‘ಮಹಾನಾಯಕ’ ವಿಚಾರದಲ್ಲಿ ಜನರ ಒತ್ತಾಯಕ್ಕೆ ಮಣಿದು ದೊಡ್ಡ ನಿರ್ಧಾರ ತೆಗೆದುಕೊಂಡ ಜೀ ಕನ್ನಡ ವಾಹಿನಿ

| Updated By: ರಾಜೇಶ್ ದುಗ್ಗುಮನೆ

Updated on: Apr 24, 2021 | 6:49 PM

Mahanayaka Kannada serial: 2020ರ ಜುಲೈ 4ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತ್ತು. ಆಗ ಜನರಿಂದ ಭರ್ಜರಿ ಸ್ವಾಗತ ಪಡೆದುಕೊಂಡಿತ್ತು. ಆರಂಭದಿಂದಲೂ ಇದಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

‘ಮಹಾನಾಯಕ’ ವಿಚಾರದಲ್ಲಿ ಜನರ ಒತ್ತಾಯಕ್ಕೆ ಮಣಿದು ದೊಡ್ಡ ನಿರ್ಧಾರ ತೆಗೆದುಕೊಂಡ ಜೀ ಕನ್ನಡ ವಾಹಿನಿ
ಮಹಾನಾಯಕ: ಬಿಆರ್ ಅಂಬೇಡ್ಕರ್
Follow us on

ಕನ್ನಡ ಕಿರುತೆರೆ ಧಾರಾವಾಹಿಗಳ ಪೈಕಿ ‘ಮಹಾನಾಯಕ: ಬಿಆರ್​ ಅಂಬೇಡ್ಕರ್​’ ಸೀರಿಯಲ್​ಗೆ ದೊಡ್ಡ ಪ್ರೇಕ್ಷಕವರ್ಗವಿದೆ. ಅನೇಕ ವಿಚಾರಗಳ ಕಾರಣದಿಂದ ಈ ಧಾರಾವಾಹಿ ಸದ್ದು ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಸೀರಿಯಲ್​ಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದರ ಪ್ರಸಾರದ ಸಮಯಕ್ಕೆ ಸಂಬಂಧಿಸಿದಂತೆ ಜನರಿಂದ ಒತ್ತಾಯ ಕೇಳಿಬಂದಿತ್ತು. ಅದಕ್ಕೆ ಜೀ ಕನ್ನಡ ವಾಹಿನಿ ಮಣಿದಿದೆ. ವೀಕ್ಷಕರ ಬೇಡಿಕೆಯಂತೆ ಪ್ರಸಾರದ ಸಮಯವನ್ನು ಬದಲಾಯಿಸಿದೆ.

ಇಷ್ಟು ದಿನಗಳ ಕಾಲ ಮಹಾನಾಯಕ ಸೀರಿಯಲ್​ ಪ್ರತಿ ವಾರಾಂತ್ಯದಲ್ಲಿ ಪ್ರಸಾರ ಆಗುತ್ತಿತ್ತು. ಶನಿವಾರ ಮತ್ತು ಭಾನುವಾರ ಸಂಜೆ ಆರು ಗಂಟೆಗೆ ಪ್ರೇಕ್ಷಕರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದರು. ವಾರದಲ್ಲಿ ಕೇವಲ ಎರಡು ದಿನದ ಬದಲಿಗೆ ಹೆಚ್ಚಿನ ದಿನಗಳ ಕಾಲ ಪ್ರಸಾರ ಮಾಡಬೇಕು ಎಂಬುದು ವೀಕ್ಷಕರ ಒತ್ತಾಯವಾಗಿತ್ತು. ಜನರ ಈ ಅಭಿಪ್ರಾಯಕ್ಕೆ ಜೀ ಕನ್ನಡ ವಾಹಿನಿ ಬೆಲೆ ನೀಡಿದ್ದು, ವಾರದಲ್ಲಿ 5 ದಿನಗಳ ಕಾಲ ಮಹಾನಾಯಕ ಪ್ರಸಾರ ಮಾಡಲು ನಿರ್ಧರಿಸಿದೆ.

ವಾರಾಂತ್ಯದ ಬದಲಿಗೆ ಮಾಹಾನಾಯಕ ಧಾರಾವಾಹಿಯನ್ನು ದೈನಂದಿನ ಸೀರಿಯಲ್​ ಆಗಿ ಬದಲಾಗಿಸಲಾಗಿದೆ. ಇನ್ಮುಂದೆ ಪ್ರತಿ ಸೋಮವಾರದಿಂದ ಶುಕ್ರವಾರದವರಗೆ ಸಂಜೆ 6 ಗಂಟೆಗೆ ಮಹಾನಾಯಕ ಪ್ರಸಾರ ಆಗಲಿದೆ. ಇದು ವೀಕ್ಷಕರಿಗೆ ಖುಷಿ ನೀಡಿದೆ. 2020ರ ಜುಲೈ 4ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತ್ತು. ಆಗ ಜನರಿಂದ ಭರ್ಜರಿ ಸ್ವಾಗತ ಪಡೆದುಕೊಂಡಿತ್ತು. ಆರಂಭದಿಂದಲೂ ಇದಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

ಧಾರಾವಾಹಿ ಎಂದರೆ ಬರೀ ಅತ್ತೆ-ಸೊಸೆ ಜಗಳ, ಪ್ರೇಮಿಗಳ ಹೋರಾಟ, ಹೆಣ್ಣಿನ ಕಣ್ಣೀರಿನ ಕಥೆ ಎಂಬ ಮಾತಿದೆ. ಅದರ ನಡುವೆ ಒಂದು ವಿಭಿನ್ನ ಪ್ರಯತ್ನವಾಗಿ ಮಹಾನಾಯಕ ಸೀರಿಯಲ್​ ಮೂಡಿಬರುತ್ತಿದೆ. ಹಾಗಾಗಿ ಇದಕ್ಕೆ ಎಲ್ಲ ವರ್ಗದ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರು. ಆದರೂ ಅವರು ಕಂಗೆಡದೆ ವಿದ್ಯಾಭ್ಯಾಸ ಪೂರೈಸಿದರು. ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ, ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆದರು. ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರ ಬದುಕಿನ ವಿವರಗಳನ್ನು ಈ ಧಾರಾವಾಹಿ ಎಳೆಎಳೆಯಾಗಿ ಜನರ ಮುಂದಿರಿಸುತ್ತಿದೆ.

ಇದನ್ನೂ ಓದಿ: ಸೆಂಚುರಿ ಬಾರಿಸಿದ ಸತ್ಯ; 100 ಎಪಿಸೋಡ್​ ಪೂರೈಸಿದ ಸಂಭ್ರಮ

‘ನಾಗಿಣಿ 2’ ತ್ರಿಶೂಲ್ ಹಾಗೂ ಶಿವಾನಿ ಅದ್ದೂರಿ ಆರತಕ್ಷತೆ; ಅಭಿಮಾನಿಗಳಿಗೆ ಹಬ್ಬದೂಟ

 

(Mahanayaka Dr BR Ambedkar Kannada serial show timings changed in Zee Kannada channel)