ಮತದಾನಕ್ಕೂ ಮುನ್ನ ಪವನ್ ಕಲ್ಯಾಣ್​ರ ಎರಡು ಸಿನಿಮಾ ಬಿಡುಗಡೆ

|

Updated on: Mar 16, 2024 | 5:13 PM

Pawan Kalyan: ಲೋಕಸಭೆ ಹಾಗೂ ಆಂಧ್ರ ವಿಧಾನಸಭೆ ಚುನಾವಣೆಗೆ ಮುನ್ನ ನಟ ಪವನ್ ಕಲ್ಯಾಣ್ ರ ಎರಡು ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಮತದಾನಕ್ಕೂ ಮುನ್ನ ಪವನ್ ಕಲ್ಯಾಣ್​ರ ಎರಡು ಸಿನಿಮಾ ಬಿಡುಗಡೆ
ಪವನ್ ಕಲ್ಯಾಣ್
Follow us on

ಪವನ್ ಕಲ್ಯಾಣ್ (Pawan Kalyan) ಸ್ಟಾರ್ ನಟರಾಗಿರುವ ಜೊತೆಗೆ ಸಕ್ರಿಯ ರಾಜಕಾರಣಿಯೂ ಆಗಿದ್ದಾರೆ. ಈ ಬಾರಿ ಲೋಕಸಭೆ ಹಾಗೂ ಆಂಧ್ರ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ ಪವನ್ ಕಲ್ಯಾಣ್. ತೆಲುಗು ರಾಜ್ಯಗಳಲ್ಲಿ ಚುನಾವಣೆಗೆ ಪ್ರಚಾರವಾಗಿ ಸಿನಿಮಾಗಳನ್ನು ಬಳಸುವುದು ಹೊಸದಲ್ಲ. ದಶಕಗಳಿಂದಲೂ ಅದು ನಡೆಯುತ್ತಲೇ ಬಂದಿದೆ. ಇತ್ತೀಚೆಗೆ ಅದು ತುಸು ಹೆಚ್ಚಾಗಿದೆ. ಟಿಡಿಪಿ ವಿರುದ್ಧ, ಪವನ್ ಕಲ್ಯಾಣ್ ವಿರುದ್ಧ ಅಭಿಪ್ರಾಯ ಮೂಡಿಸುವಂಥಹಾ ಕೆಲ ಸಿನಿಮಾಗಳು ಈಗಾಗಲೇ ಬಂದಿವೆ. ಟಿಡಿಪಿ ಸಹ, ಜಗನ್ ಸರ್ಕಾರವನ್ನು ದೂಷಿಸುವ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಿಸಿದೆ. ಇದೀಗ ಪವನ್ ಕಲ್ಯಾಣ್​ರ ನಟನೆಯ ಎರಡು ಸಿನಿಮಾಗಳು ಮತದಾನಕ್ಕೆ ಮುನ್ನ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ.

ಜಗನ್ ಜೀವನ ಕುರಿತಾದ, ‘ಯಾತ್ರ 2’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಟಿಡಿಪಿ ಅನ್ನು ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್​ರನ್ನು ವಿಲನ್ ರೀತಿ ಚಿತ್ರಿಸಿದ್ದ ‘ವ್ಯೂಹಂ’ ಸಿನಿಮಾ ಸಹ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಇವು ರಾಜಕೀಯದೊಟ್ಟಿಗೆ, ರಾಜಕೀಯದಲ್ಲಿರುವ ವ್ಯಕ್ತಿಗಳೊಟ್ಟಿಗೆ ನೇರವಾಗಿ ಸಂಬಂಧವಿರುವ ಸಿನಿಮಾಗಳು. ಆದರೆ ಇದೀಗ ಪವನ್ ಕಲ್ಯಾಣ್​ರ ಎರಡು ಸಿನಿಮಾಗಳು ಬಿಡುಗಡೆ ಆಗಲಿದ್ದು, ಎರಡೂ ಸಿನಿಮಾಗಳ ಕತೆಗಳು ಪ್ರಸ್ತುತ ರಾಜಕೀಯದೊಟ್ಟಿಗೆ ಸಂಬಂಧ ಇಲ್ಲದ ಕತೆಗಳಾಗಿರಲಿವೆ.

ಪವನ್ ಕಲ್ಯಾಣ್ ನಟನೆಯ ‘ಬ್ರೋ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು, ಆ ಸಿನಿಮಾ ಅಷ್ಟೇನೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಆ ಸಿನಿಮಾದಲ್ಲಿ ಸಾಯಿ ಧರಂ ತೇಜ್ ಸಹ ನಾಯಕರಾಗಿದ್ದರು. ಪವನ್ ಕಲ್ಯಾಣ್ ಕಳೆದ ಕೆಲವು ತಿಂಗಳುಗಳಿಂದಲೂ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಮೊದಲೇ ಪವನ್ ಕಲ್ಯಾಣ್ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದಾರೆ.

ಇದನ್ನೂ ಓದಿ:‘ಯಾತ್ರ 2’ ಪ್ರದರ್ಶನದ ವೇಳೆ ಪವನ್ ಕಲ್ಯಾಣ್-ಜಗನ್ ಅಭಿಮಾನಿಗಳ ನಡುವೆ ಮಾರಾಮಾರಿ

ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಚಿತ್ರೀಕರಣವನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಈ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದರೆ ಚುನಾವಣೆ ಸನಿಹದಲ್ಲಿದ್ದಾಗಲೇ ಈ ಸಿನಿಮಾಗಳನ್ನು ಬಿಡುಗಡೆ ಮಾಡಲು ಪವನ್ ಮೊದಲೇ ನಿಶ್ಚಯಿಸಿದ್ದರು ಎನ್ನಲಾಗುತ್ತಿದೆ.

‘ಹರಿ ಹರ ವೀರ ಮಲ್ಲು’ ಸಿನಿಮಾ ಐತಿಹಾಸಿಕ ಕತೆಯನ್ನು ಒಳಗೊಂಡಿದ್ದರೆ, ‘ಉಸ್ತಾದ್’ ಸಿನಿಮಾ ಆಕ್ಷನ್ ಕಾಮಿಡಿ ಕತೆಯನ್ನು ಒಳಗೊಂಡಿದೆ. ‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ‘ಉಸ್ತಾದ್’ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳನ್ನು ಚುನಾವಣೆ ಹತ್ತಿರದಲ್ಲಿದ್ದಾಗ ಬಿಡುಗಡೆ ಮಾಡಿದರೆ ಪವನ್​ ಕಲ್ಯಾಣ್​ರ ಜನಪ್ರಿಯತೆ ಹೆಚ್ಚುತ್ತದೆ ಎಂಬುದು ಯೋಜನೆ. ಪವನ್ ಕಲ್ಯಾಣ್, ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈಗಾಗಲೇ ಕ್ಷೇತ್ರ ಘೋಷಣೆಯೂ ಆಗಿದೆ. ಬಿಜೆಪಿ ಹಾಗೂ ಟಿಡಿಪಿ ಪಕ್ಷಗಳ ಬೆಂಬಲದೊಂದಿಗೆ ಪವನ್ ಕಣಕ್ಕೆ ಇಳಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ