ದೇವರ ಚಿತ್ರವನ್ನು ಕಾಲಿಗೆ ತಾಗಿಸಿಕೊಂಡು ಓಡಾಡಿದ ರಶ್ಮಿಕಾ ಮಂದಣ್ಣ: ನೆಟ್ಟಿಗರ ಆಕ್ರೋಶ

ನಟಿ ರಶ್ಮಿಕಾ ಮಂದಣ್ಣ ಅವರು ಲಕ್ಷ್ಮಿ ದೇವಿಗೆ ಅವಮಾನ ಮಾಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಮೆಹಂದಿ ಶಾಸ್ತ್ರದಲ್ಲಿ ರಶ್ಮಿಕಾ ಅವರು ಧರಿಸಿದ ಸೀರೆಯ ಬಗ್ಗೆ ನೆಟ್ಟಿಗರು ತಕರಾರು ತೆಗೆಯುತ್ತಿದ್ದಾರೆ. ಆದರೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದೇವರ ಚಿತ್ರವನ್ನು ಕಾಲಿಗೆ ತಾಗಿಸಿಕೊಂಡು ಓಡಾಡಿದ ರಶ್ಮಿಕಾ ಮಂದಣ್ಣ: ನೆಟ್ಟಿಗರ ಆಕ್ರೋಶ
Rashmika Mandanna

Updated on: Mar 11, 2026 | 4:32 PM

ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ವಿವಾಹದ ಸಂಭ್ರಮ ಜೋರಾಗಿತ್ತು. ಇತ್ತೀಚೆಗಷ್ಟೇ ಈ ಜೋಡಿಯು ತಮ್ಮ ಮೆಹಂದಿ ಶಾಸ್ತ್ರದ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಖುಷಿಯ ನಡುವೆಯೇ ರಶ್ಮಿಕಾ ತೊಟ್ಟಿದ್ದ ಉಡುಪಿನ ವಿನ್ಯಾಸ ಈಗ ವಿವಾದಕ್ಕೆ ಕಾರಣವಾಗಿದೆ. ಲಕ್ಷ್ಮಿ ದೇವಿಯ ಚಿತ್ರವಿರುವ ಉಡುಪು ಧರಿಸಿದ್ದಕ್ಕೆ ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಅವರ ಅಪ್ಪಟ ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮತ್ತು ವಿಜಯ್ ಹಂಚಿಕೊಂಡ ಫೋಟೋಗಳಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಆದರೆ ಅವರು ತೊಟ್ಟಿದ್ದ ಉಡುಪಿನ ಮೇಲೆ ಲಕ್ಷ್ಮಿ ದೇವಿಯ ಚಿತ್ರ ಇರುವುದನ್ನು ಗಮನಿಸಿದ ಹಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವತೆಗಳ ಚಿತ್ರಗಳನ್ನು ಉಡುಪಿನ ಕೆಳಭಾಗದಲ್ಲಿ ಅಥವಾ ಸೊಂಟದ ಭಾಗದಲ್ಲಿ ಬಳಸುವುದು ದೇವರಿಗೆ ಮಾಡುವ ಅಪಮಾನ ಎಂದು ಕೆಲವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಳಕೆದಾರರು, ‘ದೇವರು ಮತ್ತು ದೇವತೆಗಳು ನಿಮ್ಮ ಉಡುಪಿಗಾಗಿ ಇರುವವರಲ್ಲ. ಇದೊಂದು ಅತ್ಯಂತ ಕೆಟ್ಟ ಡ್ರೆಸ್’ ಎಂದು ಕಮೆಂಟ್ ಮಾಡಿದ್ದಾರೆ. ‘ದೇವಿಯ ಚಿತ್ರವಿರುವ ಬಟ್ಟೆಯನ್ನು ಕಾಲಿನ ಹತ್ತಿರ ಮತ್ತು ಸೊಂಟಕ್ಕೆ ಸುತ್ತಿಕೊಳ್ಳುವುದು ದೇವತೆಗೆ ಮಾಡುವ ಅಗೌರವ’ ಎಂದು ಮತ್ತೊಬ್ಬರು, ಆಕ್ಷೇಪಿಸಿದ್ದಾರೆ. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದೆ.

ರಶ್ಮಿಕಾ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಇದು ಕೇವಲ ಒಂದು ಫ್ಯಾಷನ್. ರಶ್ಮಿಕಾ ಅವರು ಈ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ವಿನಾಕಾರಣ ಟೀಕೆ ಮಾಡುವ ಅಗತ್ಯವಿಲ್ಲ’ ಎಂದು ಅಭಿಮಾನಿಗಳು ನಟಿಯ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಮದುವೆಗೆ ಕರೆದಿಲ್ಲ ಅಂತ ಕೋಪ ಮಾಡಿಕೊಂಡ ರಶ್ಮಿಕಾ, ವಿಜಯ್ ಅಭಿಮಾನಿ

‘ಭಾರತೀಯ ಕಲ್ಪನೆಯಲ್ಲಿ, ವಧುವಿನ ಆಗಮನವನ್ನು ಹೆಚ್ಚಾಗಿ ಸಮೃದ್ಧಿ, ಸೌಂದರ್ಯ ಮತ್ತು ಹೊಸ ಆರಂಭದ ದೇವತೆಯಾದ ಲಕ್ಷ್ಮಿ ದೇವಿಯ ಆಗಮನಕ್ಕೆ ಹೋಲಿಸಲಾಗುತ್ತದೆ. ಆಕೆಯ ಉಪಸ್ಥಿತಿಯು ಹೊಸ ಮನೆಗೆ ಶಾಂತಿ, ಐಶ್ವರ್ಯ ಮತ್ತು ಸಾಮರಸ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಇದೇ ಭಾವನೆಯು ರಶ್ಮಿಕಾ ಮಂದಣ್ಣ ಅವರ ಉಡುಪಿನ ವಿನ್ಯಾಸಕ್ಕೆ ಪ್ರಮುಖ ಪ್ರೇರಣೆ ಮತ್ತು ಭಾವನಾತ್ಮಕ ಆಧಾರವಾಯಿತು’ ಎಂದು ಈ ಬಟ್ಟೆಯನ್ನು ವಿನ್ಯಾಸ ಮಾಡಿದ ಕಂಪನಿ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us