‘ಈಠಾ’ ಟೀಸರ್ ರಿಲೀಸ್: ಲಾವಣಿ ಕಲಾವಿದೆಯಾಗಿ ಶ್ರದ್ಧಾ ಕಪೂರ್ ನಟನೆಗೆ ಫ್ಯಾನ್ಸ್ ಫಿದಾ
‘ಸ್ತ್ರೀ’ ಮತ್ತು ‘ಸ್ತ್ರೀ 2’ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ‘ಮ್ಯಾಡಾಕ್ ಫಿಲ್ಮ್ಸ್’ ಸಂಸ್ಥೆಯೊಂದಿಗೆ ಶ್ರದ್ಧಾ ಕಪೂರ್ ಅವರು ‘ಈಠಾ’ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಲಾವಣಿ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಈಠಾ’ (Eetha) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಪ್ರಸಿದ್ಧ ತಮಾಶಾ ಮತ್ತು ಲಾವಣಿ ಜಾನಪದ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ಶ್ರದ್ಧಾ ಕಪೂರ್ (Shraddha Kapoor) ಅವರ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ‘ಛಾವಾ’ ಚಿತ್ರದ ಖ್ಯಾತಿಯ ಲಕ್ಷ್ಮಣ್ ಉಟೇಕರ್ ಅವರು ‘ಈಠಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಮೂಡುವಂತಾಗಿದೆ.
ಲಾವಣಿ ಕಲಾವಿದರ ಅದ್ಭುತ ನೃತ್ಯ ಪ್ರದರ್ಶನದೊಂದಿಗೆ ಟೀಸರ್ ಆರಂಭವಾಗುತ್ತದೆ. ಆದರೆ, ನೆರೆದಿರುವ ಉದ್ರಿಕ್ತ ಜನರು ನೃತ್ಯ ಪ್ರದರ್ಶನವನ್ನು ತಡೆದು, ಈಠಾ ವೇದಿಕೆಗೆ ಬರಬೇಕೆಂದು ಒತ್ತಾಯಿಸುತ್ತಾರೆ. ಮತ್ತೊಂದೆಡೆ, 9 ತಿಂಗಳ ಗರ್ಭಿಣಿಯಾಗಿರುವ ಈಠಾ ಬ್ಯಾಕ್ಸ್ಟೇಜ್ನಲ್ಲಿ ನೃತ್ಯಕ್ಕೆ ಸಿದ್ಧವಾಗುತ್ತಿರುತ್ತಾಳೆ. ಅದೇ ಸಮಯದಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ.
‘ಈ ಪರಿಸ್ಥಿತಿಯಲ್ಲಿ ಸ್ಟೇಜ್ ಮೇಲೆ ಹೋದರೆ ನೀನು ಸಾಯಬಹುದು, ನೃತ್ಯ ಮಾಡೋದು ಬೇಡ’ ಎಂದು ಹಿನ್ನೆಲೆಯಲ್ಲಿ ಧ್ವನಿಯೊಂದು ಎಚ್ಚರಿಸುತ್ತದೆ. ಆದರೆ, ಇದಕ್ಕೆ ಒಪ್ಪದ ಈಠಾ, ಹೊಸ ಇತಿಹಾಸ ಸೃಷ್ಟಿಸಲು ವೇದಿಕೆ ಏರುತ್ತಾಳೆ. ಮಗುವಿಗೆ ಜನ್ಮ ನೀಡಿದ ತಕ್ಷಣವೇ ಮತ್ತೆ ವೇದಿಕೆಗೆ ಮರಳಿ ನೃತ್ಯ ಮುಂದುವರಿಸುವ ದೃಶ್ಯ ಮೈ ಜುಂ ಎನಿಸುವಂತಿದೆ. ಟೀಸರ್ನ ಕೊನೆಯಲ್ಲಿ ಆಕೆಯನ್ನು ‘ಬಿರುಗಾಳಿ’ ಎಂದು ಕರೆಯಲಾಗಿದೆ.
‘ಈಠಾ’ ಸಿನಿಮಾ ಟೀಸರ್:
ಚಿತ್ರಮಂದಿರಗಳಲ್ಲಿ ‘ಕಾಕ್ಟೇಲ್ 2’ ಸಿನಿಮಾದ ಜೊತೆಗೆ ‘ಈಠಾ’ ಟೀಸರ್ ಪ್ರದರ್ಶಿಸಲಾಗಿತ್ತು. ಆದರೆ, ಥಿಯೇಟರ್ನಲ್ಲಿದ್ದ ಪ್ರೇಕ್ಷಕರು ಮೊಬೈಲ್ನಲ್ಲಿ ಚಿತ್ರೀಕರಿಸಿದ ಟೀಸರ್ನ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿ ವೈರಲ್ ಆದವು. ಕ್ರೇಜ್ ಹೆಚ್ಚಾಗುತ್ತಿದ್ದಂತೆಯೇ ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಸೀರೆಯಲ್ಲಿರುವ ತಮ್ಮ ಲುಕ್ ಹಂಚಿಕೊಂಡು, ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡಿದರು. ಚಿತ್ರವು ಆಗಸ್ಟ್ 28ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: ಶ್ರದ್ಧಾ ಕಪೂರ್ ಕತ್ತನ್ನು ಹಿಡಿದು ಕಾರಿನೊಳಗೆ ನೂಕಿದ ಬಾಯ್ಫ್ರೆಂಡ್; ಫ್ಯಾನ್ಸ್ ಆಕ್ರೋಶ
ಬಡತನದ ಹಿನ್ನೆಲೆಯಿಂದ ಬಂದು ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಜಾನಪದ ರಂಗಭೂಮಿ ಕಲಾವಿದೆಯಾಗಿ ಬೆಳೆದ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನದ ಸ್ಫೂರ್ತಿದಾಯಕ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ. ರಣದೀಪ್ ಹೂಡಾ ಮತ್ತು ಅನಂತ್ ಜೋಶಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




