ಸಮಂತಾಗೆ ಮೋಸ ಮಾಡಿದ್ರಿ ಎಂದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ

ಡೀಪ್‌ಫೇಕ್ ಮತ್ತು ಸುಳ್ಳು ಸುದ್ದಿಗಳು ನಟ ನಾಗ ಚೈತನ್ಯ ಅವರ ಗೌರವ, ಘನತೆ, ಖಾಸಗಿತನ ಮತ್ತು ಸಾರ್ವಜನಿಕ ಇಮೇಜ್‌ಗೆ ತೀವ್ರ ಧಕ್ಕೆ ತಂದಿವೆ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ಸದ್ಯ ನ್ಯಾಯಾಲಯದ ಆದೇಶದ ಬಳಿಕ ಕೆಲವು ಲಿಂಕ್‌ಗಳನ್ನು ಇಂಟರ್ನೆಟ್‌ನಿಂದ ತೆಗೆದುಹಾಕಲಾಗಿದೆ.

ಸಮಂತಾಗೆ ಮೋಸ ಮಾಡಿದ್ರಿ ಎಂದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ
Naga Chaitanya, Samantha

Updated on: May 29, 2026 | 10:03 PM

ಟಾಲಿವುಡ್ ಖ್ಯಾತ ನಟ ನಾಗ ಚೈತನ್ಯ (Naga Chaitanya) ಅವರು ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಹೆಸರು, ಫೋಟೋಗಳು, ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಲಾದ ಡೀಪ್‌ಫೇಕ್ ಹಾಗೂ ಅಶ್ಲೀಲ ಕಂಟೆಂಟ್‌ಗಳ ಅನಧಿಕೃತ ಬಳಕೆಯನ್ನು ತಡೆಯಲು ಅವರು ಮೊಕದ್ದಮೆ ಹೂಡಿದ್ದಾರೆ. ಪ್ರಮುಖವಾಗಿ, ಅವರು ಮಾಜಿ ಪತ್ನಿ ಸಮಂತಾ (Samantha) ರುತ್ ಪ್ರಭುಗೆ ವಂಚಿಸಿ, ಆಕೆಯ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮತ್ತು ನಿಂದನಾತ್ಮಕ ಸುದ್ದಿಗಳ ವಿರುದ್ಧ ನಾಗ ಚೈತನ್ಯ ಅವರ ಪರ ವಕೀಲರು ನ್ಯಾಯಾಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ನಾಗ ಚೈತನ್ಯ ಪರ ಹಿರಿಯ ವಕೀಲ ವೈಭವ್ ಗಗ್ಗರ್ ವಾದ ಮಂಡಿಸಿ, ಹಲವು ವೆಬ್‌ಸೈಟ್‌ಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳು ಹೆಚ್ಚಿನ ವೀವ್ಸ್ ಮತ್ತು ಹಣ ಗಳಿಸುವ ಉದ್ದೇಶಕ್ಕಾಗಿ ನಟನ ಹೆಸರನ್ನು ಅಶ್ಲೀಲ ಪದಗಳೊಂದಿಗೆ ಬಳಸಿ ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿವೆ ಎಂದು ಕೋರ್ಟ್ ಗಮನಕ್ಕೆ ತಂದರು.

‘ನಾಗ ಚೈತನ್ಯ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಎಐ ತಂತ್ರಜ್ಞಾನ ಮತ್ತು ಧ್ವನಿ ನಕಲು ಮಾಡಿ ಸುಳ್ಳು ಹಾಗೂ ವಿಕೃತ ವೀಡಿಯೊಗಳನ್ನು ಹರಿಬಿಡಲಾಗುತ್ತಿದೆ. ಮುಖ್ಯವಾಗಿ ಮಾಜಿ ಪತ್ನಿ ಸಮಂತಾ ಅವರಿಗೆ ನಾಗ ಚೈತನ್ಯ ವಂಚಿಸಿದ್ದಾರೆ ಮತ್ತು ಅವರ ಕೆರಿಯರ್ ಹಾಳು ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದು ಟ್ರೋಲಿಂಗ್ ಮತ್ತು ನಿಂದನೆಯಾಗಿದೆ, ಇದನ್ನು ವಿಮರ್ಶೆ ಎನ್ನಲು ಸಾಧ್ಯವಿಲ್ಲ’ ಎಂದು ವಕೀಲರು ವಾದಿಸಿದರು.

ಅಷ್ಟೇ ಅಲ್ಲದೆ, ನಾಗ ಚೈತನ್ಯ ಅವರ ಅನುಮತಿಯಿಲ್ಲದೆ ಅವರ ಮುಖ ಮತ್ತು ಹೆಸರನ್ನು ಬಳಸಿ ಟಿ-ಶರ್ಟ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಅನಧಿಕೃತ ಲಿಸ್ಟಿಂಗ್‌ಗಳನ್ನು ಸಹ ಕೋರ್ಟ್‌ಗೆ ತೋರಿಸಲಾಯಿತು. ಈ ಹಿಂದೆ ನಾಗ ಚೈತನ್ಯ ಅವರ ತಂದೆ, ಹಿರಿಯ ನಟ ನಾಗಾರ್ಜುನ ಅವರ ವ್ಯಕ್ತಿತ್ವದ ಹಕ್ಕುಗಳಿಗೂ ಇದೇ ನ್ಯಾಯಾಲಯ ರಕ್ಷಣೆ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಲಾಯಿತು.

ಇದನ್ನೂ ಓದಿ: ಒಂದೇ ಮದುವೆ ಸಮಾರಂಭದಲ್ಲಿ ಸಮಂತಾ-ನಾಗ ಚೈತನ್ಯ; ಮಾಜಿ ಜೋಡಿಯ ಫೋಟೋ ವೈರಲ್

ವಾದವನ್ನು ಆಲಿಸಿದ ನ್ಯಾಯಾಧೀಶರು, ‘ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಸಾರ್ವಜನಿಕರ ಸೂಕ್ಷ್ಮ ಅವಲೋಕನಕ್ಕೆ ಒಳಗಾಗುವುದು ಸಹಜ. ನೀವು ಇತರರಿಗಿಂತ ಹೆಚ್ಚು ಸಾಫ್ಟ್ ಟಾರ್ಗೆಟ್ ಆಗುತ್ತೀರಿ ನಿಜ, ಆದರೆ ಅದಕ್ಕೂ ಕೆಲವು ಮಿತಿಗಳಿವೆ’ ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ಲೋಕದಲ್ಲಿ ಪ್ರತಿದಿನ ಇಂತಹ ಆಕ್ಷೇಪಾರ್ಹ ಕಂಟೆಂಟ್‌ಗಳು ಸೃಷ್ಟಿಯಾಗುತ್ತಿರುವುದರಿಂದ ಭವಿಷ್ಯದಲ್ಲೂ ಇವುಗಳನ್ನು ತಡೆಯಲು ಮುನ್ನೆಚ್ಚರಿಕಾ ನಿಷೇಧಾಜ್ಞೆ ನೀಡಬೇಕು ಎಂದು ಚೈತನ್ಯ ಪರ ವಕೀಲರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us