‘ತಂಬಾಕಿನಿಂದ ಮಾಡಿದ್ದಲ್ಲ, ಅದು ಆಯುರ್ವೇದಿಕ್ ಬೀಡಿ’; ಅಭಿಮಾನಿಗಳಿಗೆ ತಿಳಿ ಹೇಳಿದ ಮಹೇಶ್ ಬಾಬು

|

Updated on: Jan 17, 2024 | 11:10 AM

‘ಗುಂಟೂರು ಖಾರಂ’ನಲ್ಲಿ ಮಹೇಶ್ ಬಾಬು ಬೀಡಿ ಹಿಡಿದು ಕಾಣಿಸಿಕೊಳ್ಳುತ್ತಾರೆ. ಅನೇಕರು ಇದರಿಂದ ಸ್ಫೂರ್ತಿ ಪಡೆದು ಬೀಡಿ ಸೇದೋಕೆ ಮುಂದಾಗಬಹುದು ಎನ್ನುವ ಆತಂಕ ಮಹೇಶ್ ಬಾಬುಗೆ ಕಾಡಿದೆ. ಆ ರೀತಿ ಆಗಬಾರದು ಅನ್ನೋದು ಮಹೇಶ್ ಬಾಬು ಅವರ ಉದ್ದೇಶ.

‘ತಂಬಾಕಿನಿಂದ ಮಾಡಿದ್ದಲ್ಲ, ಅದು ಆಯುರ್ವೇದಿಕ್ ಬೀಡಿ’; ಅಭಿಮಾನಿಗಳಿಗೆ ತಿಳಿ ಹೇಳಿದ ಮಹೇಶ್ ಬಾಬು
ಮಹೇಶ್ ಬಾಬು
Follow us on

ನಟ ಮಹೇಶ್ ಬಾಬು ಅವರಿಗೆ ಸಾಮಾಜಿಕ ಕಾಳಜಿ ಸಾಕಷ್ಟಿದೆ. ಅವರು ತಂಬಾಕು ಅಥವಾ ಮದ್ಯದ ಬ್ರ್ಯಾಂಡ್ ಪ್ರಚಾರ ಮಾಡಲು ಹೋಗುವುದಿಲ್ಲ. ಸೆಲೆಬ್ರಿಟಿಗಳು ಪ್ರಚಾರ ಮಾಡಿದರೆ ಒಂದಷ್ಟು ಜನರು ಅದನ್ನು ಖರೀದಿ ಮಾಡುತ್ತಾರೆ. ಒಂದೊಮ್ಮೆ ಆರೋಗ್ಯಕ್ಕೆ ಹಾನಿ ಆಗುವಂಥ ಪದಾರ್ಥಗಳಿದ್ದರೆ ಅದನ್ನು ಜನರು ಖರೀದಿ ಮಾಡುತ್ತಾರೆ. ಹೀಗಾಗಬಾರದು ಅನ್ನೋದು ಮಹೇಶ್ ಬಾಬು (Mahesh Babu) ಉದ್ದೇಶ. ಈಗ ಅವರು ‘ಗುಂಟೂರು ಖಾರಂ’ ಸಿನಿಮಾದಲ್ಲಿ ಬಳಕೆ ಆದ ಬೀಡಿ ಕುರಿತು ವಿಶೇಷ ಸೂಚನೆ ಒಂದನ್ನು ನೀಡಿದ್ದಾರೆ.

‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು ಬೀಡಿ ಹಿಡಿದು ಕಾಣಿಸಿಕೊಳ್ಳುತ್ತಾರೆ. ಅವರು ಬೀಡಿ ಸೇದೋ ಸ್ಟೈಲ್​ನ ಅನೇಕರು ಇಷ್ಟಪಟ್ಟಿದ್ದಾರೆ. ಅನೇಕರು ಇದರಿಂದ ಸ್ಫೂರ್ತಿ ಪಡೆದು ಬೀಡಿ ಸೇದೋಕೆ ಮುಂದಾಗಬಹುದು. ಆ ರೀತಿ ಆಗಬಾರದು ಅನ್ನೋದು ಮಹೇಶ್ ಬಾಬು ಅವರ ಉದ್ದೇಶ. ಹೀಗಾಗಿ, ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೈಯಲ್ಲಿ ಇರೋದು ತಂಬಾಕಿನ ಬೀಡಿ ಅಲ್ಲ ಎಂದಿದ್ದಾರೆ.

‘ಸಿನಿಮಾದಲ್ಲಿ ತೋರಿಸಿರೋ ಬೀಡಿಯನ್ನು ತಂಬಾಕಿನಿಂದ ಮಾಡಿಲ್ಲ. ಬದಲಿಗೆ ಅದಕ್ಕೆ ಲವಂಗದ ಎಲೆಗಳನ್ನು ಬಳಕೆ ಮಾಡಲಾಗಿದೆ. ಇದು ಆಯುರ್ವೇದಿಕ್ ಬೀಡಿ. ಸಿನಿಮಾಗೋಸ್ಕರ ಮಾತ್ರ ಬಳಕೆ ಮಾಡಿದ್ದೇನೆ. ಮದ್ಯ ಸೇವನೆ ಹಾಗೂ ಸಿಗರೇಟ್ ಸೇದುವುದನ್ನು ಮಾಡಬೇಡಿ’ ಎಂದು ಮಹೇಶ್ ಬಾಬು ಕೋರಿದ್ದಾರೆ. ಅವರ ಈ ಕಾಳಜಿ ಅನೇಕರಿಗೆ ಇಷ್ಟ ಆಗಿದೆ.

ಇದನ್ನೂ ಓದಿ: ಮಹೇಶ್ ಬಾಬು ಮನೆಯಲ್ಲಿ ‘ಗುಂಟೂರು ಖಾರಂ’ ಯಶಸ್ಸಿನ ಪಾರ್ಟಿ, ಇಲ್ಲಿವೆ ಚಿತ್ರಗಳು

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಸಂಕ್ರಾಂತಿ ಪ್ರಯುಕ್ತ ಜನವರಿ 12ರಂದು ಬಿಡುಗಡೆ ಕಂಡಿತು. ಈ ಚಿತ್ರಕ್ಕೆ ನೆಗೆಟಿವ್ ಟಾಕ್ ಶುರುವಾಗಿದೆ. ಆದಾಗ್ಯೂ ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ ಐದು ದಿನಕ್ಕೆ 193 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಕನ್ನಡದ ಶ್ರೀಲೀಲಾ ನಟಿಸಿದ್ದಾರೆ. ಈ ಚಿತ್ರದ ಬಳಿಕ ಮಹೇಶ್ ಬಾಬು ಅವರು ರಾಜಮೌಳಿ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:03 am, Wed, 17 January 24