
ತಮಿಳು ಚಿತ್ರರಂಗದ (Tamil) ಪ್ರತಿಭಾವಂತ ಸಿನಿಮಾಟೊಗ್ರಾಫರ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಸಳಿಯನ್ ನಿಧನ ಹೊಂದಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಸಳಿಯನ್ ಅವರು ಕಳೆದ ಕೆಲ ವರ್ಷಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ (ಜುಲೈ 10) ರಾತ್ರಿ ಸಳಿಯನ್ ಅವರು ಕೊನೆ ಉಸಿರೆಳೆದಿದ್ದಾರೆ. ತಮಿಳು ಚಿತ್ರರಂಗದ ಹಲವು ಗಣ್ಯರು ಸಳಿಯನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಇಂದು (ಜುಲೈ 11) ಬೆಳಿಗಿನಿಂದ ಹಲವು ಗಣ್ಯರು ಸಳಿಯನ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಸಳಿಯನ್ ಅವರು 2007 ರಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮನ್ನಾ ಭಾಟಿಯಾ ನಟಿಸಿದ್ದ ಭಿನ್ನ ಕತಾವಸ್ತು ಒಳಗೊಂಡಿದ್ದ ‘ಕಲ್ಲೂರಿ’ ಸಿನಿಮಾದ ಮೂಲಕ ಅವರು ಸಿನಿಮಾಟೊಗ್ರಾಫರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವಾರು ಭಿನ್ನ ರೀತಿಯ ಸಿನಿಮಾಗಳಿಗೆ ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ‘ಪರದೇಸಿ’, ‘ತರೈ ತಪ್ಪಾಟಿ’, ‘ಜೋಕರ್’, ‘ಸವಾರಿ’ ಇನ್ನೂ ಹಲವಾರು ಸಿನಿಮಾಗಳಿಗೆ ಅವರು ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ
ಭಿನ್ನ ಕತಾವಸ್ತುವುಳ್ಳ, ಭಿನ್ನ ರೀತಿಯ ನಿರೂಪಣೆಯುಳ್ಳ ಸಿನಿಮಾಗಳಿಗೆ ಮಾತ್ರವೆ ಸಳಿಯನ್ ಸಿನಿಮಾಟೊಗ್ರಫಿ ಮಾಡುತ್ತಿದ್ದಿದ್ದು ವಿಶೇಷ. ಸಿನಿಮಾಟೊಗ್ರಾಫರ್ ಮಾತ್ರವಲ್ಲದೆ ಸಿನಿಮಾ ನಿರ್ದೇಶನವನ್ನೂ ಸಹ ಸಳಿಯನ್ ಮಾಡಿದ್ದಾರೆ. 2019 ರಲ್ಲಿ ಬಿಡುಗಡೆ ಆದ ‘ಟು ಲೆಟ್’ ಸಿನಿಮಾ ಅನ್ನು ಸಳಿಯನ್ ನಿರ್ದೇಶಿಸಿದ್ದರು. ಆ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆಯಿತು. ಚೆನ್ನೈನಲ್ಲಿ ಬಾಡಿಗೆ ಮನೆ ಹುಡುಕುವ ಕುಟುಂಬವೊಂದರ ಕತೆ ಅದಾಗಿತ್ತು.
ಇದೀಗ ಸಳಿಯನ್ ನಿಧನಕ್ಕೆ ತಮಿಳು ಚಿತ್ರರಂಗದ ಹಲವು ಗಣ್ಯರು, ಸಿನಿಮಾ ನಿರ್ದೇಶಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಬಾಲ, ಮಿಸ್ಕಿನ್, ‘ನಾಡೋಡಿಗಳ್’ ಸಸಿಕುಮಾರ್, ಸಿಮನ್ ಸೇರಿದಂತೆ ಹಲವು ಗಣ್ಯರು ಬೆಳಿಗ್ಗೆಯೇ ಸಳಿಯನ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ