ನಾಲ್ಕನೇ ದಿನ ಭರ್ಜರಿ ಗಳಿಕೆ ಮಾಡಿದ ‘ಪೆದ್ದಿ’; ಮುಂದಿದೆ ಚಾಲೆಂಜ್

ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರ ನಾಲ್ಕು ದಿನಗಳಲ್ಲಿ ಜಾಗತಿಕವಾಗಿ 233 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಭಾನುವಾರ ₹31.90 ಕೋಟಿ ಗಳಿಕೆಯೊಂದಿಗೆ ಒಟ್ಟು ₹157.15 ಕೋಟಿ ನೆಟ್ ಕಲೆಕ್ಷನ್ ಭಾರತದಲ್ಲಾಗಿದೆ. ಆದರೆ, ವಾರದ ದಿನಗಳ ಪರೀಕ್ಷೆ ಮತ್ತು ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರದ ಕುರಿತಾದ ವಿವಾದ ಚಿತ್ರದ ಮುಂದಿರುವ ಪ್ರಮುಖ ಸವಾಲುಗಳಾಗಿವೆ.

ನಾಲ್ಕನೇ ದಿನ ಭರ್ಜರಿ ಗಳಿಕೆ ಮಾಡಿದ ‘ಪೆದ್ದಿ’; ಮುಂದಿದೆ ಚಾಲೆಂಜ್
ರಾಮ್ ಚರಣ್
Image Credit source: Peddi Movie

Updated on: Jun 08, 2026 | 8:52 AM

ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸನ ನಿರ್ದೇಶನದ ‘ಪೆದ್ದಿ’ ಚಿತ್ರ ನಾಲ್ಕನೇ ದಿನವಾದ ಭಾನುವಾರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಭಾನುವಾರ ಭಾರತದಲ್ಲೇ ಬರೋಬ್ಬರಿ 31.90 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ 157.15 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ 187.02 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ.

ಈ ಸಿನಿಮಾ, ವಿದೇಶಿ ಮಾರುಕಟ್ಟೆಯಿಂದ 46 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಜಾಗತಿಕವಾಗಿ ಕೇವಲ ನಾಲ್ಕೇ ದಿನಕ್ಕೆ 233.02 ಕೋಟಿ ಗಳಿಸಿ ದಾಖಲೆ ಬರೆದಿದೆ. ಚಿತ್ರದ ಯಶಸ್ಸಿಗೆ ತೆಲುಗು ವರ್ಷನ್‌ನ ಭರ್ಜರಿ ಪ್ರದರ್ಶನ ಕಾಣುತ್ತಿರುವುದೇ ಕಾರಣ ಎನ್ನಲಾಗಿದೆ.

ನಾಲ್ಕು ದಿನಗಳ ಸುದೀರ್ಘ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ‘ಪೆದ್ದಿ’ ಚಿತ್ರಕ್ಕೆ ಇನ್ನುಳಿದ ವಾರದ ದಿನಗಳು ಅಸಲಿ ಪರೀಕ್ಷೆಯಾಗಿವೆ. ಸಾಮಾನ್ಯವಾಗಿ ವೀಕೆಂಡ್ ಮುಗಿದ ನಂತರ ಸೋಮವಾರದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುವುದು ಸಹಜ. ಸೋಮವಾರದಿಂದ ಗುರುವಾರದವರೆಗೆ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಮತ್ತು ಕಲೆಕ್ಷನ್ ಸ್ಥಿರವಾಗಿ ಕಾಯ್ದುಕೊಳ್ಳುವುದು ಚಿತ್ರದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಈ ದಿನಗಳಲ್ಲಿ ಸಿನಿಮಾ ಪ್ರದರ್ಶನ ಹೇಗಿರಲಿದೆ ಎಂಬುದರ ಮೇಲೆ ಚಿತ್ರದ ಒಟ್ಟಾರೆ ಲೈಫ್‌ಟೈಮ್ ಕಲೆಕ್ಷನ್ ನಿರ್ಧಾರವಾಗಲಿದೆ.

ಇದನ್ನೂ ಓದಿ: 200 ಕೋಟಿ ರೂಪಾಯಿ ಕ್ಲಬ್ ಸೇರಿದ ರಾಮ್ ಚರಣ್ ಸಿನಿಮಾ ‘ಪೆದ್ದಿ’; ಆದರೂ ಇದೆ ಸವಾಲು

ವಿವಾದ ಮಾಡಿಕೊಂಡ ಸಿನಿಮಾ

ಒಂದೆಡೆ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ಚಿತ್ರದಲ್ಲಿ ಜಾನ್ವಿ ಕಪೂರ್ ಪಾತ್ರವನ್ನು ಬಿಂಬಿಸಿರುವ ರೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿವಾದದ ಕುರಿತು ಖ್ಯಾತ ನಟಿ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದಾರೆ. ‘ನಾನು ಇನ್ನು ಸಿನಿಮಾ ನೋಡಿಲ್ಲ. ಆದರೆ ಚಿತ್ರರಂಗದಲ್ಲಿ ಮಹಿಳೆಯರನ್ನು ಹೀಗೆ ಬಿಂಬಿಸುವ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಬೆಂಬಲಿಸುತ್ತೇನೆ. ನಟ-ನಟಿಯರಿಗೆ ತಮ್ಮದೇ ಆದ ಮಿತಿಗಳಿರಬೇಕು. ದೃಶ್ಯವೊಂದರಲ್ಲಿ ನಟಿಸುವಾಗ ತಮಗೆ ಅಸಹಜ ಎನಿಸಿದರೆ ನಟರೇ ಅದನ್ನು ಖಡಾಖಂಡಿತವಾಗಿ ನಿರಾಕರಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ನಾವು ಅಸಹಾಯಕರಾಗಲು ಸಾಧ್ಯವಿಲ್ಲ, ನಮ್ಮ ಆದ್ಯತೆಗಳು ಏನೋ ಅದರಂತೆ ನಾವು ಧ್ವನಿ ಎತ್ತಬಹುದು’ ಎಂದು ನಿತ್ಯಾ ಮೆನನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us