AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಭದ್ರತೆ ಪಡೆದು ‘ಹನುಮಂತ ದೇವರೇ ಅಲ್ಲ’ ಎಂದ ಆದಿಪುರುಷ್ ಸಂಭಾಷಣೆಕಾರ

Adipurush: ಆದಿಪುರುಷ್ ಸಿನಿಮಾಕ್ಕೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಶಿರ್ ಹನುಮಂತ ದೇವರೇ ಅಲ್ಲ ಎಂದಿದ್ದಾರೆ.

ಪೊಲೀಸ್ ಭದ್ರತೆ ಪಡೆದು 'ಹನುಮಂತ ದೇವರೇ ಅಲ್ಲ' ಎಂದ ಆದಿಪುರುಷ್ ಸಂಭಾಷಣೆಕಾರ
ಹನುಮ
ಮಂಜುನಾಥ ಸಿ.
|

Updated on: Jun 20, 2023 | 8:17 PM

Share

ಆದಿಪುರುಷ್ (Adipurush) ಸಿನಿಮಾದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಟೀಕೆಗಳು ಹೆಚ್ಚಾಗುತ್ತಲೂ ಆದಿಪುರುಷ್ ಚಿತ್ರತಂಡದ ನಿಜಬಣ್ಣವೂ ನಿಧಾನಕ್ಕೆ ಬಯಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನ ಶ್ರೀರಾಮನನ್ನು, ಹಿಂದೂ ಸಂಸ್ಕೃತಿಯನ್ನು ಹೊಗಳುತ್ತಿದ್ದ ಚಿತ್ರತಂಡದ ಕೆಲವು ಮುಖ್ಯ ತಂತ್ರಜ್ಞರು ಈಗ ತುಸು ಭಿನ್ನವಾಗಿ ಮಾತನಾಡುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಿನಿಮಾಕ್ಕೆ ಹಾಡುಗಳು ಹಾಗೂ ಸಂಭಾಷಣೆ (dialogue) ಬರೆದಿರುವ ಮನೋಜ್ ಮುಂತಶಿರ್ (Manoj Muntashir) ಸಿನಿಮಾದ ಪರವಾಗಿ ಮಾತನಾಡುತ್ತಾ ನೀಡಿರುವ ಹೇಳಿಕೆ ಈಗಾಗಲೇ ಆದಿಪುರುಷ್ ಸಿನಿಮಾದ ಮೇಲೆ ಸಿಟ್ಟಾಗಿರುವ ಪ್ರೇಕ್ಷಕರನ್ನು ಇನ್ನಷ್ಟು ಸಿಟ್ಟಿಗೆಬ್ಬಿಸಿದೆ.

ಆದಿಪುರುಷ್ ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾದ ಕೆಲ ಸಂಭಾಷಣೆಗಳಿಗೆ ತೀವ್ರ ಆಕ್ಷೇಪ ರಾಮ ಭಕ್ತರಿಂದ ಹಾಗೂ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಸಿನಿಮಾಕ್ಕೆ ಸಂಭಾಷಣೆ ಬರೆದಿರುವ ಮನೋಜ್ ಮುಂತಶಿರ್​ಗೆ ಜೀವ ಬೆದರಿಕೆ ಕರೆಗಳು ಸಹ ಬಂದಿದ್ದವಂತೆ. ಇದೇ ಕಾರಣಕ್ಕೆ ಮುಂಬೈ ಪೊಲೀಸರು ಮನೋಜ್​ಗೆ ಭದ್ರತೆ ಒದಗಿಸಿದ್ದಾರೆ. ಆದರೆ ಮನೋಜ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮನೋಜ್, ”ಹನುಮಂತ ದೇವರೇ ಅಲ್ಲ ಆತ ಭಕ್ತನಷ್ಟೆ. ಆದರೆ ನಾವು ಹನುಮಂತನನ್ನು ದೇವರು ಮಾಡಿದ್ದೇವೆ ಏಕೆಂದರೆ ಅಷ್ಟು ಶ್ರೇಷ್ಠವಾದ ಭಕ್ತಿ ಹನುಮಂತನಿಗೆ ರಾಮನ ಮೇಲಿತ್ತು ಎಂಬ ಕಾರಣಕ್ಕೆ” ಎಂದಿದ್ದಾರೆ. ಮನೋಜ್​ರ ಈ ಹೇಳಿಕೆಯ ಬಗ್ಗೆಯೂ ಆಕ್ಷೇಪಣೆ ವ್ಯಕ್ತವಾಗಿದೆ.

ಇದನ್ನೂ ಓದಿ:Adipurush Movie: ‘ಆದಿಪುರುಷ್ ಸಿನಿಮಾ ಬ್ಯಾನ್ ಮಾಡಿ’; ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಆದಿಪುರುಷ್ ಸಿನಿಮಾದಲ್ಲಿ ಹನುಮಂತ ಹೇಳುವ ಕೆಲ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಉದ್ದನೆಯ ಪೋಸ್ಟ್ ಹಂಚಿಕೊಂಡಿದ್ದ ಮನೋಜ್, ”ಆದಿಪುರುಷ್ ಸಿನಿಮಾಕ್ಕೆ ಸುಮಾರು ನಾಲ್ಕು ಸಾವಿರ ಸಾಲುಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಒಂದೈದು ಸಾಲುಗಳಿಂದ ಕೆಲವರ ಭಾವನೆಗೆ ಧಕ್ಕೆ ಆಗಿರಬಹುದು. ಆದರೆ ಉಳಿದ ಸಾಲುಗಳಲ್ಲಿ ನಾನು ಪ್ರಭು ಶ್ರೀರಾಮನನ್ನು ವೈಭವೀಕರಿಸಿದ್ದೇನೆ, ಸೀತಾಮಾತೆಯನ್ನು ಆರಾಧಿಸಿದ್ದೇನೆ ಅದಕ್ಕೆ ನನಗೆ ಗೌರವ ಸಿಗಬಹುದು ಎಂದುಕೊಂಡಿದ್ದೆ ಆದರೆ ಸಿಗಲಿಲ್ಲ” ಎಂದಿದ್ದಾರೆ. ನನ್ನ ಸ್ವಂತ ಅಣ್ಣ-ತಮ್ಮಂದಿರು ನನ್ನ ವಿರುದ್ಧ ಕೀಳು ಅಭಿರುಚಿಯ ಪದಗಳನ್ನು ಬಳಸುತ್ತಿದ್ದಾರೆ. ಯಾರಿಗಾಗಿ ನಾನು ಕಾರ್ಯಕ್ರಮಗಳಿಗೆ ಹೋಗಿ ಕವನಗಳನ್ನು ಓದಿದ್ದೆನೊ ಅವರೂ ಸಹ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.ಮೂರು ಗಂಟೆಯ ಸಿನಿಮಾದಲ್ಲಿ, ನಿಮ್ಮ ಕಲ್ಪನೆಗೆ ಒಗ್ಗದ ಮೂರು ನಿಮಿಷದ ಸನ್ನಿವೇಶದಲ್ಲಿ ನಾನು ಬರೆದಿರಬಹುದು. ಹಾಗೆಂದ ಮಾತ್ರಕ್ಕೆ ನನ್ನ ಮೇಲೆ ಇಷ್ಟು ವಿಷ ಕಾರುವುದೇ? ಸಿನಿಮಾದ ಶಿವೋಹಂ ಹಾಡು ಕೇಳಿಲ್ಲವೆ? ಜೈ ಶ್ರೀರಾಮ್, ರಾಮ್ ಸಿಯಾರಾಮ್ ಹಾಡು ಕೇಳಿಲ್ಲವೆ ಅದನ್ನು ಬರೆದಿರುವುದು ನಾನೇ. ಅದು ಮಾತ್ರವೇ ಅಲ್ಲ. ಥೇರಿ ಮಿಟ್ಟಿ ಮೇ ಮಿಲ್ ಜಾವಾ, ದೇಶ್ ಮೇರೆ ಹಾಡು ಬರೆದಿರುವುದು ಸಹ ನಾನೇ. ನಿಮ್ಮ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ನಾವು ಸನಾತನ ಧರ್ಮದ ಸೇವೆಗೆಂದು ಆದಿಪುರುಷ್ ಮಾಡಿದ್ದೇವೆ. ನಾವುಗಳೇ ಹೀಗೆ ಒಬ್ಬರ ಎದುರು ಒಬ್ಬರು ನಿಂತರೆ ಸನಾತನ ಉಳಿಯುವುದಿಲ್ಲ” ಎಂದಿದ್ದರು. ಜೊತೆಗೆ ತಾವು ಸಿನಿಮಾದ ಕೆಲ ಸಂಭಾಷಣೆಗಳನ್ನು ಬದಲಾಯಿಸುತ್ತಿರುವುದಾಗಿಯೂ ಹೇಳಿದ್ದಾರೆ.

ಆದಿಪುರುಷ್ ಸಿನಿಮಾವನ್ನು ಹಲವರು ಟೀಕಿಸಿದ್ದಾರೆ. ಕೆಲವರು ಸಿನಿಮಾ ನಿಷೇಧಕ್ಕೆ ಕರೆ ನೀಡಿದ್ದಾರೆ. ಹಿಂದೂ ಸೇನಾ ಸೇರಿದಂತೆ ಕೆಲವು ಸಂಘಟನೆಗಳು ಸಿನಿಮಾ ವಿರುದ್ಧ ದೂರು ದಾಖಲಿಸಿವೆ. ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್​ನವರು ಪ್ರಧಾನಿ ಮೋದಿಗೆ ಪತ್ರ ಬರೆದು ಸಿನಿಮಾ ಪ್ರದರ್ಶನವನ್ನು ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಎಲ್ಲ ಟೀಕೆಗಳ ನಡುವೆಯೂ ಆದಿಪುರುಷ್ ಸಿನಿಮಾದ ಕಲೆಕ್ಷನ್ ಮೊದಲ ಮೂರು ದಿನ ಅತ್ಯುತ್ತಮವಾಗಿಯೇ ಇತ್ತು. ಸೋಮವಾರ ತುಸು ಇಳಿಮುಖ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ