ಚಾಮುಂಡೇಶ್ವರಿ ದರ್ಶನ ಪಡೆದ ರಾಮ್​ ಚರಣ್​; ಮೈಸೂರಿನಲ್ಲಿ ‘ಗೇಮ್​ ಚೇಂಜರ್​’ ಚಿತ್ರೀಕರಣ

ಬಹುನಿರೀಕ್ಷಿತ ‘ಗೇಮ್​ ಚೇಂಜರ್​’ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡ ನಟ ರಾಮ್​ ಚರಣ್​ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ. ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಅವರ ಜೊತೆ ‘ಗೇಮ್​ ಚೇಂಜರ್​’ ಚಿತ್ರತಂಡದವರು ಕೂಡ ಸಾಥ್​ ನೀಡಿದ್ದಾರೆ.

ಚಾಮುಂಡೇಶ್ವರಿ ದರ್ಶನ ಪಡೆದ ರಾಮ್​ ಚರಣ್​; ಮೈಸೂರಿನಲ್ಲಿ ‘ಗೇಮ್​ ಚೇಂಜರ್​’ ಚಿತ್ರೀಕರಣ
ರಾಮ್​ ಚರಣ್​

Updated on: Dec 03, 2023 | 9:13 AM

ಮೈಸೂರು: ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್​ ಚರಣ್​ (Ram Charan) ಅವರ ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಭಾನುವಾರ (ಡಿಸೆಂಬರ್​ 3) ಮುಂಜಾನೆ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ‘ಗೇಮ್​ ಚೇಂಜರ್​’ (Ram Charan) ಸಿನಿಮಾದ ಶೂಟಿಂಗ್​ ಸಲುವಾಗಿ ರಾಮ್​ ಚರಣ್​ ಅವರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಚಿತ್ರತಂಡದ ಜೊತೆ ಬಂದು ದೇವರ ದರ್ಶನ ಪಡೆದಿದ್ದಾರೆ. ನಾಡದೇವತೆಗೆ ನಮಿಸಲು ಬಂದಿರುವ ರಾಮ್ ಚರಣ್​ ಅವರ ವಿಡಿಯೋ ವೈರಲ್​ ಆಗಿದೆ. ‘ಗೇಮ್​ ಚೇಂಜರ್​’ ಸಿನಿಮಾದ ಶೂಟಿಂಗ್​ ಮೈಸೂರಿನಲ್ಲಿ ನಡೆಯುತ್ತಿರುವುದರಿಂದ ಈ ಸಿನಿಮಾ ಮೇಲೆ ಕನ್ನಡದ ಸಿನಿಪ್ರಿಯರು ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಲವು ದಿನಗಳಿಂದ ರಾಮ್​ ಚರಣ್​ ಅವರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಅವರು ಸಣ್ಣ ಬ್ರೇಕ್​ ಪಡೆದುಕೊಂಡಿದ್ದರು. ಮೈಸೂರಿನಲ್ಲಿ ನಡೆಯುತ್ತಿದ್ದ ‘ಗೇಮ್​ ಚೇಂಜರ್​’ ಸಿನಿಮಾದ ಶೂಟಿಂಗ್​ ಮೊಟಕುಗೊಳಿಸಿ ಅವರು ಹೈದರಾಬಾದ್​ಗೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್​ ಆಗಿತ್ತು. ನವೆಂಬರ್​ 30ರಂದು ಮತದಾನ ಮಾಡಿದ ಬಳಿಕ ಅವರು ಮೈಸೂರಿಗೆ ವಾಪಸ್ಸಾಗಿದ್ದಾರೆ.

ಇದನ್ನೂ ಓದಿ: ಬರಿಗಾಲಲ್ಲಿ ಬಂದು ಮುಂಬೈ ಸಿದ್ಧಿ ನಿನಾಯಕನ ದರ್ಶನ ಪಡೆದ ರಾಮ್ ಚರಣ್

‘ಆರ್​ಆರ್​ಆರ್​’ ಸಿನಿಮಾಗೆ 2022ರಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿತು. ಆ ಸಿನಿಮಾದ ಹಾಡಿಗೆ ಆಸ್ಕರ್​ ಪ್ರಶಸ್ತಿ ಕೂಡ ಒಲಿದುಬಂತು. ಆ ಬಳಿಕ ರಾಮ್​ ಚರಣ್​ ಅವರು ಕೈಗೆತ್ತಿಕೊಂಡ ಸಿನಿಮಾವೇ ‘ಗೇಮ್​ ಚೇಂಜರ್​’. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಂಕರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ದಿಲ್​ ರಾಜು ಅವರು ಬಂಡವಾಳ ಹೂಡಿದ್ದಾರೆ. ರಾಮ್​ ಚರಣ್​ ಅವರಿಗೆ ಜೋಡಿಯಾಗಿ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ಅವರು ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್​ ಮಾಡುತ್ತಿರುವುದರಿಂದ ಈ ಸಿನಿಮಾದ ಕಥೆಗೆ ಕರ್ನಾಟಕದ ಕನೆಕ್ಷನ್​ ಏನಿರಬಹುದು ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಸಿನಿಮಾ ಶೂಟಿಂಗ್ ಮುಗಿಸಿ ಕುಟುಂಬ ಸಮೇತ ಇಟಲಿಗೆ ಹೊರಟ ರಾಮ್ ಚರಣ್

‘ಗೇಮ್​ ಚೇಂಜರ್​’ ಸಿನಿಮಾದಲ್ಲಿ ರಾಜಕೀಯ ಮತ್ತು ಎಲೆಕ್ಷನ್​ ಕುರಿತಾದ ಕಥೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಫಸ್ಟ್​ ಲುಕ್​ ಗಮನ ಸೆಳೆದಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದಿತ್ತು. ಅದರಲ್ಲಿ ಮೆಗಾ ಸ್ಟಾರ್​ ಚಿರಂಜೀವಿ, ರಣವೀರ್​ ಸಿಂಗ್​, ಎಸ್​.ಎಸ್​. ರಾಜಮೌಳಿ ಮುಂತಾದ ಗಣ್ಯರು ಭಾಗಿ ಆಗಿದ್ದರು. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಥಮನ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:12 am, Sun, 3 December 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us