
ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಬಂಧನಕ್ಕೆ ಒಳಗಾಗಿದ್ದಾರೆ ಎಂದು ವರದಿ ಆಗಿದೆ. ತಮಿಳು ಮಾಧ್ಯಮಗಳು ಈ ಕುರಿತು ಸುದ್ದಿ ಪ್ರಕಟ ಮಾಡಿವೆ. ಕಿರುತೆರೆ ನಟಿ ಮಹಾಲಕ್ಷ್ಮಿ ಶಂಕರ್ (Mahalakshmi Shankar) ಅವರನ್ನು ರವೀಂದರ್ ಮದುವೆ ಆಗಿದ್ದರು. ಇತ್ತೀಚೆಗೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಕೂಡ ಆಚರಿಸಿಕೊಂಡಿತ್ತು. ಈ ಬೆನ್ನಲ್ಲೇ ವಂಚನೆ ಪ್ರಕರಣದಲ್ಲಿ ರವೀಂದರ್ ಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಮಹಾಲಕ್ಷ್ಮಿ ಅವರು ಮತ್ತಷ್ಟು ನೊಂದಿದ್ದಾರೆ.
ಲಿಬ್ರಾ ಪ್ರೊಡಕ್ಷನ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ರವೀಂದರ್ ಚಂದ್ರಶೇಖರನ್ ನಡೆಸುತ್ತಿದ್ದಾರೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಆರಂಭಿಸುವುದಾಗಿ ರವೀಂದರ್ ಹೇಳಿದ್ದರಂತೆ. ಶೇರುದಾರರನ್ನಾಗಿ ಸೇರಿಸಿಕೊಳ್ಳುವುದಾಗಿ ಕೆಲವರಿಂದ ಹಣ ಪಡೆದಿದ್ದರು. ಒಟ್ಟೂ 16 ಕೋಟಿ ರೂಪಾಯಿ ಪಡೆದು ಅವರು ವಂಚಿಸಿದ್ದಾರೆ ಎಂದು ಚೆನ್ನೈನ ಬಾಲಾಜಿ ಎಂಬವರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ರವೀಂದರ್ ಅವರನ್ನು ಅರೆಸ್ಟ್ ಮಾಡಲಾಗಿದೆ ಎನ್ನಲಾಗಿದೆ.
2021ರಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಈಗ ರವೀಂದರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅದೇ ರೀತಿ ರವೀಂದರ್ 2 ಜನರಿಗೆ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ರವೀಂದರ್ ವಿರುದ್ಧ ಮತ್ತೊಂದು ರೀತಿಯ ದೂರು ಕೂಡ ದಾಖಲಾಗಿದೆ. ವಿಜಯ್ ಎಂಬುವವರ ಬಳಿ ಅವರು 15 ಲಕ್ಷ ರೂಪಾಯಿ ಪಡೆದಿದ್ದರು. ಈ ಹಣವನ್ನು ಸಿನಿಮಾ ಒಂದಕ್ಕೆ ಹೂಡಿಕೆ ಮಾಡಿದ್ದರು. ಬಂದ ಲಾಭದಲ್ಲಿ ಪಾಲು ನೀಡುವುದಾಗಿ ಭರವಸೆ ನೀಡಿ. ಆದರೆ, ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದರೂ ರವೀಂದರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ವಿಜಯ್ ಅವರು ದೂರು ಕೊಟ್ಟಿದ್ದರು.
ಇದನ್ನೂ ಓದಿ: ಮೋಸ ಮಾಡಿದ್ರಾ ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರನ್? ಕೇಸ್ ಹಾಕಿದ ಪೊಲೀಸರು
ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಗುಟ್ಟಾಗಿಯೇ ಇತ್ತು. ಕಳೆದ ಆಗಸ್ಟ್ನಲ್ಲಿ ಮದುವೆ ಆಗುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದರು. ಇತ್ತೀಚೆಗೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಮಹಾಲಕ್ಷ್ಮಿ ಹಾಗೂ ರವೀಂದರ್ ಮಧ್ಯೆ 6 ವರ್ಷಗಳ ಅಂತರ ಇದೆ. ಮಹಾಲಕ್ಷ್ಮಿಗಿಂತ ರವೀಂದರ್ ದಪ್ಪವಾಗಿದ್ದಾರೆ ಎಂದು ಅನೇಕರು ಅವರನ್ನು ಟೀಕಿಸಿದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ