ಜುಲೈ 26ಕ್ಕೆ ರಿಲೀಸ್ ಆಗಲ್ಲ ‘ಜನ ನಾಯಗನ್’? ಕುತೂಹಲ ಮೂಡಿಸಿದ ಹೊಸ ಪೋಸ್ಟರ್

'ಜನ ನಾಯಗನ್' ಚಿತ್ರದ ಸೆನ್ಸಾರ್ ಹೋರಾಟ ಮುಗಿದಿದ್ದು, ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ. ಜುಲೈ 26 ರಂದು ರಿಲೀಸ್ ಆಗಬೇಕಿದ್ದ ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಆದರೆ ಇದರಲ್ಲಿ ರಿಲೀಸ್ ದಿನಾಂಕವನ್ನು ಸಸ್ಪೆನ್ಸ್ ಆಗಿ ಇಡಲಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಜುಲೈ 26ಕ್ಕೆ ರಿಲೀಸ್ ಆಗಲ್ಲ ‘ಜನ ನಾಯಗನ್’? ಕುತೂಹಲ ಮೂಡಿಸಿದ ಹೊಸ ಪೋಸ್ಟರ್
ವಿಜಯ್

Updated on: Jul 11, 2026 | 5:28 PM

ಮುಖ್ಯಾಂಶಗಳು

  • ಸೆನ್ಸಾರ್ ಮಂಡಳಿಯಿಂದ 'ಜನ ನಾಯಗನ್' ಚಿತ್ರಕ್ಕೆ ಸಿಕ್ತು 'A' ಸರ್ಟಿಫಿಕೇಟ್
  • ಹೊಸ ಪೋಸ್ಟರ್‌ನಲ್ಲಿ ರಿಲೀಸ್ ಡೇಟ್ ಮಿಸ್ಸಿಂಗ್
  • ಕುತೂಹಲ ಮೂಡಿಸಿದ ಪೋಸ್ಟರ್ ಸ್ಟೇಟಸ್!

ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರ (Jana Nayagan) ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ, ಸಿನಿಮಾ ರಿಲೀಸ್ ವಿಳಂಬ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಚಿತ್ರದ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿದೆ. ಈ ಮೂಲಕ ಚಿತ್ರಮಂದಿರಕ್ಕೆ ಬರಲು ಸಿನಿಮಾ ಸಿದ್ಧವಾಗಿದೆ. ಆದರೆ, ಅಭಿಮಾನಿಗಳಿಗೆ ಬೇಸರವಾಗುವ ಒಂದು ಸುದ್ದಿ ಸಿಕ್ಕಿದೆ. ಮೊದಲು ಈ ಸಿನಿಮಾವನ್ನು ಜುಲೈ 26 ರಂದು ತೆರೆಗೆ ತರಲು ಚಿತ್ರತಂಡ ಯೋಜಿಸಿತ್ತು ಎನ್ನಲಾಗಿತ್ತು. ಆದರೆ, ಈಗ ಬಿಡುಗಡೆಯಾದ ಹೊಸ ಪೋಸ್ಟರ್‌ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಇದು ಸದ್ಯ ಸಿನಿರಂಗದಲ್ಲಿ ದೊಡ್ಡ ಸಸ್ಪೆನ್ಸ್ ಸೃಷ್ಟಿಸಿದೆ.

ಚಿತ್ರತಂಡದ ಸಂದೇಶ

ದಳಪತಿ ವಿಜಯ್ ಅವರ ಪೋಸ್ಟರ್​ ರಿಲೀಸ್ ಆಗಿದೆ. ಹೊಸ ಪೋಸ್ಟರ್ ಜೊತೆಗೆ ಚಿತ್ರತಂಡವು ಯುವ ಪೀಳಿಗೆಯ ಸ್ಟೈಲ್‌ನಲ್ಲಿ ಒಂದು ವಿಶೇಷ ಸಂದೇಶ ನೀಡಿದೆ. ಚಿತ್ರಮಂದಿರಗಳಲ್ಲಿ ಶೀಘ್ರದಲ್ಲೇ ಭೇಟಿಯಾಗೋಣ ಗೆಳೆಯರೇ ಎಂದು ಬರೆದುಕೊಂಡಿದೆ. ದಿನಾಂಕ ರಿವೀಲ್ ಮಾಡದಿದ್ದರೂ, ಸಿನಿಮಾ ಅತಿ ಶೀಘ್ರದಲ್ಲೇ ಥಿಯೇಟರ್‌ಗೆ ಬರಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ. ವಿಜಯ್ ಹಿಂಭಾಗದಲ್ಲಿ A ಎಂದು ಬರೆಯಲಾಗಿದೆ.

‘ಜನ ನಾಯಗನ್’ ಸಿನಿಮಾದ ಸೆನ್ಸಾರ್ ವಿವಾದವೇನು?

ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಗಲು ದೀರ್ಘಕಾಲದ ಹೋರಾಟ ನಡೆಸಬೇಕಾಯಿತು. ಚಿತ್ರದಲ್ಲಿ ಪ್ರಚೋದನಾತ್ಮಕ ಸಂಭಾಷಣೆಗಳಿವೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಕತ್ತರಿ ಹಾಕಲು ಸೂಚಿಸಿತ್ತು. ಚಿತ್ರದ ಕಥೆಯ ನೈಜತೆಗೆ ಧಕ್ಕೆಯಾಗಬಾರದು ಎಂದು ಚಿತ್ರತಂಡವು ಮಂಡಳಿಯೊಂದಿಗೆ ಸುದೀರ್ಘ ಹೋರಾಟ ನಡೆಸಿತು. ಕೊನೆಗೂ ಚಿತ್ರದ ರಗಡ್ ಕಂಟೆಂಟ್‌ಗೆ ಯಾವುದೇ ದೊಡ್ಡ ಬದಲಾವಣೆ ಮಾಡದೆ, ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡುವ ಮೂಲಕ ವಿವಾದಕ್ಕೆ ಈಗ ತೆರೆ ಬಿದ್ದಿದೆ.

ಇದನ್ನೂ ಓದಿ: ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಪೂರ್ಣ: ಸಿಎಂ ವಿಜಯ್ ಚಿತ್ರಕ್ಕೆ ‘A’ ಪ್ರಮಾಣಪತ್ರ

ವಿಜಯ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್, ಸದ್ಯ ರಾಜ್ಯದ ಆಡಳಿತ ಮತ್ತು ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇದು ಅವರ ಕೊನೆಯ ಸಿನಿಮಾ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us