ಪವನ್ ಕಲ್ಯಾಣ್ ಸಿನಿಮಾಗಳಿಗೆ ಹೆಚ್ಚಳವಾಯ್ತು ಬೇಡಿಕೆ, ದುಪ್ಪಟ್ಟು ಹಣಕ್ಕೆ ಮಾರಾಟ

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪವನ್ ಕಲ್ಯಾಣ್ ಅವರ ಸಿನಿಮಾಗಳಿಗೆ ಭಾರಿ ಬೇಡಿಕೆ ಶುರುವಾಗಿದೆ. ನಿರೀಕ್ಷಿತ ಮೊತ್ತಕ್ಕಿಂತಲೂ ದುಪ್ಪಟ್ಟ ಹಣ ನೀಡಿ ಸಿನಿಮಾಗಳನ್ನು ಖರೀದಿಸುತ್ತಿದ್ದಾರೆ.

ಪವನ್ ಕಲ್ಯಾಣ್ ಸಿನಿಮಾಗಳಿಗೆ ಹೆಚ್ಚಳವಾಯ್ತು ಬೇಡಿಕೆ, ದುಪ್ಪಟ್ಟು ಹಣಕ್ಕೆ ಮಾರಾಟ

Updated on: Jun 09, 2024 | 9:32 AM

ಪವನ್ ಕಲ್ಯಾಣ್ (Pawan Kalyan)​ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಆಂಧ್ರ ಸರ್ಕಾರದ ವಿರುದ್ಧ ಮಾಡಿದ ಅವರ ಹೋರಾಟ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ತಮ್ಮ ಜನಸೇನಾ ಪಕ್ಷದ 20 ಶಾಸಕರನ್ನು ಗೆಲ್ಲಿಸಿಕೊಂಡಿದ್ದು ಮಾತ್ರವಲ್ಲದೆ ತಾವು ಸಹ ದೊಡ್ಡ ಅಂತರದಲ್ಲಿ ಗೆದ್ದಿದ್ದಾರೆ. ಇಬ್ಬರು ಸಂಸದರನ್ನು ಸಹ ಗೆಲ್ಲಿಸಿಕೊಂಡಿದ್ದಾರೆ. ಹೊಸ ಪಕ್ಷಕ್ಕೆ ಇದು ಸಾಮಾನ್ಯ ಸಾಧನೆಯಲ್ಲ. ಪವನ್ ಅವರನ್ನು ಸ್ವತಃ ನರೇಂದ್ರ ಮೋದಿ ಹೊಗಳಿ ಕೊಂಡಾಡಿದ್ದಾರೆ. ಚುನಾವಣೆಯಲ್ಲಿ ಪವನ್​ಗೆ ಭಾರಿ ಜಯ ದೊರಕುತ್ತಿದ್ದಂತೆ ಅವರ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿರೀಕ್ಷಿತ ಮೊತ್ತಕ್ಕಿಂತಲೂ ದುಪ್ಪಟ್ಟು ಹಣಕ್ಕೆ ಅವರ ಸಿನಿಮಾಗಳು ಮಾರಾಟವಾಗುತ್ತಿವೆ.

ಪವನ್ ಕಲ್ಯಾಣ್ ಪ್ರಸ್ತುತ ‘ಓಜಿ’, ‘ಹರಿಹರ ವೀರ ಮಲ್ಲು’, ‘ಉಸ್ತಾದ್ ಗಬ್ಬರ್ ಸಿಂಗ್’ ಸಿನಿಮಾಗಳಲ್ಲಿ ನಟಿಸಿದ್ದು ಈ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಈ ಸಿನಿಮಾಗಳ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿವೆ. ಇದೀಗ ಓಜಿ ಸಿನಿಮಾದ ಒಟಿಟಿ ಹಕ್ಕು ನಿರೀಕ್ಷಿತ ಮೊತ್ತಕ್ಕಿಂತಲೂ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಇನ್ನುಳಿದ ಎರಡು ಸಿನಿಮಾಗಳ ಹಕ್ಕು ಖರೀದಿಗೂ ಬೇಡಿಕೆ ಶುರುವಾಗಿದೆ.

‘ಓಜಿ’ ಸಿನಿಮಾದ ಒಟಿಟಿ ಬಿಡುಗಡೆ ಹಕ್ಕು ಒಟಿಟಿ ದೈತ್ಯ ಎನಿಸಿಕೊಂಡಿರುವ ನೆಟ್​ಫ್ಲಿಕ್ಸ್​ ಪಾಲಾಗಿದ್ದು, ಭಾರಿ ದೊಡ್ಡ ಮೊತ್ತಕ್ಕೆ ಡಿಜಿಟಲ್ ಸ್ಕ್ರೀಮಿಂಗ್ ಹಕ್ಕನ್ನು ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ. ಸುಮಾರು 90 ಕೋಟಿ ರೂಪಾಯಿಗಳನ್ನು ನೆಟ್​​ಫ್ಲಿಕ್ಸ್, ‘ಓಜಿ’ ಸಿನಿಮಾದ ಡಿಜಿಟಲ್ ಹಕ್ಕಿಗಾಗಿ ನೀಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಗೂ ಮುನ್ನವೇ ಸಿನಿಮಾದ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಮಾಜಿ ಪತ್ನಿಯರು ಯಾರು? ಎಲ್ಲಿದ್ದಾರೆ? ವಿಚ್ಛೇದನಕ್ಕೆ ಕಾರಣವೇನು?

ಡಿಜಿಟಲ್ ಹಕ್ಕುಗಳಿಗೆ ಮಾತ್ರವೇ ಅಲ್ಲದೆ ಸಿನಿಮಾದ ವಿತರಣೆ ಹಕ್ಕು, ಆಡಿಯೋ ಹಕ್ಕಿಗೂ ಸಹ ಭಾರಿ ಮೊತ್ತದ ಹಣ ಕೊಡುವ ಆಫರ್​ಗಳು ಬಂದಿವೆ. ಪವನ್​ರ ಇತರೆ ಸಿನಿಮಾಗಳಾದ ‘ಹರಿ ಹರ ವೀರ ಮಲ್ಲು’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಿಗೂ ಸಹ ಭಾರಿ ಡಿಮ್ಯಾಂಡ್ ಬಂದಿದೆ. ಈ ಮೂರು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಲಿವೆ.

ಪ್ರಸ್ತುತ ಸದ್ದು ಮಾಡುತ್ತಿರುವ ‘ಓಜಿ’ ಸಿನಿಮಾವನ್ನು ಸುಜಿತ್ ನಿರ್ದೇಶನ ಮಾಡಿದ್ದಾರೆ. ಇದು ಗ್ಯಾಂಗ್​ಸ್ಟರ್ ಸಿನಿಮಾ ಆಗಿದ್ದು, ಪವನ್ ಕಲ್ಯಾಣ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ‘ಹರಿ ಹರ ವೀರ ಮಲ್ಲು’ ಸಿನಿಮಾ ಐತಿಹಾಸಿಕ ಸಿನಿಮಾ ಆಗಿದ್ದು, ಪವನ್ ಕಲ್ಯಾಣ್​ಗೆ ಸಹ ಇದು ಮೊದಲ ಐತಿಹಾಸಿಕ ಸಿನಿಮಾ ಆಗಿದೆ. ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಇನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಅವರದ್ದೇ ಸೂಪರ್ ಹಿಟ್ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಪವನ್ ಕಲ್ಯಾಣ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us