‘ಸಾವಿಗೆ ವೀಸಾ ಇಲ್ಲ, ವಿದೇಶಕ್ಕೆ ಹೋದ್ರೂ ಬಿಡಲ್ಲ’; ಸಲ್ಮಾನ್ ಖಾನ್​ಗೆ ಮತ್ತೆ ಬಂತು ಬೆದರಿಕೆ

ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಮತ್ತೆ ಬೆದರಿಕೆ ಬಂದಿದೆ. ‘ಸಾವಿಗೆ ವೀಸಾ ಇಲ್ಲ’ ಎಂದಿದ್ದಾನೆ ಲಾರೆನ್ಸ್. ಈ ಕಾರಣದಿಂದ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗಿದೆ.

‘ಸಾವಿಗೆ ವೀಸಾ ಇಲ್ಲ, ವಿದೇಶಕ್ಕೆ ಹೋದ್ರೂ ಬಿಡಲ್ಲ’; ಸಲ್ಮಾನ್ ಖಾನ್​ಗೆ ಮತ್ತೆ ಬಂತು ಬೆದರಿಕೆ
ಲಾರೆನ್ಸ್​- ಸಲ್ಮಾನ್ ಖಾನ್

Updated on: Nov 29, 2023 | 12:36 PM

ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಬಿಷ್ಣೋಯ್ ಗ್ಯಾಂಗ್​ನಿಂದ ಹೊಸ ಬೆದರಿಕೆ ಬಂದಿದೆ. ಅವರನ್ನು ಕೊಲ್ಲುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಪೋಸ್ಟ್ ಹಾಕಲಾಗಿದೆ. ಈ ಬೆದರಿಕೆ ಬಳಿಕ ಮುಂಬೈ ಪೊಲೀಸರು ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ. ಸಲ್ಮಾನ್‌ಗೆ ಈಗಾಗಲೇ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಲಾರೆನ್ಸ್ ಬಿಷ್ಣೋಯ್ ಕೊಲೆ ಬೆದರಿಕೆ ಹಾಕಿದ ಬಳಿಕ ಸಲ್ಲುಗೆ ಭದ್ರತೆ ಹೆಚ್ಚಿಸಲಾಯಿತು. ಈಗ ಅದನ್ನು ಮತ್ತೊಮ್ಮೆ ಪರಿಶೀಲಿಸುವ ಕೆಲಸ ಆಗಿದೆ.

ಪಂಜಾಬಿ ಗಾಯಕ ಮತ್ತು ನಟ ಗಿಪ್ಪಿ ಗ್ರೆವಾಲ್ ಅವರ ಕೆನಡಾದ ಮನೆ ಎದುರು ಶೂಟೌಟ್ ನಡೆದಿತ್ತು. ಇದನ್ನು ಮಾಡಿದ್ದು ನಾವೇ ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ‘ನೀವು (ಗಿಪ್ಪಿ) ಸಲ್ಮಾನ್ ಖಾನ್ ಅವರನ್ನು ನಿಮ್ಮ ಸಹೋದರ ಎಂದು ಪರಿಗಣಿಸಿದ್ದೀರಿ. ನಿಮ್ಮ ಸಹೋದರ ಮುಂದೆ ಬಂದು ನಿಮ್ಮನ್ನು ಉಳಿಸುವ ಸಮಯ. ಸಲ್ಮಾನ್ ಖಾನ್​ಗೂ ಈ ಸಂದೇಶ ನೀಡಲಾಗುತ್ತಿದೆ. ದಾವೂದ್ ನಿಮ್ಮನ್ನು ಕಾಪಾಡುತ್ತಾನೆ ಎಂಬ ಭ್ರಮೆ ಬೇಡ. ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಖಾತೆ ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಇದೆ.

‘ಸಿದ್ದು ಮುಸೇವಾಲಾ ಸಾವಿನ ನಂತರ ನಿಮ್ಮ ನಾಟಕೀಯ ಪ್ರತಿಕ್ರಿಯೆಯನ್ನು ನಾವು ನಿರ್ಲಕ್ಷಿಸಿಲ್ಲ. ಅವನು ಯಾವ ರೀತಿಯ ವ್ಯಕ್ತಿಯಾಗಿದ್ದ, ಅವನ ಕ್ರಿಮಿನಲ್ ರೆಕಾರ್ಡ್ ಏನು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನೀವು ಈಗ ನಮ್ಮ ರೇಡಾರ್‌ನಲ್ಲಿ ಇದ್ದೀರಿ. ಇದನ್ನು ಟ್ರೇಲರ್ ಎಂದು ಪರಿಗಣಿಸಿ. ಸಂಪೂರ್ಣ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಯಾವುದೇ ದೇಶಕ್ಕೆ ಓಡಿಹೋಗು ಆದರೆ ಸಾವಿಗೆ ವೀಸಾ ಅಗತ್ಯವಿಲ್ಲ ಎಂಬುದನ್ನು ನೆನಪಿಡಿ. ಸಾವು ಆಹ್ವಾನವಿಲ್ಲದೆ ಬರಬಹುದು’ ಎಂದು ಬೆದರಿಕೆ ಹಾಕಲಾಗಿದೆ.

ಕೆನಡಾದ ವ್ಯಾಂಕೋವರ್‌ನಲ್ಲಿರುವ ಗಿಪ್ಪಿ ಗ್ರೆವಾಲ್ ಅವರ ಮನೆಯ ಹೊರಗೆ ಶೂಟಿಂಗ್ ನಡೆದಿದೆ. ಬಿಷ್ಣೋಯ್ ಇದರ ಹೊಣೆ ಹೊತ್ತಿದ್ದಾನೆ. ಈ ಘಟನೆಯ ನಂತರ, ‘ಸಲ್ಮಾನ್ ನನ್ನ ಗೆಳೆಯನಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ‘ಸಲ್ಮಾನ್ ಅವರನ್ನು ಕೇವಲ ಎರಡು ಬಾರಿ ಭೇಟಿಯಾಗಿದ್ದೆ. ಅವರು ನನ್ನ ಗೆಳೆಯನಲ್ಲ’ ಎಂದಿದ್ದಾರೆ ಗಿಪ್ಪಿ.

‘ಬೆದರಿಕೆಯ ಪೋಸ್ಟ್ ಅನ್ನು ಯಾರು ಹಾಕಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆ ಸೋಶಿಯಲ್ ಮೀಡಿಯಾ ಖಾತೆ ನಿಜವಾಗಿಯೂ ಲಾರೆನ್ಸ್ ಬಿಷ್ಣೋಯ್​ದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಅವರಿಂದ ಕೆನ್ನೆಗೆ ಏಟು ತಿಂದ ದುರಾದೃಷ್ಟವಂತರು ಇವರು..

ಬಿಷ್ಣೋಯ್ ಸಮುದಾಯದವರು ಕೃಷ್ಣ ಮೃಗವನ್ನು ದೇವರೆಂದು ಪೂಜೆ ಮಾಡುತ್ತಾರೆ. ಆದರೆ, ಸಲ್ಮಾನ್ ಖಾನ್ ಇದನ್ನೇ ಬೇಟೆ ಆಡಿದ್ದರು. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಹೀಗಾಗಿ, ಅವರಿಗೆ ಲಾರೆನ್ಸ್ ಬಿಷ್ಣೋಯ್ ಕೊಲೆ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಹೊಸ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದಾರೆ. ಎಲ್ಲ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ಜೊತೆ ಓಡಾಡುತ್ತಾರೆ. ಅಭಿಮಾನಿಗಳನ್ನು ಸಲ್ಲು ಭೇಟಿ ಮಾಡುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:31 pm, Wed, 29 November 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us