ಆದಿಪುರುಷ್ ಅದೃಷ್ಟ: ಮೆಗಾಸ್ಟಾರ್ ಚಿರಂಜೀವಿ ಹೇಳಿದ ಮಾತು ನೆನಪಿಸಿಕೊಂಡ ಪ್ರಭಾಸ್

|

Updated on: Jun 06, 2023 | 11:15 PM

Prabhas: ಆದಿಪುರುಷ್ ಸಿನಿಮಾ ಪ್ರೀ ರಿಲೀಸ್ ಇವೆಂಟ್​ನಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಪ್ರಭಾಸ್, ಮೆಗಾಸ್ಟಾರ್ ಚಿರಂಜೀವಿ ಹೇಳಿದ ಮಾತು ನೆನಪು ಮಾಡಿಕೊಂಡರು.

ಆದಿಪುರುಷ್ ಅದೃಷ್ಟ: ಮೆಗಾಸ್ಟಾರ್ ಚಿರಂಜೀವಿ ಹೇಳಿದ ಮಾತು ನೆನಪಿಸಿಕೊಂಡ ಪ್ರಭಾಸ್
ಪ್ರಭಾಸ್
Follow us on

ಆದಿಪುರುಷ್ (Adipurush) ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇಂದು (ಜೂನ್ 06) ತಿರುಪತಿಯಲ್ಲಿ ಬಹು ಅದ್ಧೂರಿಯಾಗಿ ನಡೆದಿದೆ. ಚಿನ್ನ ಜೀಯಾರ್ ಸ್ವಾಮೀಜಿ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖ ಸದಸ್ಯರು ತಮ್ಮ ಆದಿಪುರುಷ್ ಸಿನಿಮಾ ಬಗ್ಗೆ ಮಾತನಾಡಿದ ಜೊತೆಗೆ ಪ್ರಭಾಸ್ (Prabhas) ವ್ಯಕ್ತಿತ್ವವನ್ನು ಕೊಂಡಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ನಟ ಪ್ರಭಾಸ್, ”ಆದಿಪುರುಷ್ ಮತ್ತೊಂದು ಸಿನಿಮಾ ಅಲ್ಲ. ಇದು ವಿಶೇಷ. ಈ ಸಿನಿಮಾ ಮಾಡಿದ್ದು ನನ್ನ ಅದೃಷ್ಟ” ಎಂದರು.

ನಟ ಮೆಗಾಸ್ಟಾರ್ ಚಿರಂಜೀವಿ ಹೇಳಿದ ಮಾತನ್ನು ವೇದಿಕೆ ಮೇಲೆ ನೆನಪು ಮಾಡಿಕೊಂಡ ನಟ ಪ್ರಭಾಸ್, ”ಮೆಗಾಸ್ಟಾರ್ ಚಿರಂಜೀವಿ ಒಮ್ಮೆ ಸಿಕ್ಕಿ ರಾಮಾಯಣ ಆಧರಿಸಿದ ಸಿನಿಮಾ ಮಾಡುತ್ತಿದ್ದೀಯ ಎಂದು ಕೇಳಿದರು. ಹೌದು ಸರ್ ಎಂದೆ. ರಾಮಾಯಣದ ಕತೆ ಹುಡುಕಿಕೊಂಡು ಬಂದು ಆ ಸಿನಿಮಾದಲ್ಲಿ ನೀನು ನಟಿಸುತ್ತಿರುವುದು ಅದೃಷ್ಟ ಎಂದರು” ಎಂದು ನೆನಪು ಮಾಡಿಕೊಂಡರು ಪ್ರಭಾಸ್, ”ಈ ಸಿನಿಮಾ ನಿಜಕ್ಕೂ ನಮ್ಮ ಪಾಲಿಗೆ ಅದೃಷ್ಟವಾಗಿತ್ತು. ಜೊತೆಗೆ ಸಾಕಷ್ಟು ಕಷ್ಟಗಳನ್ನು ಸಹ ನಾವು ಎದುರಿಸಿದೆವು. ಸಿನಿಮಾ ಆರಂಭ ಮಾಡಿದಾಗಲೇ ಹಲವು ಕಷ್ಟಗಳು ಬಂದವು ಆದರೆ ಎಲ್ಲವನ್ನೂ ನಾವು ದಾಟಿ ಬಂದೆವು” ಎಂದರು ಪ್ರಭಾಸ್.

ಈ ಸಿನಿಮಾಕ್ಕಾಗಿ ಇಡೀ ತಂಡ ಬಹಳ ಕಷ್ಟಪಟ್ಟಿದೆ. ಅದರಲ್ಲಿಯೂ ಓಂ ರಾವತ್ ಅಂತೂ ಬಹಳ ಫೈಟ್ ಮಾಡಿದ್ದಾರೆ. ದಿನದ 20 ಗಂಟೆ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕ ಭೂಷಣ್ ಈ ಸಿನಿಮಾವನ್ನು ಬಹಳ ವಿಶೇಷವಾಗಿ ತೆಗೆದುಕೊಂಡಿದ್ದರು. ಅವರ ನಿರ್ಮಾಣ ಸಂಸ್ಥೆಯಿಂದ ವರ್ಷಕ್ಕೆ 20-30 ಸಿನಿಮಾ ಬಿಡುಗಡೆ ಆಗುತ್ತಿದ್ದರೂ ಸಹ ಆದಿಪುರುಷ್ ಸಿನಿಮಾವನ್ನು ಬಹಳ ವಿಶೇಷವಾಗಿ ಪರಿಗಣಿಸಿ ಇದಕ್ಕಾಗಿ ಕೆಲಸ ಮಾಡಿದರು. ಅವರ ತಂದೆಯ ಆಸೆಯನ್ನು ಅವರು ನನಸು ಮಾಡುತ್ತಿದ್ದಾರೆ” ಎಂದರು ಪ್ರಭಾಸ್.

ಸಿನಿಮಾದಲ್ಲಿ ತಮ್ಮೊಟ್ಟಿಗೆ ಲಕ್ಷ್ಮಣನ ಪಾತ್ರ, ಹನುಮಂತನ ಪಾತ್ರದಲ್ಲಿ ನಟಿಸಿದ ಕಲಾವಿದರನ್ನು ಹೊಗಳಿದ ನಟ ಪ್ರಭಾಸ್, ಸೀತಾ ಮಾತೆಯ ಪಾತ್ರದಲ್ಲಿ ನಟಿಸಿದ ಕೃತಿ ಸೆನನ್ ಅನ್ನು ಹೊಗಳುತ್ತಾ, ಸೀತೆಯ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆ ಗೊಂದಲವಿತ್ತು. ಒಳ್ಳೆಯ ನಟಿಯಾಗಿರುವ ಜೊತೆಗೆ ನಿಜ ಜೀವನದಲ್ಲಿ ಒಳ್ಳೆಯ ಹುಡುಗಿಯೂ ಆಗಿರಬೇಕು ಅಂಥಹಾ ಹುಡುಗಿಯನ್ನು ಆಯ್ಕೆ ಮಾಡಬೇಕಿತ್ತು ಕೊನೆಗೂ ನಮಗೆ ಅಂಥಹಾ ಹುಡುಗಿಯೇ ದೊರಕಿದರು ಅವರೇ ಕೃತಿ ಸೆನನ್. ಅವರದ್ದು ಅದ್ಭುತವಾದ ನಟನೆ, ಕೇವಲ ಎಕ್ಸ್​ಪ್ರೆಶನ್ಸ್​ಗಳಲ್ಲಿ ಅವರು ಹಿಡಿದಿಟ್ಟುಕೊಂಡು ಬಿಡುತ್ತಾರೆ ಎಂದು ಹೊಗಳಿದರು ಪ್ರಭಾಸ್.

ಈ ಸಿನಿಮಾ ಇಷ್ಟು ದೂರ ಬಂದಿರುವುದು ನಿಮ್ಮ ನೆರವಿನಿಂದ ನಿಮ್ಮ ಬೆಂಬಲದಿಂದ. ಆರಂಭದಲ್ಲಿ ಅಭಿಮಾನಿಗಳು ನಮ್ಮ ಕೈ ಹಿಡಿಯದೇ ಇದ್ದಿದ್ದರೆ ನಮಗೆ ಕಷ್ಟವಾಗಿರುತ್ತಿತ್ತು. ಟೀಸರ್​ಗಳನ್ನು ಬಿಟ್ಟಾಗ ನೀವು ನೀಡಿದ ಬೆಂಬಲ ನೋಡಿ ಥ್ರಿಲ್ ಆದ ಓಂ ರಾವತ್ ಈ ಸಿನಿಮಾದ ಟ್ರೈಲರ್ ಆಗಲಿ ಸಿನಿಮಾದ ಕುರಿತ ಯಾವುದೇ ಆಗಲಿ ಮೊದಲು ಅದನ್ನು ಆಂಧ್ರ-ತೆಲಂಗಾಣದ ಅಭಿಮಾನಿಗಳೇ ನೋಡಬೇಕು ಎಂದುಕೊಂಡು ಈ ಕಾರ್ಯಕ್ರಮವನ್ನು ಇಲ್ಲಿಯೇ ಮಾಡಿದೆವು ನಮಗೆ ಅಭಿಮಾನಿಗಳೇ ಶಕ್ತಿ, ನಮ್ಮ ಟೀಸರ್, ಇಂದು ಬಿಡುಗಡೆ ಮಾಡಿದ ಟ್ರೈಲರ್ ನಿಮಗೆ ಇಷ್ಟ ಆಗಿದೆ ಎಂದುಕೊಂಡಿದ್ದೇನೆ” ಎಂದು ತಮ್ಮ ಮೆಚ್ಚಿನ ಡಾರ್ಲಿಂಗ್ಸ್​ಗಳನ್ನು ಮಾತನಾಡಿಸಿದರು ಪ್ರಭಾಸ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ