ರಾತ್ರಿ ಪೂರ್ತಿ ಕುಡಿದು, ಬೆಳೆಗೆದ್ದು ನಾನು ದೇವರು ಎಂದರೆ ಯಾರೂ ಒಪ್ಪಲ್ಲ: ಪ್ರಭಾಸ್​ಗೆ ವಿವೇಕ್ ಅಗ್ನಿಹೋತ್ರಿ ಟಾಂಗ್

Vivek Agnihotri: ರಾತ್ರಿ ಪೂರ್ತಿ ಕುಡಿದು ಬೆಳೆಗೆದ್ದು ನಾನು ದೇವರು ಎಂದರೆ ಯಾರೂ ಒಪ್ಪಲ್ಲ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಟ ಪ್ರಭಾಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ರಾತ್ರಿ ಪೂರ್ತಿ ಕುಡಿದು, ಬೆಳೆಗೆದ್ದು ನಾನು ದೇವರು ಎಂದರೆ ಯಾರೂ ಒಪ್ಪಲ್ಲ: ಪ್ರಭಾಸ್​ಗೆ ವಿವೇಕ್ ಅಗ್ನಿಹೋತ್ರಿ ಟಾಂಗ್
ವಿವೇಕ್ ಅಗ್ನಿಹೋತ್ರಿ

Updated on: Jul 27, 2023 | 10:20 PM

ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಸಿನಿಮಾ ಮೂಲಕ ಜನಪ್ರಿಯವಾಗಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಬಾಲಿವುಡ್ ವಿರುದ್ಧ, ಬಾಲಿವುಡ್​ನ ಖಾನ್​ಗಳ ವಿರುದ್ಧ, ಎಡಪಂಥೀಯರ ವಿರುದ್ಧ ಆಗಾಗ್ಗೆ ವಾಗ್ದಾಳಿ, ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ನಟ ಪ್ರಭಾಸ್ (Prabhas) ವಿರುದ್ಧ ಹಾಗೂ ‘ಆದಿಪುರುಷ್’ ತಂಡದ ವಿರುದ್ಧವೂ ಪರೋಕ್ಷವಾಗಿ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ.

ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿವೇಕ್ ಅಗ್ನಿಹೋತ್ರಿ, ‘ಆದಿಪುರುಷ್’ ಸಿನಿಮಾ ಫ್ಲಾಪ್ ಆದ ಬಗ್ಗೆ ಮಾತನಾಡುತ್ತಾ, ”ಬೆಳ್ಳಿ ತೆರೆ ಮೇಲೆ ದೇವರ ವೇಷತೊಟ್ಟು ಬಂದು, ನಾನು ದೇವರು ಎಂದರೆ ಯಾರೂ ನಂಬಲ್ಲ. ರಾತ್ರಿ ಕುಡಿದು ಟೈಟ್ ಆಗಿ ಮನೆಗೆ ಹೋಗಿ ಬೆಳೆಗೆದ್ದು ಬಂದು ನಾನು ದೇವರು ಎಂದರೆ ನಂಬುವಷ್ಟು ಜನರು ಮೂರ್ಖರಲ್ಲ” ಎಂದಿದ್ದಾರೆ. ಆ ಮೂಲಕ ಪ್ರಭಾಸ್, ರಾಮನ ಪಾತ್ರ ಮಾಡುವಾಗ ಶಿಸ್ತಿನಿಂದ ನಡೆದುಕೊಂಡಿಲ್ಲ, ಕುಡುಕ ವ್ಯಕ್ತಿಗೆ ರಾಮನ ಪಾತ್ರ ನೀಡಲಾಗಿದೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

ಮುಂದುವರೆದು ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ”ನೀನು ಮಾಡುತ್ತಿರುವ ಕೆಲಸವನ್ನು ನೀನು ಮೊದಲು ನಂಬಬೇಕು. ಈಗ ಇದು ನಡೆಯುತ್ತಿದೆ ಎಂದು ಮಾಡಲು ಹೊರಟರೆ ಹೀಗೆಯೇ ಆಗುತ್ತದೆ. 100% ನಂಬಿಕೆ ಇದ್ದರಷ್ಟೆ ಇಂಥಹಾ ಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು” ಎಂದಿದ್ದಾರೆ. ಆ ಮೂಲಕ ಬಲಪಂಥೀಯ ಟ್ರೆಂಡ್​ನ ಸಿನಿಮಾಗಳು ಓಡುತ್ತಿವೆ, ರಾಮ ಭಕ್ತರು ಸಿನಿಮಾ ನೋಡುತ್ತಾರೆ ಎಂಬ ಕಾರಣಕ್ಕೆ ಓಂ ರಾವತ್ ‘ಆದಿಪುರುಷ್’ ಸಿನಿಮಾ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:Prabhas: 50 ದಿನಗಳ ಬಳಿಕ ಭಾರತಕ್ಕೆ ಮರಳಿದ ಪ್ರಭಾಸ್; ‘ಸಲಾರ್’ ತಂಡದ ಚಿಂತೆ ದೂರ

ಅಲ್ಲದೆ, ”ರಾಮಾಯಣ, ಮಹಾಭಾರತ ಸಿನಿಮಾ ಮಾಡಲು ಸ್ಟಾರ್​ಗಳನ್ನು ಹಾಕಿಕೊಂಡರೆ ಅದು ಖಂಡಿತ ಯಶಸ್ವಿಯಾಗುವುದಿಲ್ಲ, ಪೂರ್ಣವೂ ಆಗುವುದಿಲ್ಲ. ಅದಕ್ಕೆ ಕಾರಣವೂ ಇದೆ. ಸುಖಾ ಸುಮ್ಮನೆ, 5000 ವರ್ಷಗಳಿಂದಲೂ ರಾಮಾಯಣ ಹಾಗೂ ಮಹಾಭಾರತ ಭಾರತದ ಜನಗಳ ಸ್ಮೃತಿಯಲ್ಲಿ ಇಲ್ಲ. ಅದಕ್ಕೆ ಅದರದ್ದೇ ಆದ ಕಾರಣಗಳಿವೆ, ಅವುಗಳನ್ನೆಲ್ಲ ಅಭ್ಯಾಸ ಮಾಡಿ ಸಿನಿಮಾ ಮಾಡಲು ಮುಂದಾಗಬೇಕು, ಆದರೆ ಭಾರತದಲ್ಲಿ ಅಂಥಹಾ ಆಳ ಅಧ್ಯಯನ ಆಗುತ್ತಿಲ್ಲ” ಎಂದಿದ್ದಾರೆ ವಿವೇಕ್.

ವಿವೇಕ್​ರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆ ಆದಾಗ ಪ್ರಭಾಸ್​ರ ‘ರಾಧೆ- ಶ್ಯಾಮ್’ ಸಿನಿಮಾ ಬಿಡುಗಡೆ ಆಗಿತ್ತು. ‘ರಾಧೆ-ಶ್ಯಾಮ್’ ಸೋತು, ‘ದಿ ಕಾಶ್ಮೀರ್ ಫೈಲ್ಸ್’ ಗೆದ್ದಿತ್ತು. ಪ್ರಭಾಸ್ ವಿರುದ್ಧ ಆಗ ಗೆದ್ದಿದ್ದೆ, ಈಗ ‘ಸಲಾರ್’ ಸಿನಿಮಾ ಬಿಡುಗಡೆ ಆದಾಗಲೂ ನನ್ನ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಗೆಲ್ಲಲಿದೆ ಎಂದು ವಿವೇಕ್ ಹೇಳಿರುವಂತೆ ಪೋಸ್ಟರ್ ಒಂದು ಇತ್ತೀಚೆಗೆ ಹರಿದಾಡಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ವಿವೇಕ್ ಹೇಳಿದ್ದು, ಪ್ರಭಾಸ್ ದೊಡ್ಡ ಸ್ಟಾರ್, ಭಾರಿ ಬಜೆಟ್ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ ಎಂದು ಹೊಗಳಿ, ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನವನ್ನು ವಿವೇಕ್ ಮಾಡಿದ್ದಾರೆ. ಆದರೆ ವಿವೇಕ್​ರ ಹೇಳಿಕೆಯಿಂದ ಪ್ರಭಾಸ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿವೇಕ್ ಈ ಹಿಂದೆ, ಪ್ರಭಾಸ್ ಒಳ್ಳೆಯ ನಟನಲ್ಲ ಎಂದು ಸಂವಾದ ಒಂದರಲ್ಲಿ ಹೇಳಿದ್ದರು. ಆಗಲೂ ಸಹ ಪ್ರಭಾಸ್ ಅಭಿಮಾನಿಗಳು ಬೇಸರ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us