ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಹೊರಕ್ಕೆ: ಶ್ರೀಲೀಲಾ ಕಾರಣವೇ?

|

Updated on: Jun 20, 2023 | 3:34 PM

Pooja Hegde: ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದಿಂದ ನಟಿ ಪೂಜಾ ಹೆಗ್ಡೆ ಹೊರಗೆ ಹೋಗಿದ್ದಾರೆ.

ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಹೊರಕ್ಕೆ: ಶ್ರೀಲೀಲಾ ಕಾರಣವೇ?
ಗುಂಟೂರು ಖಾರಂ
Follow us on

ಮಹೇಶ್ ಬಾಬು (Mahesh Babu) ನಟನೆಯ ಗುಂಟೂರು ಖಾರಂ (Gunturu Karam) ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿಯೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣವೂ ಈಗಾಗಲೇ ಆಗಿದೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದೆ. ಆದರೆ ಈಗ ಹಠಾತ್ತನೆ ಚಿತ್ರತಂಡದಿಂದ ಹಾಟ್ ನ್ಯೂಸ್ ಒಂದು ಹೊರಬಂದಿದೆ. ಸಿನಿಮಾದ ನಾಯಕ ನಟಿ ಪೂಜಾ ಹೆಗ್ಡೆ (Pooja Hegde) ಸಿನಿಮಾದಿಂದ ಹೊರಗೆ ಬಂದಿದ್ದಾರಂತೆ!

ಗುಂಟೂರು ಖಾರಂ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ, ಅವರೊಟ್ಟಿಗೆ ಕನ್ನಡತಿ ಶ್ರೀಲೀಲಾ ಸಹ ಇದ್ದಾರೆ. ಸಿನಿಮಾದ ಬಹುಭಾಗ ಚಿತ್ರೀಕರಣ ಮುಗಿದಿರುವಾಗ ಈಗ ಹಠಾತ್ತನೆ ಸಿನಿಮಾದ ಮುಖ್ಯ ನಟಿಯನ್ನೇ ಬದಲಾಯಿಸಿದೆ ಚಿತ್ರತಂಡ. ಈ ಕಾರಣಕ್ಕಾಗಿ ಇದೀಗ ಮತ್ತೊಮ್ಮೆ ಸಿನಿಮಾದ ಹಲವು ಭಾಗಗಳನ್ನು ಮರುಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿದೆ.

ಡೇಟ್ಸ್ ಸಮಸ್ಯೆಯಿಂದ ಪೂಜಾ ಹೆಗ್ಡೆಯನ್ನು ಬದಲಾಯಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆಯಾದರೂ ಒಳಗಿನ ವಿಷಯ ಬೇರೆಯೇ ಇದೆ. ಸಿನಿಮಾದಲ್ಲಿ ಶ್ರೀಲೀಲಾ ಸಹ ನಾಯಕಿಯಾಗಿದ್ದು, ಶ್ರೀಲೀಲಾರಿಂದಾಗಿ ಪೂಜಾ ಹೆಗ್ಡೆ ಅನ್​ಕಂಫರ್ಟೆಬಲ್ ಆಗಿದ್ದಾರೆ ಎನ್ನಲಾಗುತ್ತಿದೆ. ಅದ್ಭುತ ಡ್ಯಾನ್ಸರ್ ಹಾಗೂ ನಟಿ ಆಗಿರುವ ಶ್ರೀಲೀಲಾರ ಪ್ರತಿಭೆಯಿಂದ ಪೂಜಾ ಹೆಗ್ಡೆ ಅಭದ್ರತಾ ಭಾವ ಅನುಭವಿಸಿದ್ದರಂತೆ. ಶ್ರೀಲೀಲಾರನ್ನು ಸಿನಿಮಾದಿಂದ ತೆಗೆಯಲು ಅಥವಾ ಶ್ರೀಲೀಲಾರಿಗೆ ಕಡಿಮೆ ಸ್ಕ್ರೀನ್ ಟೈಮ್ ಕೊಡುವಂತೆ ಪೂಜಾ ಹೆಗ್ಡೆ ಒತ್ತಾಯಿಸಿದ್ದರು. ಆದರೆ ನಿರ್ದೇಶಕ ತ್ರಿವಿಕ್ರಮ್ ಒಪ್ಪದ ಕಾರಣಕ್ಕೆ ಪೂಜಾ ಹೆಗ್ಡೆ ಸರಿಯಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ ಎನ್ನಲಾಗುತ್ತಿದೆ. ಶ್ರೀಲೀಲಾ ಬಗ್ಗೆ ಪೂಜಾ ಹೆಗ್ಡೆ ಸೆಟ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಳು ಈ ಹಿಂದೆಯೂ ಕೇಳಿ ಬಂದಿದ್ದವು.

ಶ್ರೀಲೀಲಾ ತಮ್ಮ ಅದ್ಭುತ ನೃತ್ಯ ಹಾಗೂ ನಟನಾ ಪ್ರತಿಭೆಯಿಂದ ತೆಲುಗು ಚಿತ್ರರಂಗದಲ್ಲಿ ಬಹುವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಒಂದರ ಹಿಂದೊಂದು ಸ್ಟಾರ್ ನಟರ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ, ತೆಲುಗು ರಾಜ್ಯಗಳಲ್ಲಿ ಶ್ರೀಲೀಲಾಗೆ ತಮ್ಮದೇ ಆದ ಅಭಿಮಾನಿ ಬಳಗವೂ ಶುರುವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ತ್ರಿವಿಕ್ರಮ್ ಅವರು ಮೊದಲೇ ನಿಗದಿ ಪಡಿಸಿದ್ದಕ್ಕಿಂತಲೂ ಶ್ರೀಲೀಲಾಗೆ ಹೆಚ್ಚು ಸ್ಕ್ರೀನ್ ಟೈಮ್ ನೀಡಿದ್ದಾರೆ. ಇದು ಮುಖ್ಯ ನಾಯಕಿಯಾಗಿದ್ದ ಪೂಜಾ ಹೆಗ್ಡೆಗೆ ಸರಿ ಬಂದಿಲ್ಲ.

ಇದನ್ನೂ ಓದಿ: ಶ್ರೀಲೀಲಾ ಇರುವಿಕೆಯಿಂದ ಪೂಜಾ ಹೆಗ್ಡೆಗೆ ಕಾಡಿದೆ ಚಿಂತೆ? ಸೈಲೆಂಟ್ ಆದ ಮಂಗಳೂರು ಬೆಡಗಿ

ಗುಂಟೂರು ಖಾರಂ ಸಿನಿಮಾದ ಚಿತ್ರೀಕರಣ ಮೊದಲಿನಿಂದಲೂ ನಿಧಾನಕ್ಕೆ ಸಾಗುತ್ತಿದೆ. ಕತೆಯಲ್ಲಿ ಬದಲಾವಣೆ, ಕೆಲವು ತಂತ್ರಜ್ಞರ ಬದಲಾವಣೆ ಸಹ ಇದಕ್ಕೆ ಕಾರಣ. ಇದೀಗ ಪೂಜಾ ಹೆಗ್ಡೆ ಚಿತ್ರತಂಡದಿಂದ ಹೊರ ಹೋಗಿರುವ ಜೊತೆಗೆ ಸಂಗೀತ ನಿರ್ದೇಶಕರನ್ನೂ ನಿರ್ದೇಶಕ ತ್ರಿವಿಕ್ರಮ್ ಬದಲಾಯಿಸಿದ್ದಾರೆ. ಮೊದಲಿಗೆ ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ದ ಎಸ್ ತಮನ್ ಅನ್ನು ಬದಲಾಯಿಸಿ ಆ ಜಾಗಕ್ಕೆ ಅನಿರುದ್ಧ್ ರವಿಚಂದ್ರನ್ ಅನ್ನು ನೇಮಿಸಿಕೊಳ್ಳಲಾಗಿದೆ.

ನಟಿ ಶ್ರೀಲೀಲಾ ಇದೀಗ ತೆಲುಗಿನಲ್ಲಿ ಒಂದರ ಹಿಂದೊಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ರವಿತೇಜ ಜೊತೆಗೆ ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿರುವ ಶ್ರೀಲೀಲಾ, ತೆಲುಗಿನ ಇನ್ನೂ ಕೆಲವು ದೊಡ್ಡ ಸ್ಟಾರ್​ಗಳೊಟ್ಟಿಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಪವನ್ ಕಲ್ಯಾಣ್ ಜೊತೆಗೆ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ