ಸಿಬಿಎಫ್​ಸಿ ವಿರುದ್ಧ ಪ್ರತಿಭಟನೆಗೆ ಮುಂದಾದ ಮಲಯಾಳಂ ಚಿತ್ರರಂಗ: ಕಾರಣ?

Malayalam movie: ಮಲಯಾಳಂ ಚಿತ್ರರಂಗವು ಸಿಬಿಎಫ್​ಸಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಸಿನಿಮಾ ಒಂದಕ್ಕೆ ಪ್ರಮಾಣ ಪತ್ರ ನೀಡದೇ ಇರುವ ಸಿಬಿಎಫ್​ಸಿಯ ನಿಲವನ್ನು ಖಂಡಿಸಿ ಸೋಮವಾರದಂದು ಸಿಬಿಎಫ್​ಸಿ ಕಚೇರಿ ಮುಂದೆ ಮಲಯಾಳಂ ಚಿತ್ರರಂಗದ ವಿವಿಧ ಒಕ್ಕೂಟಗಳು ಪ್ರತಿಭಟನೆ ನಡೆಸಲಿವೆ. ಸಿಬಿಎಫ್​ಸಿ ವಿರುದ್ಧ ಮಲಯಾಳಂ ಚಿತ್ರರಂಗ ಸಿಟ್ಟಾಗಲು ಕಾರಣವೇನು?

ಸಿಬಿಎಫ್​ಸಿ ವಿರುದ್ಧ ಪ್ರತಿಭಟನೆಗೆ ಮುಂದಾದ ಮಲಯಾಳಂ ಚಿತ್ರರಂಗ: ಕಾರಣ?
Jsk

Updated on: Jun 28, 2025 | 9:58 PM

ಮಲಯಾಳಂ ಚಿತ್ರರಂಗ ಒಂದರ ಹಿಂದೊಂದರಂತೆ ಉತ್ತಮ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡುತ್ತಿದೆ. ಆದರೆ ಇತರೆ ಕೆಲವು ಚಿತ್ರರಂಗಗಳಂತೆ ಅಲ್ಲಿಯೂ ಸಮಸ್ಯೆಗಳಿವೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾ ಪ್ರದರ್ಶಕರು, ರಾಜ್ಯದಾದ್ಯಂತ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದೀಗ ಇಡೀ ಮಲಯಾಳಂ ಚಿತ್ರರಂಗ ಸಿಬಿಎಫ್​ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಸೋಮವಾರದಂದು ಮಲಯಾಳಂ ಚಿತ್ರರಂಗದ ಬೇರೆ ಬೇರೆ ವಿಭಾಗಗಳ ಸಂಘಟನೆಯವರು ಸಿಬಿಎಫ್​ಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಈ ವಿವಾದಕ್ಕೆ ಕಾರಣವಾಗಿರುವುದು ಒಂದು ಹೆಸರು.

ಕೇಂದ್ರ ಸಚಿವರೂ ಆಗಿರುವ ಸುರೇಶ್ ಗೋಪಿ ನಟನೆಯ ‘ಜೆಎಸ್​ಕೆ’ (ಜಾನಕಿ vs ಸ್ಟೇಟ್ ಆಫ್ ಕೇರಳ) ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪ್ರಮಾಣ ಪತ್ರಕ್ಕಾಗಿ ಸಿಬಿಎಫ್​ಸಿಗೆ ಕಳಿಸಲಾಗಿತ್ತು. ಆದರೆ ಸಿಬಿಎಫ್​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದ ಹೊರತು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವುದಿಲ್ಲ ಎಂದಿದೆ.

ಸಿನಿಮಾದ ನಾಯಕಿಯ ಹೆಸರು ಜಾನಕಿ ಎಂದಿದ್ದು, ಪಾತ್ರದ ಹೆಸರನ್ನು ಬದಲಾವಣೆ ಮಾಡುವಂತೆ ಸಿಬಿಎಫ್​ಸಿ ಚಿತ್ರತಂಡಕ್ಕೆ ಸೂಚಿಸಿದೆ. ಜಾನಕಿ ಹೆಸರು ದೇವಿ ಸೀತಾಮಾತೆಯ ಹೆಸರಾಗಿದ್ದು, ಆ ಕಾರಣದಿಂದಾಗಿ ಸಿನಿಮಾದ ಹೆಸರನ್ನು ಬದಲಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದು ಚಿತ್ರತಂಡವನ್ನು ಮಾತ್ರವಲ್ಲದೆ ಮಲಯಾಳಂ ಚಿತ್ರರಂಗವನ್ನೇ ಕೆರಳಿಸಿದೆ. ಈ ಹಿಂದೆ ಸಹ ‘ಜಾನಕಿ’ ಎಂಬ ಹೆಸರಿನ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಹಲವಾರು ಸಿನಿಮಾಗಳಲ್ಲಿ ಪಾತ್ರದ ಹೆಸರು ‘ಜಾನಕಿ’ ಎಂದಿದೆ. ಹಾಗಿದ್ದ ಮೇಲೆ ಈ ಸಿನಿಮಾಕ್ಕೆ ಮಾತ್ರ ಏಕೆ ವಿರೋಧ ಎಂದು ಪ್ರಶ್ನಿಸಲಾಗಿದೆ.

ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ವಿದಾಯ ಹೇಳಿದರೆ ಅನುಪಮ ಪರಮೇಶ್ವರನ್

‘ಜೆಎಸ್​ಕೆ’ ಸಿನಿಮಾವು ಜೂನ್ 27 ಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಪ್ರಮಾಣ ಪತ್ರ ನಿರಾಕರಣೆಯಿಂದಾಗಿ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್​​ನಲ್ಲಿ ವಿಚಾರಣೆ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಸಿಬಿಎಫ್​ಸಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ‘ರಾಮ್ ಲಖನ್’, ‘ಸೀತಾ ಔರ್ ಗೀತಾ’ ಇನ್ನೂ ಹಲವಾರು ಇಂಥಹಾ ಸಿನಿಮಾಗಳಿವೆ, ಅವುಗಳ ಬಗ್ಗೆ ಆಕ್ಷೇಪಣೆ ಇಲ್ಲ ಆದರೆ ಇದಕ್ಕೆ ಮಾತ್ರ ಏಕೆ? ಎಂದು ಪ್ರಶ್ನೆ ಮಾಡಿದೆ.

ಸಿಬಿಎಫ್​ಸಿ ನೀಡಿರುವ ಹೇಳಿಕೆಯಂತೆ, ‘ಜೆಎಸ್​ಕೆ’ ಸಿನಿಮಾವೂ ಬಹಳ ಸೂಕ್ಷ್ಮವಾದ ಸಾಮಾಜಿಕ ವಿಷಯ ಒಳಗೊಂಡಿದೆ. ಸಿನಿಮಾನಲ್ಲಿ ಅತ್ಯಾಚಾರ, ಲೈಂಗಿಕತೆ ಇನ್ನಿತರೆ ವಿಷಯಗಳು ಇವೆ. ಆ ಕಾರಣದಿಂದಾಗಿ ಸಿನಿಮಾದ ಪಾತ್ರದ ಹೆಸರು ಬದಲಾಯಿಸುವಂತೆ ಸೂಚಿಸಲಾಗಿದೆ ಎಂದಿದೆ. ಆದರೆ ಮಲಯಾಳಂ ಸಿನಿಮಾ ಸಂಘವು ಸಿಬಿಎಫ್​ಸಿ ನಿರ್ಧಾರವನ್ನು ಖಂಡಿಸಿದ್ದು, ಸೋಮವಾರದಂದು ಪ್ರತಿಭಟನೆ ನಡೆಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ