ಎನ್​ಟಿಆರ್​ಗೆ ಭಾರತ ರತ್ನ ಕೊಡಿ; ಲೆಜೆಂಡರಿ ನಟನ ಜನ್ಮದಿನದಂದು ಬೇಡಿಕೆಯಿಟ್ಟ ಮೆಗಾಸ್ಟಾರ್​ ಚಿರಂಜೀವಿ

NT Rama Rao: ಚಿತ್ರರಂಗಕ್ಕೆ ಎನ್​ಟಿಆರ್​ ನೀಡಿದ ಕೊಡುಗೆ ಅಪಾರ. ಅವರಿಗೆ ಭಾರತ ರತ್ನ ಗೌರವ ಸಿಗಬೇಕು ಎಂಬುದು ಅಭಿಮಾನಿಗಳ ಬಯಕೆ. ಇದನ್ನು ಮೆಗಾಸ್ಟಾರ್​ ಚಿರಂಜೀವಿ ಕೂಡ ಒತ್ತಿ ಹೇಳಿದ್ದಾರೆ.

ಎನ್​ಟಿಆರ್​ಗೆ ಭಾರತ ರತ್ನ ಕೊಡಿ; ಲೆಜೆಂಡರಿ ನಟನ ಜನ್ಮದಿನದಂದು ಬೇಡಿಕೆಯಿಟ್ಟ ಮೆಗಾಸ್ಟಾರ್​ ಚಿರಂಜೀವಿ
ಎನ್​ಟಿಆರ್​, ಚಿರಂಜೀವಿ

Updated on: May 28, 2021 | 11:56 AM

ತೆಲುಗು ಚಿತ್ರರಂಗದ ಲೆಜೆಂಡರಿ ನಟ ಎನ್​ಟಿಆರ್​ (ನಂದಮೂರಿ ತಾರಕರಾಮ ರಾಮ್​) ಅವರ 98ನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಇಂದು (ಮೇ 28) ಆಚರಿಸುತ್ತಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ, ರಾಜಕಾರಣಿಯಾಗಿ ಎನ್​ಟಿಆರ್​ ಅವರು ತೆಲುಗು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಅವರ 98ನೇ ಜನ್ಮದಿನಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್​ ಕಲಾವಿದರು ಕೂಡ ಎನ್​ಟಿಆರ್​ ಅವರ ನೆನಪನ್ನು ಮೆಲುಕು ಹಾಕುತ್ತಿದ್ದಾರೆ.

ಚಿತ್ರರಂಗಕ್ಕೆ ಎನ್​ಟಿಆರ್​ ನೀಡಿದ ಕೊಡುಗೆ ಅಪಾರ. ಅವರಿಗೆ ಭಾರತ ರತ್ನ ಗೌರವ ಸಿಗಬೇಕು ಎಂಬುದು ಅಭಿಮಾನಿಗಳ ಬಯಕೆ. ಇದನ್ನು ಮೆಗಾಸ್ಟಾರ್​ ಚಿರಂಜೀವಿ ಕೂಡ ಒತ್ತಿ ಹೇಳಿದ್ದಾರೆ. ಇಂದು ಎನ್​ಟಿಆರ್​ಗೆ ವಿಶ್​ ಮಾಡುವ ಸಲುವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಎನ್​ಟಿಆರ್​ ಜೊತೆ ತಾವಿರುವ ಒಂದು ಫೋಟೋವನ್ನು ಕೂಡ ಶೇರ್​ ಮಾಡಿಕೊಂಡಿದ್ದಾರೆ. #RememberingTheLegend #BharatRatnaForNTR ಹ್ಯಾಷ್​ಟ್ಯಾಗ್​ಗಳ ಮೂಲಕ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

‘ಎನ್​ಟಿಆರ್​ ಅವರಿಗೆ ಭಾರತ ರತ್ನ ನೀಡಿದರೆ ಅದು ತೆಲುಗು ಭಾಷಿಕರಿಗೆ ಗೌರವ ನೀಡಿದಂತೆ. ಅವರ 100ನೇ ವರ್ಷದ ಜಯಂತಿ ಸಮೀಪಿಸುತ್ತಿರುವ ಸಂದರ್ಭದಲ್ಲಿ ಭಾರತ ರತ್ನ ನೀಡಿದರೆ ದೊಡ್ಡ ಗೌರವ ಸಿಕ್ಕಂತಾಗುತ್ತದೆ. ಅವರನ್ನು ನಾನು ಇಂದು ಸ್ಮರಿಸಿಕೊಳ್ಳುತ್ತಿದ್ದೇನೆ’ ಎಂದು ಮೆಗಾಸ್ಟಾರ್​ ಚಿರಂಜೀವಿ ಟ್ವೀಟ್​ ಮಾಡಿದ್ದಾರೆ. ಅಭಿಮಾನಿಗಳು ಇದನ್ನು ರೀಟ್ವೀಟ್​ ಮಾಡಿಕೊಳ್ಳುವ ಮೂಲಕ ವೈರಲ್​ ಆಗುವಂತೆ ಮಾಡುತ್ತಿದ್ದಾರೆ.

1949ರಲ್ಲಿ ಚಿತ್ರರಂಗಕ್ಕೆ ಎನ್​ಟಿಆರ್​ ಕಾಲಿಟ್ಟರು. ಅವರ ಮೊದಲ ಸಿನಿಮಾ ‘ಮನ ದೇಸಂ’. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕತೆಗಾರ, ಚಿತ್ರಕಥೆ ಬರಹಗಾರ, ನಿರ್ದೇಶಕ, ನಿರ್ಮಾಪಕರಾಗಿಯೂ ಅವರು ಚಿತ್ರರಂಗಕ್ಕೆ ಕೊಡುಗೆ ನೀಡಿದರು. ನಂತರ ರಾಜಕೀಯಕ್ಕೆ ಕಾಲಿಟ್ಟು ಮೂರು ಬಾರಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಅವರು ಬೆಳೆದರು. 1996ರಲ್ಲಿ ಹೃದಯಾಘಾತದಿಂದ ಹೈದರಾಬಾದ್​ನಲ್ಲಿ ಎನ್​ಟಿಆರ್ ನಿಧನರಾದರು. ಆಗ ಅವರಿಗೆ 72 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ:

ಮತ್ತೆ ಶುರುವಾಯ್ತ ಫ್ಯಾನ್ಸ್​ ವಾರ್​; ರಾಮ್​ ಚರಣ್​-ಜ್ಯೂ. ಎನ್​ಟಿಆರ್​ ಅಭಿಮಾನಿಗಳ ಕಿತ್ತಾಟ

ಖ್ಯಾತ ನಟ ಜ್ಯೂನಿಯರ್​ ಎನ್​ಟಿಆರ್​ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಲಿದ್ದಾರಂತೆ ಪ್ರಶಾಂತ್ ನೀಲ್ !

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us