Mahesh Babu: ‘ಗುಂಟೂರು ಖಾರಂ’ ಚಿತ್ರದಲ್ಲಿ ಮಹೇಶ್​ ಬಾಬು ಜೊತೆ ನಟಿಸ್ತಾರಾ ಶಿವಗಾಮಿ ಅಲಿಯಾಸ್ ರಮ್ಯಾ ಕೃಷ್ಣನ್​?

|

Updated on: Jun 22, 2023 | 7:00 AM

Guntur Kaaram Movie: ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಅವರು ‘ಗುಂಟೂರು ಖಾರಂ’ ಸಿನಿಮಾದ ಸ್ಕ್ರಿಪ್ಟ್​ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಅದರಿಂದಾಗಿ ಶೂಟಿಂಗ್​ ದಿನಾಂಕ ಬದಲಾಗಿದೆ.

Mahesh Babu: ‘ಗುಂಟೂರು ಖಾರಂ’ ಚಿತ್ರದಲ್ಲಿ ಮಹೇಶ್​ ಬಾಬು ಜೊತೆ ನಟಿಸ್ತಾರಾ ಶಿವಗಾಮಿ ಅಲಿಯಾಸ್ ರಮ್ಯಾ ಕೃಷ್ಣನ್​?
ಮಹೇಶ್​ ಬಾಬು, ರಮ್ಯಾ ಕೃಷ್ಣನ್​
Follow us on

ಟಾಲಿವುಡ್​ ನಟ ಮಹೇಶ್​ ಬಾಬು (Mahesh Babu) ಅವರು ಈಗ ‘ಗುಂಟೂರು ಖಾರಂ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೈಟಲ್​ ಅನೌನ್ಸ್​ ಆಯಿತು. ಫಸ್ಟ್​ ಲುಕ್​ ಕೂಡ ಅನಾವರಣವಾಗಿ ಗಮನ ಸೆಳೆಯಿತು. ಈ ಚಿತ್ರದ ಶೀರ್ಷಿಕೆ ಖಡಕ್​ ಆಗಿದೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಎನ್ನುವಾಗ ಚಿತ್ರದ ನಾಯಕಿ ಪೂಜಾ ಹೆಗ್ಡೆ (Pooja Hegde) ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಕೇಳಿಬಂತು. ಅಷ್ಟೇ ಅಲ್ಲದೇ ಪಾತ್ರವರ್ಗದಲ್ಲಿ ಇನ್ನೂ ಕೆಲವು ಬದಲಾವಣೆಗಳು ಆಗುತ್ತಿವೆ. ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್​ ಬಾಬು ಅವರ ಜೊತೆ ರಮ್ಯಾ ಕೃಷ್ಣನ್​ (Ramya Krishnan) ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಬಗ್ಗೆ ಟಾಲಿವುಡ್​ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ. ‘ಗುಂಟೂರು ಖಾರಂ’ ಚಿತ್ರದ ಮೇಲೆ ಮಹೇಶ್​ ಬಾಬು ಫ್ಯಾನ್ಸ್​ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಮ್​ ಶ್ರೀನಿವಾಸ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ರಮ್ಯಾ ಕೃಷ್ಣನ್​ ಅವರಿಗೆ ತುಂಬ ಬೇಡಿಕೆ ಇದೆ. ಪೋಷಕ ಪಾತ್ರಗಳ ಮೂಲಕ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಬಾಹುಬಲಿ’ ಸಿನಿಮಾದಲ್ಲಿ ಅವರು ಪ್ರಭಾಸ್​ಗೆ ತಾಯಿಯಾಗಿ ನಟಿಸಿದ್ದರು. ಅವರು ಮಾಡಿದ್ದ ರಾಜಮಾತಾ ಶಿವಗಾಮಿ ಪಾತ್ರವನ್ನು ಅಭಿಮಾನಿಗಳು ತುಂಬ ಮೆಚ್ಚಿಕೊಂಡಿದ್ದರು. ಈಗ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್​ ಬಾಬುಗೆ ತಾಯಿಯಾಗಿ ರಮ್ಯಾ ಕೃಷ್ಣನ್​ ಅವರು ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ‘ಗುಂಟೂರು ಖಾರಂ’ ಬಳಿಕ ಮೂರು ವರ್ಷ ಮಹೇಶ್ ಬಾಬು ಹೊಸ ಸಿನಿಮಾ ಒಪ್ಪಿಕೊಳ್ಳಲ್ಲ

ನಟಿ ಪೂಜಾ ಹೆಗ್ಡೆ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಡೇಟ್ಸ್​ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಅವರು ‘ಗುಂಟೂರು ಖಾರಂ’ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹರಡಿದೆ. ತ್ರಿವಿಕ್ರಮ್​ ಶ್ರೀನಿವಾಸ್​ ಅವರು ಈ ಸಿನಿಮಾದ ಸ್ಕ್ರಿಪ್ಟ್​ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಅದರಿಂದಾಗಿ ಶೂಟಿಂಗ್​ ದಿನಾಂಕ ಬದಲಾಗಿದೆ. ಅದಕ್ಕೆ ಅನುಗುಣವಾಗಿ ಕಲಾವಿದರು ಕೂಡ ಬದಲಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ನಿರ್ದೇಶಕರೇ ಹೇಳಿಕೆ ನೀಡಬೇಕಿದೆ.

ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಹೊರಕ್ಕೆ: ಶ್ರೀಲೀಲಾ ಕಾರಣವೇ?

ಪೂಜಾ ಹೆಗ್ಡೆ ಅವರು ‘ಗುಂಟೂರು ಖಾರಂ’ ಚಿತ್ರತಂಡದಿಂದ ಹೊರನಡೆದಿರುವುದರಿಂದ ಅವರ ಜಾಗಕ್ಕೆ ಬೇರೆ ಯಾವ ನಟಿ ಬರುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಈ ಸಿನಿಮಾದಲ್ಲಿನ ಮತ್ತೋರ್ವ ನಾಯಕಿ ಪಾತ್ರದಲ್ಲಿ ಕನ್ನಡದ ಹುಡುಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಖ್ಯಾತ ನಟ ಜಗಪತಿ ಬಾಬು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್​ ಬಾಬು ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ. ಎಲ್ಲರೂ ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸ್ಕ್ರಿಪ್ಟ್​ ಮತ್ತು ಚಿತ್ರೀಕರಣದ ಪ್ಲಾನಿಂಗ್​ನಲ್ಲಿ ಬದಲಾವಣೆ ಆಗಿರುವುದರಿಂದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.