ಚಿರಂಜೀವಿ ಸಿನಿಮಾ ಕಂಟೆಂಟ್ ಲೀಕ್: ಖಡಕ್ ಎಚ್ಚರಿಕೆ ಕೊಟ್ಟ ನಿರ್ಮಾಣ ಸಂಸ್ಥೆ

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರ 157ನೇ ಸಿನಿಮಾದ ಚಿತ್ರೀಕರಣದ ಸೆಟ್‌ನ ಚಿತ್ರಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿವೆ. ಇದರಿಂದ ಸಿನಿಮಾದ ಬಿಡುಗಡೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ನಿರ್ಮಾಣ ಸಂಸ್ಥೆಗಳು ಲೀಕ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಚಿರಂಜೀವಿ ಸಿನಿಮಾ ಕಂಟೆಂಟ್ ಲೀಕ್: ಖಡಕ್ ಎಚ್ಚರಿಕೆ ಕೊಟ್ಟ ನಿರ್ಮಾಣ ಸಂಸ್ಥೆ
Megastar Chiranjeevi

Updated on: Jul 19, 2025 | 2:55 PM

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ‘ವಿಶ್ವಂಭರ’ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದಾಗಿ ರಿಲೀಸ್ ಮುಂದಕ್ಕೆ ಹೋಗಲಾಗುತ್ತದೆ. ‘ವಿಶ್ವಂಭರ’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿರಂಜೀವಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದು ಚಿರಂಜೀವಿ ನಟನೆಯ 157ನೇ ಸಿನಿಮಾ ಆಗಿರಲಿದ್ದು, ಸಿನಿಮಾ ಅನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಕೆಲ ವಾರಗಳಷ್ಟೆ ಆಗಿದ್ದು, ಅಷ್ಟರಲ್ಲೇ ಸಿನಿಮಾಕ್ಕೆ ಕೆಲವರ ಕಾಟ ಶುರುವಾಗಿದೆ.

ಚಿರಂಜೀವಿಯ 157ನೇ ಸಿನಿಮಾಕ್ಕಾಗಿ ಭಾರಿ ದೊಡ್ಡ ಸೆಟ್ ಅನ್ನು ನಿರ್ಮಾಣ ಮಾಡಲಾಗಿದೆ. ಸೆಟ್​ ಬಲು ಅಪರೂಪವಾಗಿದ್ದು, ಸಿನಿಮಾನಲ್ಲಿ ಸೆಟ್ ಸಹ ಬಹಳ ಮುಖ್ಯವಾದ ಆಕರ್ಷಣೆಯ ಬಿಂದುವಾಗಿದೆ. ಆದರೆ ಕೆಲವರು ಸಿನಿಮಾದ ಸೆಟ್​ನ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಸೆಟ್​ನ ಚಿತ್ರಗಳ ಜೊತೆಗೆ ಸಿನಿಮಾದ ಶೂಟಿಂಗ್​ನ ದೃಶ್ಯಗಳನ್ನು ಸಹ ಲೀಕ್ ಮಾಡಿ ಸಿನಿಮಾಕ್ಕೆ ಸಮಸ್ಯೆ ನೀಡಿದ್ದಾರೆ. ಆದರೆ ಇದನ್ನು ಸಿನಿಮಾ ನಿರ್ಮಾಣ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ.

ಶೈನ್ ಸ್ಕ್ರೀನ್ ಮತ್ತು ಗೋಲ್ಡ್ ಬಾಕ್ಸ್ ನಿರ್ಮಾಣ ಸಂಸ್ಥೆಗಳು ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಎರಡೂ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಚಿರಂಜೀವಿ ಅವರು 157ನೇ ಸಿನಿಮಾ ಸೆಟ್​ನ ಅನಧಿಕೃತ ಚಿತ್ರಗಳು ಹಾಗೂ ವಿಡಿಯೋಗಳನ್ನು ಕೆಲವರು ಹರಿಬಿಟ್ಟು ಸಿನಿಮಾಕ್ಕೆ ಸಮಸ್ಯೆ ನೀಡಲು ಯತ್ನಿಸುತ್ತಿದ್ದಾರೆ. ಯಾರೇ ಆದರೂ ಸಾಮಾಜಿಕ ಜಾಲತಾಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 157ನೇ ಸಿನಿಮಾದ ಚಿತ್ರ-ವಿಡಿಯೋಗಳನ್ನು ಹರಿಬಿಟ್ಟಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಕಾನೂನಿನ ಅಡಿಯಲ್ಲಿ ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:ಮತ್ತೆ ದಕ್ಷಿಣಕ್ಕೆ ಬಂದ ‘ಕೆಜಿಎಫ್’ ಚೆಲುವೆ, ಚಿರಂಜೀವಿ ಸಿನಿಮಾನಲ್ಲಿ ಅವಕಾಶ

ಚಿರಂಜೀವಿ ಅವರ ಸಿನಿಮಾವನ್ನು ಅನಿಲ್ ರವಿಪುಡಿ ಮತ್ತು ನಿರ್ಮಾಣ ಸಂಸ್ಥೆಗಳು ಬಲು ಪ್ರೀತಿ ಮತ್ತು ಎಚ್ಚರಿಕೆಯಿಂದ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಕತೆಯ ವಿಶೇಷತೆ, ವಿಭಿನ್ನತೆಯನ್ನು ಕಾಪಾಡಿಕೊಳ್ಳುತ್ತಿದ್ದು, ಅದಕ್ಕೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನಟನೆಯ 157ನೇ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದು, ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಒಂದು ಆಕ್ಷನ್-ಕಾಮಿಡಿ ಸಿನಿಮಾ ಆಗಿರಲಿದ್ದು, ಸಿನಿಮಾನಲ್ಲಿ ಸಾಮಾಜಿಕ ಸಂದೇಶವೂ ಸಹ ಇರಲಿದೆಯಂತೆ. ಈ ಸಿನಿಮಾದ ಹೊರತಾಗಿ ಚಿರಂಜಿವಿ ‘ವಿಶ್ವಂಭರ’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಆಗಸ್ಟ್ ತಿಂಗಳ ಬಳಿಕ ಬಿಡುಗಡೆ ಆಗಲಿದೆ. ಇದರ ಜೊತೆಗೆ ನಟ ನಾನಿ ನಿರ್ಮಾಣ ಮಾಡುತ್ತಿರುವ ವೈಯಲೆಂಟ್ ಸಿನಿಮಾನಲ್ಲಿ ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ