AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ

Loose Mada Yogi: ‘ಗ್ರಾಮಾಯಣ’ ಸಿನಿಮಾ ಇನ್ನೂ ಪ್ರದರ್ಶನಗೊಳ್ಳುತ್ತಿರುವಾಗಲೇ ಲೂಸ್ ಮಾದ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಲೂಸ್ ಮಾದ ಅವರು ಸೋಲೊ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತಕ್ಕೆ ಧ್ರುವ ಸರ್ಜಾ ಆಗಮಿಸಿ ಗೆಳೆಯನಿಗೆ ಶುಭ ಕೋರಿದ್ದಾರೆ. ಇದು ಲೂಸ್ ಮಾದ ಅವರ 51ನೇ ಸಿನಿಮಾ ಆಗಿರುವುದು ವಿಶೇಷ.

ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ
Yogi Dhruva
ಮಂಜುನಾಥ ಸಿ.
|

Updated on: Jul 11, 2026 | 8:16 AM

Share

ಲೂಸ್ ಮಾದ (Loose Maada), ಕನ್ನಡದ ಜನಪ್ರಿಯ ನಟ. ಇತ್ತೀಚೆಗೆ ಅವರ ನಟನೆಯ ‘ಗ್ರಾಮಾಯಣ’ ಸಿನಿಮಾ ಬಿಡುಗಡೆ ಆಗಿದೆ. ವಿನಯ್ ರಾಜ್​​ಕುಮಾರ್ ಜೊತೆಗೆ ಲೂಸ್ ಮಾದ ಸಹ ಈ ಸಿನಿಮಾನಲ್ಲಿ ನಟಿಸಿದ್ದಾರೆ. ‘ಗ್ರಾಮಾಯಣ’ ಸಿನಿಮಾ ಇನ್ನೂ ಪ್ರದರ್ಶನಗೊಳ್ಳುತ್ತಿರುವಾಗಲೇ ಲೂಸ್ ಮಾದ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಲೂಸ್ ಮಾದ ಅವರು ಸೋಲೊ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತಕ್ಕೆ ಧ್ರುವ ಸರ್ಜಾ ಆಗಮಿಸಿ ಗೆಳೆಯನಿಗೆ ಶುಭ ಕೋರಿದ್ದಾರೆ. ಇದು ಲೂಸ್ ಮಾದ ಅವರ 51ನೇ ಸಿನಿಮಾ ಆಗಿರುವುದು ವಿಶೇಷ.

ಲೂಸ್ ಮಾದ ಅವರ ಈ ಸಿನಿಮಾಕ್ಕೆ ‘ಫಾರೆವರ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ನಡೆದ ಮುಹೂರ್ತದಲ್ಲಿ ನಟ ಧ್ರುವ ಸರ್ಜಾ ಭಾಗಿ ಆಗಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಯೋಗಿ, ತಾವು ಹಾಗೂ ಧ್ರುವ ಸರ್ಜಾ ಅವರು ಒಂದೇ ಶಾಲೆಯಲ್ಲಿ ಓದಿದವರು ಮತ್ತು ಉತ್ತಮ ಸ್ನೇಹಿತರು ಎಂದರು. ತಮ್ಮ ನೆಚ್ಚಿನ ಗೆಳೆಯನ 51ನೇ ಚಿತ್ರದ ಆರಂಭಕ್ಕೆ ಧ್ರುವ ಸರ್ಜಾ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಶಾಸಕ ಕೃಷ್ಣಪ್ಪ ಅವರು ಕ್ಯಾಮೆರಾ ಚಾಲನೆ ಮಾಡಿದರು, ಹಾಗೂ ‘ನಾಗರಹಾವು’ ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ಸುಮಾರು ಎರಡು ವರ್ಷಗಳ ನಂತರ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಯೋಗಿ, ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದಾಗಿ ಹೇಳಿದರು. ‘ನಾನು ಈ ಚಿತ್ರದಲ್ಲಿ ಈವರೆಗೂ ಮಾಡಿರದ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಲವ್, ಸೆಂಟಿಮೆಂಟ್ ಮತ್ತು ಆಕ್ಷನ್ ಜೊತೆಗೆ ಇನ್ನೊಂದು ವಿಶೇಷ ಅಂಶವಿದೆ, ಅದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇವೆ. ವೈಯಕ್ತಿಕವಾಗಿ ನನಗೆ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ, ಈ ಚಿತ್ರದ ಕಥೆ ಬೈಕ್ ರೈಡಿಂಗ್‌ಗೆ ಹತ್ತಿರವಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ’ ಎಂದು ತಮ್ಮ ಉತ್ಸಾಹವನ್ನು ಹಂಚಿಕೊಂಡರು.

ಇದನ್ನೂ ಓದಿ:ಯೋಗಿ 50ನೇ ಸಿನಿಮಾಗೆ ‘ಕಿಂಗ್’ ಟೈಟಲ್; ರಗಡ್ ಅವತಾರದಲ್ಲಿ ಬಂದ ಲೂಸ್ ಮಾದ

ಸಿನಿಮಾವನ್ನು ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ‘ಚಂದ್ರಿಕ’ ಸಿನಿಮಾ ನಿರ್ದೇಶಿಸಿದ್ದ ಯೋಗೇಶ್ ಎಂ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಸಿನಿಮಾನಲ್ಲಿ ನಾಯಕಿಯಾಗಿ ಆಕಾಂಕ್ಷಾ ರಾವ್ ಹೇಳಿದ್ದಾರೆ. ತುಳು ಸಿನಿಮಾ ಒಂದರಲ್ಲಿ ನಟಿಸಿರುವ ಆಕಾಂಕ್ಷಾಗೆ ಇದು ಮೊದಲ ಕನ್ನಡ ಸಿನಿಮಾ ಆಗಿದೆ.

ಲೂಸ್ ಮಾದ ಯೋಗಿ ಅವರು ಇತ್ತೀಚೆಗೆ ಸೋಲೊ ನಾಯಕನಾಗಿ ನಟಿಸುವುದು ಕಡಿಮೆ ಆಗಿದೆ. ಸಹ ನಾಯಕನಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿದ್ದ ‘ಸಿದ್ಲಿಂಗು 2’ ಸಿನಿಮಾನಲ್ಲಿ ಅವರು ಸೋಲೊ ಹೀರೋ ಆಗಿದ್ದರು. ಈಗ ಅವರೇ ಹೇಳಿರುವಂತೆ ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಸೋಲೊ ಹೀರೋ ಆಗಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us