
ಚಿತ್ರರಂಗದಲ್ಲಿ ಇತ್ತೀಚೆಗೆ ಪೌರಾಣಿಕ ಕತೆಗಳನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಬಿಡುಗಡೆ ಆಗಿರುವ ಪೌರಾಣಿಕ ಕತೆಯುಳ್ಳ ಸಿನಿಮಾಗಳು, ಫ್ಯಾಂಟೆಸಿ ಬೆರೆತ ಪೌರಾಣಿಕ ಕತೆಯ ಸಿನಿಮಾಗಳು ಹಿಟ್-ಸೂಪರ್ ಹಿಟ್ ಆಗಿದ್ದೇ ಇದಕ್ಕೆ ಮೂಲ ಕಾರಣ. ಇದೇ ಸಿನಿಮಾ ಸರಣಿಗೆ ಸೇರಿದ ಹೊಸ ಸಿನಿಮಾ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ನಾಗಬಂಧಂ’. ಶಿವರಾತ್ರಿ ಪ್ರಯುಕ್ತ ‘ನಾಗಬಂಧಂ’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅವರು ಟೀಸರ್ ಬಿಡುಗಡೆ ಮಾಡಿದ್ದಾರೆ.
ಸಿನಿಮಾದ ಟೀಸರ್ ಕುತೂಹಲ ಕೆರಳಿಸುವಂತಿದೆ. ಹಿಮಾಲಯದ ಹಿಮಚ್ಛಾದಿತ ಪರ್ವತಗಳು, ಹಳೆಯದಾದ ಮತ್ತು ಗುಪ್ತವಾಗಿರುವ ರಹಸ್ಯವೊಂದರ ಕಾವಲುಗಾರನ ಕಥೆ. ಅಫ್ಘಾನರ ಆಕ್ರಮಣ, ಇತಿಹಾಸ, ಆಧ್ಯಾತ್ಮಿಕ, ಪೌರಾಣಿಕಗಳ ಜೊತೆಗೆ ಫ್ಯಾಂಟಸಿ, ಮೈನವಿರೇಳಿಸುವ ಯುದ್ಧ, ಅದ್ಭುತ ವಿಎಫ್ಎಕ್ಸ್ಗಳನ್ನು ಟೀಸರ್ ಒಳಗೊಂಡಿದೆ. ಸಿನಿಮಾದ ಕತೆಯ ಕೇಂದ್ರಬಿಂದು ‘ನಾಗಬಂಧಂ ದೇವಾಲಯ’. ದೈವಿಕ ಶಕ್ತಿಗಳಿಂದ ರಕ್ಷಿಸಲ್ಪಟ್ಟಿರುವ ಈ ಗುಪ್ತ ದೇವಾಲಯವು ಬ್ರಹ್ಮಾಂಡದ ಪ್ರಚಂಡ ಶಕ್ತಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಈ ಶಕ್ತಿಯು ತಪ್ಪು ಕೈ ಸೇರಿದರೆ ಸಂಭವಿಸಬಹುದಾದ ವಿನಾಶವನ್ನು ತಡೆಯಲು ವಿಧಿಯು ಒಬ್ಬ ಯೋಧನನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದು ಈ ಸಿನಿಮಾದ ಒನ್ಲೈನರ್. ಅಭಿಷೇಕ್ ನಾಮಾ ಸಿನಿಮಾವನ್ನು ನಿರ್ದೇಶಿಸಿದ್ದಾರೆ.ಕಿಶೋರ್ ಅನ್ನಪುರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ಅವರುಗಳು ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದ ನಾಯಕನಾಗಿ ವಿರಾಟ್ ಕರ್ಣ ನಟಿಸಿದ್ದು, ಸಿನಿಮಾದ ಪಾತ್ರಕ್ಕಾಗಿ ತಮ್ಮ ದೇಹವನ್ನು ಹುರಿಗಟ್ಟಿಸಿಕೊಂಡಿದ್ದಾರೆ ಅವರು. ಸಿನಿಮಾನಲ್ಲಿ ಹಲವು ಸಾಹಸಗಳ ಜೊತೆಗೆ ಮೊಸಳೆಯ ಜೊತೆಗಿನ ಹೋರಾಟ ಮತ್ತು ಭಗವಾನ್ ಶಿವನ ಅವತಾರದಲ್ಲಿ ಅವರ ಲುಕ್ ಟೀಸರ್ನ ಹೈಲೈಟ್ಗಳಲ್ಲಿ ಒಂದಾಗಿದೆ. ಸಿನಿಮಾಕ್ಕೆ ಸೌಂದರ್ ರಾಜನ್ ಎಸ್ ಅವರ ಸಿನಿಮಾಟೋಗ್ರಫಿ ಇದೆ. ಜುನೈದ್ ಕುಮಾರ್ ಅವರ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅಶೋಕ್ ಕುಮಾರ್ ಅವರ ಕಲಾ ನಿರ್ದೇಶನ ಮತ್ತು ಅತ್ಯುನ್ನತ ಮಟ್ಟದ ವಿಎಫ್ಎಕ್ಸ್ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿವೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಅಭಿಷೇಕ್ ನಾಮಾ ಅವರದ್ದು. ಅಬೆ ಮತ್ತು ಜುನೈದ್ ಕುಮಾರ್ ಅವರ ಸಂಗೀತ, ಆರ್ಸಿ ಪ್ರಣವ್ ಅವರ ಸಂಕಲನ ಚಿತ್ರಕ್ಕಿದೆ.
ಸಿನಿಮಾನಲ್ಲಿ ನಾಯಕಿಯಾಗಿ ನಭಾ ನಟೇಶ್ ಮತ್ತು ಐಶ್ವರ್ಯ ಮೆನನ್ ಮಿಂಚಿದ್ದಾರೆ. ಪೋಷಕ ಪಾತ್ರಗಳಲ್ಲಿ ಮಹೇಶ್ ಮಂಜ್ರೇಕರ್, ಜಗಪತಿ ಬಾಬು, ರಿಷಬ್ ಸಾಹ್ನಿ, ‘ಕೆಜಿಎಫ್’ ಖ್ಯಾತಿಯ ಗರುಡ ರಾಮ್, ಮುರಳಿ ಶರ್ಮ ಮತ್ತು ಅನಸೂಯ ಭಾರದ್ವಾಜ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರಕ್ಕೆ ಬಲ ತುಂಬಿದ್ದಾರೆ. ಈ ಬೇಸಿಗೆಯಲ್ಲಿ ‘ನಾಗಬಂಧಂ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ