
ಜೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ‘ಜೋಡಿ ನಂಬರ್ 1’ ರಿಯಾಲಿಟಿ ಶೋ ಯಶಸ್ವಿಯಾಗಿ ಪ್ರಸಾರ ಕಾಣುತ್ತಿದೆ. ಇತ್ತೀಚೆಗೆ ನಡೆದ ಎಪಿಸೋಡ್ ಒಂದರಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ವಿಷಯಗಳನ್ನು ವೇದಿಕೆ ಮೇಲೆ ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ, ಇದು ಸರಿ ಅಲ್ಲ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದವು. ಕಲಾವಿದರು ತಮ್ಮ ಖಾಸಗಿ ವಿಷಯವನ್ನು ಟಿಆರ್ಪಿಗಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಈ ಎಲ್ಲಾ ವಿವಾದ ಹಾಗೂ ನೆಗೆಟಿವ್ ಕಾಮೆಂಟ್ಗಳಿಗೆ ಶೋನ ಸ್ಪರ್ಧಿ, ನಟಿ ಗೀತಾ ಭಾರತಿ ಭಟ್ (Geetha Bharati Bhat) ಹಾಗೂ ಅವರ ಪತಿ ರಾಜಾರಾಮ್ ಭಟ್ ವಿಡಿಯೋ ಮೂಲಕ ಖಡಕ್ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜಂಟಿ ವಿಡಿಯೋ ಹಂಚಿಕೊಂಡಿರುವ ಈ ಜೋಡಿ, ನೆಟ್ಟಿಗರ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಡಿಯೋದ ಆರಂಭದಲ್ಲಿಯೇ ಮಾತನಾಡಿದ ನಟಿ ಗೀತಾ ಭಾರತಿ ಭಟ್, ‘ಎಲ್ಲರಿಗೂ ನಮಸ್ಕಾರ, ಇಷ್ಟು ದಿನ ನೀವು ಮಾತನಾಡಿದ್ದನ್ನೆಲ್ಲಾ ನಾವು ತುಂಬಾನೇ ತಾಳ್ಮೆಯಿಂದ ಕೇಳಿಸಿಕೊಂಡಿದ್ದೀವಿ. ಈಗ ನಾವು ಮಾತನಾಡುವುದನ್ನು ಪ್ಲೀಸ್ ಸ್ವಲ್ಪ ಕೇಳಿಸಿಕೊಳ್ಳಿ’ ಎಂದು ಮಾತು ಆರಂಭಿಸಿದ್ದಾರೆ.
‘ನಾವು ವೇದಿಕೆ ಮೇಲೆ ಪ್ರೀತಿ ತೋರಿಸಿದಾಗ ನೀವೆಲ್ಲಾ ಸ್ಕ್ರಾಲ್ ಮಾಡಿದ್ರಿ. ಸ್ನೇಹದ ಬಗ್ಗೆ ಮಾತನಾಡಿದಾಗ ಅದನ್ನ ಸ್ಕಿಪ್ ಮಾಡಿದ್ರಿ. ಆದರೆ, ಗಂಡ-ಹೆಂಡತಿ ನಡುವೆ ನಡೆದ ಒಂದು ಮುಕ್ತ ಸಂಭಾಷಣೆಯನ್ನ ಜಗಳ ಅಂತ ಅಂದುಕೊಂಡು, ಅದನ್ನ ಲೈಕ್, ಶೇರ್, ಕಾಮೆಂಟ್, ಡಿಬೇಟ್, ಡಿಸ್ಕಷನ್ ಮಾಡಿ ಅದರ ಬಗ್ಗೆ ಇನ್ನೊಂದು ವಿಡಿಯೋ ಮಾಡಿ ವೈರಲ್ ಮಾಡಿದ್ರಿ, ರೀ-ಪೋಸ್ಟ್ ಮಾಡಿದ್ರಿ’ ಎಂದು ವ್ಯಂಗ್ಯವಾಡಿದ್ದಾರೆ.
‘ಎಂಟರ್ಟೈನ್ಮೆಂಟ್ಗೋಸ್ಕರ ಅಂತ ಕೊಡುವಂತಹ ಕಂಟೆಂಟ್ಗಳನ್ನ ನೀವು ತಿರುಗಿಯೂ ನೋಡುವುದಿಲ್ಲ. ಆದರೆ ಇಂತಹದ್ದೇನಾದರೂ ಒಂದು ಚಿಕ್ಕ ವಿವಾದ ನಡೀತಿದೆ ಅಂದ ತಕ್ಷಣ ಎಲ್ಲರೂ ಓಡಿ ಬಂದು ಅದನ್ನ ವೈರಲ್ ಮಾಡ್ತೀರಾ ಅಲ್ವಾ’ ಎಂದು ಪ್ರಶ್ನಿಸಿದ್ದಾರೆ.
‘ಜನರು ನಮಗೆ ಏನೇನೋ ಹೇಳ್ತಿದ್ದಾರೆ. ಟಿಆರ್ಪಿಗೋಸ್ಕರ ನಾವು ಇದನ್ನ ಮಾಡ್ತಾ ಇದ್ದೀವಿ, ದುಡ್ಡು ತಗೊಂಡು ಸ್ಟೇಜ್ ಮೇಲೆ ಜಗಳ ಮಾಡ್ತಾ ಇದ್ದೀವಿ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾಗಿರೋ ವಿಚಾರನ ತಗೊಂಡು ಬಂದು ಪಬ್ಲಿಕ್ನಲ್ಲಿ ಡಿಸ್ಕಸ್ ಮಾಡ್ತಾ ಇದ್ದೀವಿ ಅಂತ ಕಾಮೆಂಟ್ ಮಾಡ್ತಿದ್ದಾರೆ. ಓಕೆ ಫೈನ್, ಇದು ನಿಮ್ಮ ಅಭಿಪ್ರಾಯ ಆಗಿರಬಹುದು. ಆದರೆ ನಮಗೂ ಒಂದು ಒಪಿನಿಯನ್ ಇದೆ ಅಲ್ವಾ? ನಾಲ್ಕು ಗೋಡೆ ಮಧ್ಯೆ ಇರಬೇಕಾದ ವಿಚಾರನ ನಾವು ಅಲ್ಲೇ ಇಟ್ಟುಕೊಂಡಿದ್ದೀವಿ. ಡಿಸ್ಕಸ್ ಮಾಡಬೇಕಾದ ವಿಚಾರವನ್ನ ಮಾತ್ರ ವೇದಿಕೆ ಮೇಲೆ ಮಾತನಾಡಿದ್ದೀವಿ. ಎಲ್ಲರ ಮನೆಗಳಲ್ಲೂ ನಡೆಯುವಂತಹ ಸಾಮಾನ್ಯ ವಿಚಾರವನ್ನೇ ನಾವು ಚರ್ಚೆ ಮಾಡಿರೋದು’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ವೇದಿಕೆ ಮೇಲೆ ತಮ್ಮ ಮನದ ಮಾತು ಹಂಚಿಕೊಂಡಿದ್ದಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳೂ ಬಂದಿವೆ ಎಂದಿರುವ ಗೀತಾ, ‘ನಮಗೆ ಹತ್ತಾರು ಜನರು ಮೆಸೇಜ್ ಮಾಡಿದ್ದಾರೆ. ಮ್ಯಾಮ್, ನಮ್ಮ ಮನೆಯಲ್ಲೂ ಇದೇ ರೀತಿ ಆಗುತ್ತಿತ್ತು, ನಾವೂ ಮನಸ್ಸಲ್ಲೇ ಇಟ್ಟುಕೊಂಡು ಕೊರಗುತ್ತಿದ್ದೆವು, ಆದರೆ ಈ ಎಪಿಸೋಡ್ ನೋಡಿದ ಮೇಲೆ ನಮಗೂ ನಮ್ಮವರ ಜೊತೆ ಶೇರ್ ಮಾಡ್ಕೋಬೇಕು ಅಂತ ಅನಿಸ್ತು ಮ್ಯಾಮ್ ಅಂತ ಹೇಳಿದ್ದಾರೆ’ ಎಂದು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ಗಳ ವಿರುದ್ಧ ಕಿಡಿಕಾರಿದ ಗೀತಾ, ‘ಈ ಸೋಕಾಲ್ಡ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಇದ್ದಾರಲ್ಲ, ಆಲ್ರೆಡಿ ವೈರಲ್ ಆಗಿರೋ ವಿಡಿಯೋನ ತಗೊಂಡು, ಅದರ ಮೇಲೆ ತಮ್ಮ ಒಪಿನಿಯನ್ ಹೇಳಿ ಅದನ್ನ ಇನ್ನೊಂದು ವಿಡಿಯೋ ಮಾಡಿ ಹಾಕ್ತಾರೆ. ವಾಹಿನಿಯವರು ಆ ವಿಡಿಯೋನ ಡಿಲೀಟ್ ಮಾಡಿಸಿದರೆ, ತಕ್ಷಣ ಇವರದ್ದು ಇನ್ನೊಂದು ವಿಡಿಯೋ ರೆಡಿ ಆಗಿಬಿಡುತ್ತೆ. ‘ಚಾನೆಲ್ನವರು ನಾನು ನಿಜ ಹೇಳಿದ್ದಕ್ಕೆ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ, ಇವಾಗ ಇನ್ನೊಂದು ವಿಡಿಯೋ ಮಾಡಿದ್ದೀನಿ ನೋಡಿ’ ಅಂತ ಹಾಕ್ತಾರೆ. ಅದು ಒಂದೇ ದಿನದಲ್ಲಿ 1 ಮಿಲಿಯನ್ ವೀವ್ಸ್ ರೀಚ್ ಆಗುತ್ತೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಪತ್ನಿಯ ಜೊತೆಗಿದ್ದ ರಾಜಾರಾಮ್ ಭಟ್ ಕೂಡ ನೆಟ್ಟಿಗರಿಗೆ ಬುದ್ಧಿವಾದ ಹೇಳಿದ್ದಾರೆ. ‘ನೀವೆಲ್ಲಾ ಇದನ್ನೆಲ್ಲಾ ಮಾಡೋದು ಟಿಆರ್ಪಿಗೋಸ್ಕರ ಅಲ್ವಾ? ಇನ್ನೊಬ್ಬರಿಗೆ ಹೇಳುವುದಕ್ಕಿಂತ ಮುಂಚೆ, ನಾನು ಏನು ಮಾಡ್ತಾ ಇದ್ದೀನಿ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಬೇರೆಯವರ ಕಣ್ಣೀರು ಅಥವಾ ಕಷ್ಟದ ಬಿಸಿಯಲ್ಲಿ ತಾವು ಬಿಸಿ ಕಾಯಿಸಿಕೊಳ್ಳುವುದಲ್ಲ ಜೀವನ. ಜೀವನ ಅಂದರೆ ನಾಲ್ಕು ಜನಕ್ಕೆ ಒಳ್ಳೆಯದು ಮಾಡಬೇಕಾಗಿರೋದು ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದನ್ನೂ ಓದಿ: ‘ಸೂಪರ್ ಜೋಡಿ’; ಪತಿ ಜೊತೆ ಫೋಟೋ ಹಂಚಿಕೊಂಡ ಗೀತಾ ಭಾರತಿ ಭಟ್
ಕೊನೆಯಲ್ಲಿ ಮಾತನಾಡಿದ ಗೀತಾ ಭಾರತಿ ಭಟ್, ‘ನೀವು ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕೊಡ್ತೀರಾ ಅಂತ ಅಂದರೆ ಸೆನ್ಸಿಬಲ್ (ಅರ್ಥಪೂರ್ಣ) ಆಗಿರೋ ಕಂಟೆಂಟ್ ಕೊಡಿ. ದಯವಿಟ್ಟು ನೀವೇ ಯೋಚನೆ ಮಾಡಿ, ಪ್ರಾಬ್ಲಮ್ ಇರೋದು ಪ್ರೋಗ್ರಾಮ್ನಲ್ಲಿ ಅಲ್ಲ ಅಥವಾ ನಮ್ಮಲ್ಲಿ ಅಲ್ಲ. ನೆಗೆಟಿವ್ ಆಗಿರೋದನ್ನೇ ಹುಡುಕಿ ಅದನ್ನ ವೈರಲ್ ಮಾಡುವಂತಹ ನಿಮ್ಮ ಅಭ್ಯಾಸದಲ್ಲಿದೆ ಸಮಸ್ಯೆ. ಪ್ಲೀಸ್ ಥಿಂಕ್ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.