AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದನೇ ದಿನಕ್ಕೆ ಸಂಪೂರ್ಣವಾಗಿ ನೆಲಕಚ್ಚಿದ ‘ಆದಿಪುರುಷ್’; ಕೈಸುಟ್ಟುಕೊಂಡ ನಿರ್ಮಾಪಕ?

Adipurush Movie Collection: ಸೋಮವಾರ ‘ಆದಿಪುರುಷ್’ ಕೇವಲ 20 ಕೋಟಿ ರೂಪಾಯಿ ಗಳಿಸಿತು. ಮಂಗಳವಾರ ಈ ಚಿತ್ರ 10 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಇಂದು, ನಾಳೆ ಸಿನಿಮಾದ ಗಳಿಕೆ ಒಂದಂಕಿಗೆ ಇಳಿದರೂ ಅಚ್ಚರಿ ಇಲ್ಲ.

ಐದನೇ ದಿನಕ್ಕೆ ಸಂಪೂರ್ಣವಾಗಿ ನೆಲಕಚ್ಚಿದ ‘ಆದಿಪುರುಷ್’; ಕೈಸುಟ್ಟುಕೊಂಡ ನಿರ್ಮಾಪಕ?
ಆದಿಪುರುಷ್ ಟೀಂ
ರಾಜೇಶ್ ದುಗ್ಗುಮನೆ
|

Updated on: Jun 21, 2023 | 10:54 AM

Share

ಪ್ರಭಾಸ್ (Prabhas) ರಾಮನಾಗಿ ನಟಿಸಿರುವ ‘ಆದಿಪುರುಷ್’ ಸಿನಿಮಾ (Adipurush Movie) ನೆಗೆಟಿವ್ ವಿಮರ್ಶೆಯ ಮಧ್ಯೆಯೂ ಮೊದಲ ವೀಕೆಂಡ್​ನಲ್ಲಿ ಅಬ್ಬರಿಸಿತು. ಮೊದಲ ಮೂರು ದಿನದಲ್ಲಿ ಸಿನಿಮಾ 300+ ಕೋಟಿ ರೂಪಾಯಿ ಕಮಾಯಿ ಮಾಡಿದೆ ಎನ್ನಲಾಗಿದೆ. ಆದರೆ, ವಾರದ ದಿನಗಳಲ್ಲಿ ಸಿನಿಮಾ ನೆಲಕಚ್ಚಿದೆ. ಐದನೇ ದಿನದ ಬಾಕ್ಸ್ ಆಫೀಸ್ ಲೆಕ್ಕಾಚಾರ ಸಿಕ್ಕಿದೆ. ಮಂಗಳವಾರ (ಜೂನ್ 20) ಭಾರತದಲ್ಲಿ ‘ಆದಿಪುರುಷ್’ ಕೇವಲ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನೂರಾರು ಕೋಟಿ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರು ಈ ಚಿತ್ರದಿಂದ ಸಂಕಷ್ಟ ಎದುರಿಸಿದ್ದಾರೆ.

ಟಿ-ಸೀರಿಸ್​ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಓಂ ರಾವತ್ ಮೊದಲಾದವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಣದಲ್ಲಿ ಭಾಗಿ ಆದ ಓಂ ರಾವತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮಾಯಣದ ಮೂಲ ಕಥೆಯನ್ನು ತಿರುಚಿದ್ದು, ಪಾತ್ರಗಳನ್ನು ಮನಬಂದಂತೆ ತೋರಿಸಿದ್ದು ಸಿನಿಮಾಗೆ ದೊಡ್ಡ ಹಿನ್ನಡೆ ಆಗಿದೆ. ಬಾಕ್ಸ್ ಆಫೀಸ್​ ಮೇಲೂ ನೆಗೆಟಿವ್ ವಿಮರ್ಶೆ ನೇರ ಪ್ರಭಾವ ಬೀರಿದೆ.

ಮೊದಲ ಮೂರು ದಿನಗಳಲ್ಲಿ ಭಾರತದಲ್ಲಿ ಈ ಸಿನಿಮಾ 220 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಸೋಮವಾರ (ಜೂನ್ 19) ಕೇವಲ 20 ಕೋಟಿ ರೂಪಾಯಿ ಗಳಿಸಿತು. ಮಂಗಳವಾರ (ಜೂನ್ 20) ಚಿತ್ರ 10 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಇಂದು, ನಾಳೆ ಸಿನಿಮಾದ ಗಳಿಕೆ ಒಂದಂಕಿಗೆ ಇಳಿದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ಪೊಲೀಸ್ ಭದ್ರತೆ ಪಡೆದು ಹನುಮಂತ ದೇವರೇ ಅಲ್ಲ; ಎಂದ ಆದಿಪುರುಷ್ ಸಂಭಾಷಣೆಕಾರ

‘ಆದಿಪುರುಷ್’ ಸಿನಿಮಾದ ಬಜೆಟ್ 500+ ಕೋಟಿ ರೂಪಾಯಿ ಇದೆ. ಈ ಚಿತ್ರದ ಸ್ಯಾಟಲೈಟ್ ಹಕ್ಕು, ಒಟಿಟಿ ಹಕ್ಕು ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ. ಇದರಿಂದ ನಿರ್ಮಾಪಕರಿಗೆ ದೊಡ್ಡ ಮೊತ್ತದ ಹಣ ಬಂದಿದೆ. ಆದರೆ, ಬಾಕ್ಸ್ ಆಫೀಸ್​ ಗಳಿಕೆಯಲ್ಲಿ ಚಿತ್ರ ಏಳ್ಗೆ ಕಾಣುತ್ತಿಲ್ಲ. ಒಟ್ಟಾರೆ ಬಿಸ್ನೆಸ್​​ನಿಂದ ‘ಆದಿಪುರುಷ್’ ನಿರ್ಮಾಪಕರು ನಷ್ಟ ಅನುಭವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, 3 ವರ್ಷದ ಶ್ರಮ ವ್ಯರ್ಥವಾಗಿದೆ.

ಇನ್ನು, ಚಿತ್ರಕ್ಕೆ ಬ್ಯಾನ್ ಭೀತಿ ಕೂಡ ಕಾಡಿದೆ. ಈ ಚಿತ್ರದಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದ್ದು, ಸಿನಿಮಾ ಬ್ಯಾನ್​ಗೆ ಕೋರಲಾಗಿದೆ. ಟೀಂ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More