
ಪ್ರಕಾಶ್ ರೈ (Prakash Raj) ಬಹುಭಾಷಾ ನಟ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ವರ್ಷಗಳಿಂದಲೂ ನಟಿಸುತ್ತಾ ಬರುತ್ತಿದ್ದಾರೆ. ಮೂಲತಃ ಕರ್ನಾಟಕದವರಾದರೂ ಪ್ರಕಾಶ್ ರೈ ಹೆಚ್ಚಿಗೆ ನಟಿಸಿರುವುದು ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲೇ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಅವರು ರಾಜಕೀಯದಲ್ಲಿ, ಸಾಮಾಜಿಕವಾಗಿಯೂ ಸಕ್ರಿಯವಾಗಿರುತ್ತಾರೆ. ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಪ್ರಕಾಶ್ ರೈ, ಕರ್ನಾಟಕದ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳ ರಾಜಕೀಯದ ಬಗ್ಗೆಯೂ ಆಸಕ್ತಿ ಉಳ್ಳವರಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯ ವಿದ್ಯಮಾನಗಳ ಟೀಕೆ, ವಿಮರ್ಶೆಗಳನ್ನು ಮಾಡುತ್ತಾರೆ. ಆದರೆ ಇದೇ ಕಾರಣಕ್ಕೆ ಖುದ್ದು ಸಾಕಷ್ಟು ಟೀಕೆ ಮತ್ತು ನಿಂದನೆಗೂ ಗುರಿ ಆಗುತ್ತಾರೆ.
ಪ್ರಕಾಶ್ ರೈ, ಬಿಜೆಪಿಯ ವಿರುದ್ಧ ಪದೇ ಪದೇ ಮಾತನಾಡುತ್ತಿರುತ್ತಾರೆ. ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಅವರು ಬಿಜೆಪಿ ಜೊತೆ ಕೈಜೋಡಿಸಿದ ಬಳಿಕ ಅವರನ್ನೂ ಸಹ ಆಗಾಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಪವನ್ ಕಲ್ಯಾಣ್ ಅವರು ತೆಲಂಗಾಣ ರಾಜ್ಯದಲ್ಲಿ ಬಹಿರಂಗ ಸಮಾವೇಶ ಮಾಡಲು ಕೋರಿದ್ದ ಅನುಮತಿಯನ್ನು ತೆಲಂಗಾಣ ಸರ್ಕಾರ ನಿರಾಕರಿಸಿತ್ತು. ಇದರ ವಿರುದ್ಧ ಮಾತನಾಡಿದ್ದ ಡಿಸಿಎಂ ಪವನ್ ಕಲ್ಯಾಣ್, ‘ತೆಲಂಗಾಣ ಯಾರ ಅಪ್ಪನ ಆಸ್ತಿ ಅಲ್ಲ’ ಎಂದು ಗುಡುಗಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ನೀವು ಬರುವುದಾದರೆ ಬನ್ನಿ, ಆದರೆ ಏಕೆ ಬರುತ್ತಿದ್ದೀರಿ ಎಂದು ಹೇಳಿ ಬನ್ನಿ, ಸುಮ್ಮನೆ ಬರುತ್ತಿದ್ದೀರಾ? ಏನಾದರೂ ಕೆಲಸ ಇದ್ದು ಬರುತ್ತಿದ್ದೀರಾ? ಒಬ್ಬರೇ ಬರುತ್ತಿದ್ದೀರಾ? ಜೊತೆಗಾರರನ್ನೂ ಕರೆದುಕೊಂಡು ಬರುತ್ತಿದ್ದೀರಾ?’ ಎಂದು ಕಾಲೆಳೆದಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಹಾಗೂ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಬಂಡ್ಲ ಗಣೇಶ್, ಪ್ರಕಾಶ್ ರೈ ಅವರನ್ನು ಏಕ ವಚನದಲ್ಲಿ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:‘ಫೈಲ್ಸು-ಪೈಲ್ಸು’ಗಳಿಗೆಲ್ಲ ಪ್ರಶಸ್ತಿ: ಪ್ರಕಾಶ್ ರೈ ವ್ಯಂಗ್ಯ
ಪ್ರಕಾಶ್ ರೈ ಅವರ ಟ್ವೀಟ್ಗೆ ಮರು ಟ್ವೀಟ್ ಮಾಡಿರುವ ಬಂಡ್ಲ ಗಣೇಶ್, ‘ಸುಮ್ಮನೆ ಯಾಕೆ ಎಲ್ಲದರಲ್ಲೂ ಮೂಗು ತೂರಿಸುವುದು? ನೀನ್ಯಾರು?, ನೀನು ತೆಲುಗಿನವನಾ? ತಮಿಳಿನವನಾ? ಅಥವಾ ಕನ್ನಡಿಗನಾ? ನಿನ್ನ ಊರು ಯಾವುದು? ನಿನ್ನ ಕತೆ ಏನು? ಪ್ರತಿ ವಿಷಯದಲ್ಲೂ ಜಡ್ಜ್ಮೆಂಟ್ ಕೊಡಲು ನೀನೇನು ಕಲೆಕ್ಟರ್ರಾ? ಅಥವಾ ದೇಶದ ಪ್ರಧಾನಿಯಾ? ಎಲ್ಲಿ ನೋಡಿದರೂ ನೀನೆ, ನಿನ್ನ ಜೀವನಕ್ಕೆ ಏನಾದರೂ ಕೆಲಸ ಹುಡುಕಿಕೊ, ಪ್ರತಿ ವಿಷಯದಲ್ಲೂ ಮಧ್ಯಕ್ಕೆ ತೂರಿ ಹೀರೋ ಅಂದುಕೊಳ್ಳಬೇಡ. ಮೊದಲು ನಿನ್ನ ಅಡ್ರೆಸ್ ನೀನು ಹುಡುಕಿಕೊ, ನಂತರ ಪ್ರಪಂಚವನ್ನು ಬದಲಾಯಿಸಲು ಯತ್ನಿಸು’ ಎಂದಿದ್ದಾರೆ ಬಂಡ್ಲ ಗಣೇಶ್.
ಬಂಡ್ಲ ಗಣೇಶ್ ಅವರ ಪ್ರತಿಕ್ರಿಯೆಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಪ್ರಕಾಶ್ ರೈ ಅಂಥಹಾ ಹಿರಿಯ ನಟರನ್ನು ಏಕವಚನದಲ್ಲಿ ಟೀಕೆ ಮಾಡಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದಾರೆ. ಬಂಡ್ಲ ಗಣೇಶ್ ಅವರು ಪವನ್ ಕಲ್ಯಾಣ್ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಬಂಡ್ಲ ಗಣೇಶ್, ತಮ್ಮ ಆಕ್ರೋಶ ಭರಿತ ಭಾಷಣಗಳು, ಸಂದರ್ಶನಗಳಿಂದಲೇ ಜನಪ್ರಿಯರು. ಈಗ ಪ್ರಕಾಶ್ ರೈ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ