ರಾಮ್ ಚರಣ್, ನಾನಿ ಜೊತೆ ಸಿನಿಮಾ: ಶಿವಣ್ಣ ಹೇಳಿದ್ದು ಹೀಗೆ

Ram Charan: ಶಿವರಾಜ್ ಕುಮಾರ್ ಅವರು ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಶಿವಣ್ಣ ಮಾತನಾಡಿದ್ದಾರೆ.

ರಾಮ್ ಚರಣ್, ನಾನಿ ಜೊತೆ ಸಿನಿಮಾ: ಶಿವಣ್ಣ ಹೇಳಿದ್ದು ಹೀಗೆ
ರಾಮ್ ಚರಣ್-ಶಿವಣ್ಣ

Updated on: Dec 06, 2023 | 9:19 PM

ಶಿವರಾಜ್ ಕುಮಾರ್ (Shiva Rajkumar) ಅನುಮಾನವೇ ಇಲ್ಲದೆ ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಸ್ಟಾರ್ ನಟ. ತಮಿಳಿನ ‘ಜೈಲರ್’ ಸಿನಿಮಾದ ಅತಿಥಿ ಪಾತ್ರದ ಬಳಿಕವಂತೂ ಪರಭಾಷೆಗಳಲ್ಲಿಯೂ ಶಿವಣ್ಣನಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ತಮಿಳಿನ ಧನುಶ್​ ಜೊತೆ ಸಿನಿಮಾದಲ್ಲಿ ನಟಿಸಿರುವ ಶಿವಣ್ಣ, ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಜೊತೆ ಹೊಸದೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಇದೀಗ ಮಾತನಾಡಿದ್ದಾರೆ.

‘ರಾಮ್ ಚರಣ್ ಜೊತೆ ಸಿನಿಮಾ ಬಗ್ಗೆ ಈಗಲೇ ಏನೂ ಹೇಳಲಿಕ್ಕಿಲ್ಲ, ಕೆಲವು ಸುದ್ದಿಗಳು ಹರಿದಾಡುತ್ತಿವೆ. ಆದರೆ ಯಾವುದೇ ಮಾತು-ಕತೆ ಆಗಿಲ್ಲ. ಈಗಲೇ ಮಾತನಾಡಿ ಆ ಮೇಲೆ ಸಿನಿಮಾ ಆಗಲಿಲ್ಲ ಎಂದರೆ ಅಭಿಮಾನಿಗಳಿಗೆ ಬೇಜಾರಾಗುತ್ತದೆ. ತೆಲುಗಿನಲ್ಲಿ ‘ಉಪ್ಪೆನ’ ಸಿನಿಮಾ ಮಾಡಿದ್ದಾರಲ್ಲ ಬುಚ್ಚಿ ಬಾಬು ಅವರು ಭೇಟಿ ಆಗಬೇಕು ಎಂದು ಕೇಳಿದ್ದಾರೆ. ನೋಡೋಣ ಏನಾಗುತ್ತದೆಯೋ’ ಎಂದಿದ್ದಾರೆ ಶಿವರಾಜ್ ಕುಮಾರ್.

ಇತ್ತೀಚೆಗೆ ನಟ ನಾನಿ ಬೆಂಗಳೂರಿಗೆ ಬಂದು ಭೇಟಿ ಆದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ‘ಸಿನಿಮಾ ಒಂದರಲ್ಲಿ ಅತಿಥಿ ಪಾತ್ರ ಮಾಡಬೇಕು ಎಂದು ನಾನೇ ನಾನಿಗೆ ಹಿಂದೊಮ್ಮೆ ಫೋನ್ ಮಾಡಿದ್ದೆ. ಕೂಡಲೇ ಎಸ್ ಅಂತ ಅಂದಿದ್ರು, ನಾನೇ ಬಂದು ಭೇಟಿ ಮಾಡ್ತೀನಿ ಅಂತಾನೂ ಹೇಳಿದ್ದೆ, ಆದರೆ ಅವರು ಇಲ್ಲ ನಾನೇ ಅಲ್ಲಿಗೆ ಬರ್ತೀನಿ ಅಂದರು. ಆದರೆ ಆ ಸಿನಿಮಾ ಆಗಲಿಲ್ಲ. ಈಗ ಬಂದು ಭೇಟಿಯಾದ್ರು. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡೋಣ ಅಂದುಕೊಂಡಿದ್ದೀವಿ’ ಎಂದರು ಶಿವರಾಜ್ ಕುಮಾರ್.

ಇದನ್ನೂ ಓದಿ:‘ಘೋಸ್ಟ್’ ಸಿನಿಮಾ ನೋಡಲು ಕೆಲವು ಸಲಹೆ ಕೊಟ್ಟ ನಟ ಶಿವರಾಜ್ ಕುಮಾರ್

‘ಘೋಸ್ಟ್’ ಸಿನಿಮಾಕ್ಕೆ ಒಟಿಟಿಯಲ್ಲಿಯೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ‘ನಮ್ಮ ಸಿನಿಮಾಕ್ಕೆ ಆಸ್ಟ್ರೇಲಿಯಾ, ಅಮೆರಿಕಾ, ಯುಕೆಯಲ್ಲಿ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಮಯದಲ್ಲಿ ಸ್ವಲ್ಪ ದೊಡ್ಡ ದೊಡ್ಡ ಸಿನಿಮಾಗಳೇ ಬಂದವು. ಆದರೂ, ನಮ್ಮ ಸಿನಿಮಾ ಚೆನ್ನಾಗಿ ಹೋಯ್ತು’ ಎಂದರು.

ಶಿವಣ್ಣ ನಟಿಸಿರುವ ‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯ್ತು. ಚಿತ್ರಮಂದಿರದಲ್ಲಿ ಸಿನಿಮಾ ಸೂಪರ್ ಹಿಟ್ ಆಯ್ತು. ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ಅನುಪಮ್ ಖೇರ್, ಜಯರಾಂ ಇನ್ನೂ ಹಲವರು ನಟಿಸಿದ್ದರು. ಸಿನಿಮಾ ಜಿ5 ಒಟಿಟಿಯಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಸೂಪರ್ ಹಿಟ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 pm, Wed, 6 December 23

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us