ಸೆನ್ಸಾರ್ ಬೋರ್ಡ್​ನಲ್ಲಿ ಲಂಚಾವತಾರ; ‘ತಕ್ಷಣಕ್ಕೆ ತನಿಖೆ ಮಾಡಿ’ ಎಂದ ಕೇಂದ್ರ ಸರ್ಕಾರ

|

Updated on: Sep 30, 2023 | 9:40 AM

ತಮಿಳಿನ ‘ಮಾರ್ಕ್ ಆ್ಯಂಟನಿ’ ಚಿತ್ರವನ್ನು ಹಿಂದಿಗೆ ಡಬ್ ಮಾಡಲು ಚಿತ್ರತಂಡ ಮುಂದಾಗಿತ್ತು. ಇದಕ್ಕೆ ಪ್ರಮಾಣಪತ್ರ ಪಡೆಯಲು ಸಿನಿಮಾ ತಂಡ ಪ್ರಯತ್ನಿಸಿತು. ತಕ್ಷಣಕ್ಕೆ ಪ್ರಮಾಣ ಪತ್ರ ಬೇಕಾದರೆ 6.5 ಲಕ್ಷ ರೂಪಾಯಿ ಹಣ ನೀಡುವಂತೆ ಅಲ್ಲಿಯವರು ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಆರೋಪಿಸಿದ್ದರು.

ಸೆನ್ಸಾರ್ ಬೋರ್ಡ್​ನಲ್ಲಿ ಲಂಚಾವತಾರ; ‘ತಕ್ಷಣಕ್ಕೆ ತನಿಖೆ ಮಾಡಿ’ ಎಂದ ಕೇಂದ್ರ ಸರ್ಕಾರ
ವಿಶಾಲ್
Follow us on

ತಮಿಳು ನಟ ವಿಶಾಲ್ (Vishal) ಅವರು ಇತ್ತೀಚೆಗೆ ಗಂಭೀರ ಆರೋಪ ಒಂದನ್ನು ಮಾಡಿದ್ದರು. ಸಿನಿಮಾಗೆ ಸೆನ್ಸಾರ್ ಮಾಡುವ ಸಿಬಿಎಫ್​ಸಿ ಲಂಚ ಪಡೆದಿದೆ ಎಂದು ಅವರು ಆರೋಪಿಸಿದ್ದರು. ಈ ವಿಚಾರವನ್ನು ಕೇಂದ್ರ ಸರ್ಕಾರ (Central Government) ಗಂಭೀರವಾಗಿ ಪರಿಗಣಿಸಿದೆ. ತಕ್ಷಣಕ್ಕೆ ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ. ಸದ್ಯ ಈ ವಿಚಾರ ಸಾಕಷ್ಟು ಸೆನ್ಸೇಶನ್ ಸೃಷ್ಟಿ ಮಾಡಿದೆ. ಯಾರ ಯಾರ ಹೆಸರು ತನಿಖೆಯಲ್ಲಿ ಹೊರ ಬರಲಿದೆ ಎಂಬ ಪ್ರಶ್ನೆ ಅನೇಕರಲ್ಲಿದೆ.

ತಮಿಳಿನ ‘ಮಾರ್ಕ್ ಆ್ಯಂಟನಿ’ ಚಿತ್ರವನ್ನು ಹಿಂದಿಗೆ ಡಬ್ ಮಾಡಲು ಚಿತ್ರತಂಡ ಮುಂದಾಗಿತ್ತು. ಇದಕ್ಕೆ ಪ್ರಮಾಣಪತ್ರ ಪಡೆಯಲು ಸಿನಿಮಾ ತಂಡ ಪ್ರಯತ್ನಿಸಿತು. ತಕ್ಷಣಕ್ಕೆ ಪ್ರಮಾಣ ಪತ್ರ ಬೇಕಾದರೆ 6.5 ಲಕ್ಷ ರೂಪಾಯಿ ಹಣ ನೀಡುವಂತೆ ಅಲ್ಲಿಯವರು ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಖ್ಯಾತ ನಟನ ಪರಿಸ್ಥಿತಿಯೇ ಈ ರೀತಿ ಆದರೆ, ಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

‘ಭ್ರಷ್ಟಾಚಾರ ಸಹಿಸುವ ಮಾತೇ ಇಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಕರಣದ ವಿಚಾರಣೆ ನಡೆಸಲು ಸಚಿವಾಲಯದ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಟ್ವೀಟ್ ಮಾಡಿದೆ. ಈ ರೀತಿಯ ಅನುಭವಗಳು ಇನ್ನೂ ಅನೇಕರಿಗೆ ಆಗಿರಬಹುದು. ಅಂಥವರು ಮುಂದೆ ಬಂದು ತಮಗಾದ ಕಷ್ಟವನ್ನು ಹೇಳಿಕೊಳ್ಳಲು ಸಚಿವಾಲಯ ಮನವಿ ಮಾಡಿದೆ. ವಿಶಾಲ್ ಅವರು ಹಣ ನೀಡಿದ ವಿವರ ಮತ್ತಿತ್ಯಾದಿ ವಿಚಾರಗಳನ್ನು ಸಾಕ್ಷಿ ಸಮೇತ ನೀಡಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಲಂಚ ಪಡೆದವರಿಗೆ ಶಿಕ್ಷೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಮಾರ್ಕ್ ಆ್ಯಂಟನಿ’ ಶೂಟಿಂಗ್ ವೇಳೆ ಅವಘಡ: ಕೂದಲೆಳೆ ಅಂತರದಲ್ಲಿ ಪಾರಾದ ನಟ ವಿಶಾಲ್

‘ಮಾರ್ಕ್ ಆ್ಯಂಟನಿ’ ಸಿನಿಮಾದಲ್ಲಿ ವಿಶಾಲ್, ಎಸ್​ಜೆ ಸೂರ್ಯ ಮೊದಲಾದವರು ನಟಿಸಿದ್ದಾರೆ. ರೀತು ವರ್ಮಾ ಚಿತ್ರದ ನಾಯಕಿ. ಅಧಿಕ್ ರವಿಚಂದ್ರನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ಸೈನ್ಸ್ ಫಿಕ್ಷನ್ ಕಥೆಯನ್ನು ಚಿತ್ರ ಒಳಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Sat, 30 September 23