Mukesh Khanna: ‘ಆದಿಪುರುಷ್​ ತಂಡದವರನ್ನು ಸುಡಬೇಕು’: ಆಕ್ರೋಶದಿಂದ ಹೇಳಿಕೆ ನೀಡಿದ ‘ಶಕ್ತಿಮಾನ್​’ ನಟ ಮುಖೇಶ್​ ಖನ್ನಾ

Adipurush Movie: ‘ಆದಿಪುರುಷ್​’ ಸಿನಿಮಾದಲ್ಲಿ ಅನೇಕ ತಪ್ಪುಗಳು ಇವೆ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ನಟ ಮುಖೇಶ್​ ಖನ್ನಾ ಕೂಡ ಚಿತ್ರತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Mukesh Khanna: ‘ಆದಿಪುರುಷ್​ ತಂಡದವರನ್ನು ಸುಡಬೇಕು’: ಆಕ್ರೋಶದಿಂದ ಹೇಳಿಕೆ ನೀಡಿದ ‘ಶಕ್ತಿಮಾನ್​’ ನಟ ಮುಖೇಶ್​ ಖನ್ನಾ
ಪ್ರಭಾಸ್​, ಮುಖೇಶ್​ ಖನ್ನಾ

Updated on: Jun 21, 2023 | 11:20 AM

ಅನೇಕ ಕಾರಣಗಳಿಂದಾಗಿ ‘ಆದಿಪುರುಷ್​’ ಸಿನಿಮಾ (Adipurush Movie) ಸುದ್ದಿ ಆಗುತ್ತಿದೆ. ಈ ಚಿತ್ರದ ನಿರ್ದೇಶಕ ಓಂ ರಾವತ್​ (Om Raut) ಅವರನ್ನು ಎಲ್ಲರೂ ಟೀಕಿಸುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ಆದಿಪುರುಷ್​’ ಚಿತ್ರದಲ್ಲಿ ರಾಮಾಯಣದ ಕಥೆಯನ್ನು ತಿರುಚಿದ ಕಾರಣದಿಂದ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸಂಭಾಷಣೆ ಬರೆದ ಮನೋಜ್​ ಮುಂತಶೀರ್​ ಅವರ ವಿರುದ್ಧವೂ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ‘ಶಕ್ತಿಮಾನ್​’ ಖ್ಯಾತಿಯ ನಟ ಮುಖೇಶ್​ ಖನ್ನಾ (Mukesh Khanna) ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ಅವರು ಆಕ್ರೋಶಭರಿತವಾಗಿ ಮಾತನಾಡಿದ್ದಾರೆ. ‘ಆದಿಪುರುಷ್​ ತಂಡದವರನ್ನು ಸುಡಬೇಕು’ ಎಂದು ಮುಖೇಶ್​ ಖನ್ನಾ ಹೇಳಿದ್ದಾರೆ.

‘ಆದಿಪುರುಷ್​’ ಸಿನಿಮಾದಲ್ಲಿ ಅನೇಕ ತಪ್ಪುಗಳು ಇವೆ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್​ ಅಲಿ ಖಾನ್​ ಮಾಡಿರುವ ರಾವಣನ ಪಾತ್ರ ಸರಿಯಾಗಿ ಮೂಡಿಬಂದಿಲ್ಲ. ಆಂಜನೇಯನ ಸಂಭಾಷಣೆಗಳು ಕಳಪೆ ಆಗಿವೆ. ಕೆಲವು ಪಾತ್ರವನ್ನು ಗ್ಲಾಮರಸ್​ ಆಗಿ ತೋರಿಸಲಾಗಿದೆ. ಇಂಥ ಅನೇಕ ಅಸಂಬದ್ಧ ಅಂಶಗಳನ್ನು ಜನರು ವಿರೋಧಿಸುತ್ತಿದ್ದಾರೆ. ಮುಖೇಶ್​ ಖನ್ನಾ ಅವರಿಗೂ ‘ಆದಿಪುರುಷ್​’ ಚಿತ್ರತಂಡದ ಮೇಲೆ ಕೋಪ ಬಂದಿದೆ.

ಇದನ್ನೂ ಓದಿ: ಐದನೇ ದಿನಕ್ಕೆ ಸಂಪೂರ್ಣವಾಗಿ ನೆಲಕಚ್ಚಿದ ‘ಆದಿಪುರುಷ್’; ಕೈಸುಟ್ಟುಕೊಂಡ ನಿರ್ಮಾಪಕ?

‘ಈ ಸಿನಿಮಾ ಸಂಪೂರ್ಣ ಕಳಪೆ ಆಗಿದೆ. ಇಂಥ ಸಿನಿಮಾ ಮಾಡಿದವರನ್ನು ಕ್ಷಮಿಸಬಾರದು. ನನ್ನ ಚಾನೆಲ್​ನಲ್ಲಿ ನಾನು ನಿನ್ನೆ ಹೇಳಿದ್ದೇನೆ. ಇವರನ್ನು 50 ಡಿಗ್ರಿ ಸೆಲ್ಸಿಯಸ್​ನಲ್ಲಿ ಸುಡಬೇಕು. ಇಷ್ಟೆಲ್ಲ ಟೀಕೆ ಎದುರಾದಾಗ ಅವರು ಮುಖ ಮುಚ್ಚಿಕೊಳ್ಳಬೇಕಿತ್ತು. ಆದರೆ ಅವರು ಮುಂದೆ ಬಂದು ಸಮರ್ಥನೆ ನೀಡುತ್ತಿದ್ದಾರೆ. ಸನಾತನ ಧರ್ಮಕ್ಕಾಗಿ ಇದನ್ನೆಲ್ಲ ಮಾಡಿರುವುದಾಗಿ ಅವರ ಹೇಳುತ್ತಿದ್ದಾರೆ. ನಮ್ಮ ಸನಾತನ ಧರ್ಮಕ್ಕಿಂತಲೂ ನಿನ್ನ ಸನಾತನ ಧರ್ಮ ಭಿನ್ನವಾಗಿದೆಯಾ? ವಾಲ್ಮೀಕಿಯ ರಾಮಾಯಣ ಇದೆ, ತುಳಸಿದಾಸರ ರಾಮಾಯಣ ಇದೆ. ಇದು ತಮ್ಮದೇ ರಾಮಾಯಣ ಎಂದು ಈ ತಂಡದವರು ಹೇಳುತ್ತಿದ್ದಾರೆ’ ಎಂದಿದ್ದಾರೆ ಮುಖೇಶ್​ ಖನ್ನಾ.

ಇದನ್ನೂ ಓದಿ: Manoj Muntashir: ‘ಆದಿಪುರುಷ್​’ ಚಿತ್ರಕ್ಕೆ ಸಂಭಾಷಣೆ ಬರೆದ ಲೇಖಕನಿಗೆ ಕೊಲೆ ಬೆದರಿಕೆ; ಭದ್ರತೆ ನೀಡಿದ ಮುಂಬೈ ಪೊಲೀಸರು

ಈ ಸಿನಿಮಾದಲ್ಲಿ ಕೃತಿ ಸನೋನ್​ ಅವರು ಸೀತೆಯ ಪಾತ್ರ ಮಾಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಕಾಣಿಸಿಕೊಂಡಿದ್ದಾರೆ. ಸನ್ನಿ ಸಿಂಗ್​ ಅವರು ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಆಂಜನೇಯನ ಪಾತ್ರದ ಸಂಭಾಷಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಬದಲಾಯಿಸಲು ಚಿತ್ರತಂಡ ಒಪ್ಪಿಕೊಂಡಿದೆ. ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್​ ತಗ್ಗುತ್ತಿದೆ. ಆದರೆ ಟ್ರೋಲ್​ಗಳು ಹೆಚ್ಚಾಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us