Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

| Updated By: ganapathi bhat

Updated on: Mar 09, 2021 | 11:37 AM

Sadhu Kokila: ಸಾಧು ಕೋಕಿಲ ಅವರ ಹೆಸರನ್ನು ಕೇಳಿದರೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ ಕನ್ನಡ ಸಿನಿಮಾ ಪ್ರೇಕ್ಷಕರು. ಈಗ ಧಾರಾವಾಹಿ ಲೋಕದಲ್ಲೂ ಸಾಧು ಕಮಾಲ್​ ಮಾಡಲು ಸಜ್ಜಾಗಿದ್ದಾರೆ.

Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ
ಸಾಧು ಕೋಕಿಲ
Follow us on

ಚಿತ್ರರಂಗದ ಹಲವು ವಿಭಾಗಗಳಲ್ಲಿ ಸಾಧು ಕೋಕಿಲ ಖ್ಯಾತಿ ಗಳಿಸಿದ್ದಾರೆ. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹಾಸ್ಯ ನಟ, ಪ್ರೇಕ್ಷಕರ ಮನ ಸೆಳೆಯುವ ನಿರ್ದೇಶಕ, ಕೇಳುಗರನ್ನು ತಲೆದೂಗುವಂತೆ ಮಾಡುವ ಗಾಯಕ, ಸಂಗೀತಪ್ರಿಯರ ಮೆಚ್ಚುಗೆ ಪಡೆದ ಸಂಗೀತ ನಿರ್ದೇಶಕ… ಹೀಗೆ ಸಾಧು ಕೋಕಿಲ ಅವರದ್ದು ಬಹುಮುಖ ಪ್ರತಿಭೆ. ಈಗ ಅವರು ಕಿರುತೆರೆಯಲ್ಲಿ ಒಂದು ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಅದು ಕೂಡ ಧಾರಾವಾಹಿ ಮೂಲಕ ಎಂಬುದು ವಿಶೇಷ.

ಸಾಧು ಕೋಕಿಲ ಅವರಿಗೆ ಕಿರುತೆರೆಯ ಒಡನಾಟ ಹೊಸದೇನೂ ಅಲ್ಲ. ಈ ಹಿಂದೆ ರಿಯಾಲಿಟಿ ಶೋಗಳ ಜಡ್ಜ್​ ಆಗಿ ಅವರು ಕಾರ್ಯ ನಿರ್ವಹಿಸಿದ್ದರು. ಈಗ ಇನ್ನೊಂದು ರೀತಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಅವರು ಟಿವಿ ಕ್ಷೇತ್ರದತ್ತ ಹೆಜ್ಜೆ ಇಟ್ಟಿದ್ದಾರೆ. ಅದು ಕೂಡ ಧಾರಾವಾಹಿ ಮೂಲಕ. ಹಾಗಂತ ಯಾವುದೋ ಸೀರಿಯಲ್​ನಲ್ಲಿ ಸಾಧು ಕೋಕಿಲ ನಟಿಸಲಿದ್ದಾರೆ ಅಂದುಕೊಳ್ಳಬೇಡಿ. ಸದ್ಯಕ್ಕೆ ಅವರು ಧಾರಾವಾಹಿಯ ನಿರ್ಮಾಣದಲ್ಲಿ ಆಸಕ್ತಿ ತೋರಿಸಿದ್ದಾರೆ.

ಹೌದು, ಸಾಧು ಕೋಕಿಲ ಒಂದು ಹೊಸ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು ಅದಕ್ಕೆ ‘ಗೌರಿಪುರದ ಗಯ್ಯಾಳಿಗಳು’ ಎಂದು ಶೀರ್ಷಿಕೆ ಇಡಲಾಗಿದೆ. ʻಸುರಾಗ್‌ ಪ್ರೊಡಕ್ಷನ್ಸ್‌’ ಮೂಲಕ ನಿರ್ಮಾಣ ಆಗುತ್ತಿರುವ ಈ ಧಾರಾವಾಹಿಯು ಉದಯ ಟಿವಿಯಲ್ಲಿ ಮಾರ್ಚ್​ 15ರಿಂದ ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ‘ಗೌರಿಪುರದ ಗಯ್ಯಾಳಿಗಳು’ ಪ್ರಸಾರ ಆಗಲಿದೆ. ಇನ್ನು, ಸಾಧು ಕೋಕಿಲ ಎಂದಮೇಲೆ ಅಲ್ಲಿ ಕಾಮಿಡಿ ಇರಲೇಬೇಕಲ್ಲವೇ? ಈ ಧಾರಾವಾಹಿ ಕೂಡ ಕಾಮಿಡಿ ಪ್ರಕಾರದಲ್ಲಿ ಮೂಡಿಬರಲಿದೆ.

ಗೌರಿಪುರದ ಗಯ್ಯಾಳಿಗಳು ಧಾರಾವಾಹಿ ಪೋಸ್ಟರ್

ಗೌರಿಪುರ ಎಂಬ ಕಾಲನಿಯಲ್ಲಿ ಇರುವ ನಾಲ್ವರು ಮಧ್ಯಮವರ್ಗದ ಗಯ್ಯಾಳಿಗಳು ಸ್ತ್ರೀ ಸಂಘ ಸ್ಥಾಪಿಸಿಕೊಂಡು ಹಪ್ಪಳ ಸಂಡಿಗೆ ತಯಾರು ಮಾಡುವಂಥವರು. ಇವರ ಬಾಯಿಗೆ ಕಾಲೊನಿಯೇ ಹೆದರುತ್ತದೆ. ಇವರ ನಡುವೆ ಸಮಸ್ಯೆಗಳಿವೆ. ಆದರೆ ಹೊರಗಿನವರು ಬಂದರೆ ಒಗ್ಗಟ್ಟಾಗುತ್ತಾರೆ. ಇಂಥವರ ನಡುವೆ ಗುಲಾಬಿ ಎಂಬ ಹುಡುಗಿ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬರುತ್ತಾಳೆ. ಈ ಗಯ್ಯಾಳಿಗಳ ನಡುವೆ ನಡೆಯುವ ಹಾಸ್ಯಮಯ ಪ್ರಸಂಗಗಳು ಹಾಗೂ ಗುಲಾಬಿಯ ನಿಗೂಢ ನಡೆ ಈ ಧಾರಾವಾಹಿಯ ಕಥಾಹಂದರ. ರವಿತೇಜ ನಿರ್ದೇಶನ ಮಾಡುತ್ತಿದ್ದು, ತಾರಾಗಣದಲ್ಲಿ ನವ್ಯಾ, ರೋಹಿಣಿ, ದಿವ್ಯಾ, ವೀಣಾ, ರಚನಾ, ಆರ್ವ ಬಸವಟ್ಟಿ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಗೀತಾ ಧಾರಾವಾಹಿಯ ವಿಲನ್ ಶರ್ಮಿತಾ ಗೌಡ ವಯಸ್ಸು ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​