆಗುತ್ತಿಲ್ಲ ಎಂದು ವರದಿ ಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಇನ್ನಷ್ಟು ಬೆರಳಚ್ಚು ಸ್ಯಾಂಪಲ್​ಗಳನ್ನು ಕಳಿಸಲಾಗಿದೆ. ಅದರ ವರದಿಗಾಗಿ ಕಾಯಲಾಗುತ್ತಿದೆ. ಆರೋಪಿಯು ಬಾಂಗ್ಲಾದೇಶ ಮೂಲದವನು ಎಂಬುದಕ್ಕೂ ಪೊಲೀಸರ ಬಳಿ ದಾಖಲೆ ಇಲ್ಲ ಎಂದು ಆರೋಪ ಪರ ವಕೀಲರು ವಾದ ಮಾಡಿದ್ದಾರೆ.

ಇದನ್ನೂ ಓದಿ: ಸೈಫ್ ಕೇಸ್: ತಪ್ಪು ವ್ಯಕ್ತಿ ಬಂಧಿಸಿದ್ರಾ ಮುಂಬೈ ಪೊಲೀಸರು? ಹೋಲಿಕೆ ಆಗುತ್ತಿಲ್ಲ ಬೆರಳಚ್ಚು

ದರೋಡೆಕೋರರು ದಾಳಿ ಮಾಡಿದ್ದಾಗ ತಮ್ಮ ಕುಟುಂಬದವರನ್ನು ರಕ್ಷಿಸಲು ಸೈಫ್ ಅಲಿ ಖಾನ್ ಪ್ರಯತ್ನಿಸಿದ್ದರು. ಆಗ ಕಳ್ಳರು ಸೈಫ್ ಅಲಿ ಖಾನ್​ಗೆ ಚೂಕು ಇರಿದಿದ್ದರು. ಆ ದಾಳಿಯಲ್ಲಿ ಸೈಫ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಡಿಸ್ಚಾರ್ಜ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us