ಇಬ್ಬರನ್ನು ಮುಂದಿಟ್ಟು ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್
Hardik Pandya: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕಳೆದ ಎರಡು ಸೀಸನ್ಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಐಪಿಎಲ್ 2026 ರಲ್ಲಿ ಆಡಿದ 14 ಲೀಗ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿದ್ದು ಕೇವಲ 4 ಪಂದ್ಯಗಳನ್ನು ಮಾತ್ರ. ಹೀಗಾಗಿಯೇ ಇದೀಗ ನಾಯಕ ಹಾರ್ದಿಕ್ ಪಾಂಡ್ಯರನ್ನು ತಂಡದಿಂದ ಕೈ ಬಿಡಲು ಮುಂಬೈ ಇಂಡಿಯನ್ಸ್ ಮುಂದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್- 20 ಆರಂಭಕ್ಕೂ ಮುನ್ನವೇ ಹೊಸ ಸಂಚಲನ ಶುರುವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮದಾಗಿಸಿಕೊಳ್ಳಲು ಈಗ ಡೆಲ್ಲಿ ಕ್ಯಾಪಿಟಲ್ಸ್ (DC) ಭರ್ಜರಿ ಆಫರ್ನೊಂದಿಗೆ ರೇಸ್ಗೆ ಧುಮುಕಿದೆ. ಪ್ರಮುಖ ಮಾಧ್ಯಮಗಳ ವರದಿಯ ಪ್ರಕಾರ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ‘ಪ್ಲೇಯರ್ ಸ್ವಾಪ್’ (ಆಟಗಾರರ ಅದಲು-ಬದಲು) ಒಪ್ಪಂದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ‘ಮೆಗಾ ಆಫರ್’!
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡದಿಂದ ಸೆಳೆಯಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್ಗೆ ಇಬ್ಬರು ಸ್ಟಾರ್ ಆಟಗಾರರು ಹಾಗೂ ಭಾರಿ ನಗದು ಒಳಗೊಂಡ ಮೆಗಾ ಆಫರ್ ನೀಡಿದೆ. ಆ ಆಫರ್ ಎಂದರೆ…
- ಅಕ್ಷರ್ ಪಟೇಲ್ (ಸ್ಪಿನ್ ಆಲ್ರೌಂಡರ್)
- ಪೃಥ್ವಿ ಶಾ (ಸ್ಫೋಟಕ ಆರಂಭಿಕ ಆಟಗಾರ)
- ₹10 ಕೋಟಿ ಹೆಚ್ಚುವರಿ ನಗದು
ಅಂದರೆ ಅಕ್ಷರ್ ಪಟೇಲ್ ಹಾಗೂ ಪೃಥ್ವಿ ಶಾ ಅವರನ್ನು ನೀಡುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ. ಇದರ ಜೊತೆಗೆ 10 ಕೋಟಿ ರೂ. ಹೆಚ್ಚುವರಿ ನಗದನ್ನು ಪಾವತಿಸುವುದಾಗಿ ಹೇಳಿಕೊಂಡಿದೆ.
ಮುಂಬೈ ಇಂಡಿಯನ್ಸ್ ಡಿಮ್ಯಾಂಡ್!
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಆಫರ್ ಅನ್ನು ಮುಂಬೈ ಇಂಡಿಯನ್ಸ್ ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಬದಲಾಗಿ ಪೃಥ್ವಿ ಶಾ ಬದಲಿಗೆ ಯುವ ಆಟಗಾರ ಸಮೀರ್ ರಿಝ್ವಿ ಅವರನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಪೃಥ್ವಿ ಶಾ ಕಳೆದ ಎರಡು ಸೀಸನ್ಗಳಲ್ಲಿ ಸ್ಥಿರ ಪ್ರದರ್ಶನ ನೀಡದ ಕಾರಣ ಅವರ ಬಗ್ಗೆ ಮುಂಬೈ ಇಂಡಿಯನ್ಸ್ ಆಸಕ್ತಿ ಹೊಂದಿಲ್ಲ. ಅದರ ಬದಲಿಗೆ 2026ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಿಗ್-ಹಿಟ್ಟರ್ ಸಮೀರ್ ರಿಝ್ವಿ ಹಾಗೂ ಅಕ್ಷರ್ ಪಟೇಲ್ ಜೊತೆ ನೀಡಿದರೆ ಟ್ರೇಡ್ ಮಾಡಬಹುದು ಮುಂಬೈ ಇಂಡಿಯನ್ಸ್ ತಿಳಿಸಿದೆ ಎನ್ನಲಾಗಿದೆ.
ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಸಮೀರ್ ರಿಝ್ವಿ ಅವರನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಹೀಗಾಗಿ ಈ ಟ್ರೇಡ್ ಪ್ರಕ್ರಿಯೆ ಏನಾಗಲಿದೆ ಎಂಬುದೇ ಸದ್ಯದ ಕುತೂಹಲ.
ರೇಸ್ನಲ್ಲಿ CSK ಮತ್ತು KKR:
ಈ ಮೊದಲು ಹಾರ್ದಿಕ್ ಪಾಂಡ್ಯ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ತೆರೆಮರೆಯ ಪ್ರಯತ್ನ ನಡೆಸಿದ್ದರು. ಮುಂಬೈ ತಂಡವು ಸಿಎಸ್ಕೆಯಿಂದ ಶಿವಂ ದುಬೆ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ಕೇಳಿತ್ತು. ಆದರೆ ಆರ್ಥಿಕ ಮೌಲ್ಯಮಾಪನ ಮತ್ತು ಹೆಚ್ಚುವರಿ ಹಣದ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಸಿಎಸ್ಕೆ ಜೊತೆಗಿನ ಮಾತುಕತೆ ಸದ್ಯಕ್ಕೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ನೇರ ನಗದು ಆಫರ್ ನೀಡಿತ್ತಾದರೂ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರಿಂಕು ಸಿಂಗ್ ಮತ್ತು ಕ್ಯಾಮರೋನ್ ಗ್ರೀನ್ ಅವರನ್ನು ಕೇಳಿದ್ದರಿಂದ ಮಾತುಕತೆ ಆರಂಭದಲ್ಲೇ ಮುರಿದುಬಿದ್ದಿದೆ. ಇದಾಗ್ಯೂ ಕೆಕೆಆರ್ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊಸ ಯೋಜನೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್ ಟೂರ್ನಿ!
ಅಂದರೆ ಐಪಿಎಲ್ ಸೀಸನ್-20 ರಲ್ಲಿ ಹಾರ್ದಿಕ್ ಪಾಂಡ್ಯ ಹೊಸ ತಂಡದ ಪರ ಕಣಕ್ಕಿಳಿಯುವುದು ಖಚಿತ. ಆದರೆ ಅದು ಯಾವ ತಂಡದ ಪರ ಎಂಬುದೇ ಸದ್ಯ ಕುತೂಹಲ.




