‘ಟೋಬಿ’ ನೋಡಬೇಕು, ರಾಜ್ ಬಿ ಶೆಟ್ಟಿ ಇನ್ನೂ ತೋರಿಸಿಲ್ಲ: ಬಾಲಿವುಡ್ ನಿರ್ದೇಶಕನ ಬಯಕೆ

|

Updated on: Sep 07, 2023 | 9:21 PM

Raj B Shetty: 'ಗರುಡ ಗಮನ ವೃಷಭ ವಾಹನ' ಸಿನಿಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ ರಾಜ್ ಬಿ ಶೆಟ್ಟಿ. ಹಾಗಾಗಿ ಅವರ 'ಟೋಬಿ' ಸಿನಿಮಾ ನೋಡಲು ಹಲವು ರಾಜ್ಯಗಳ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಕರ್ಮಿಗಳು ಸಹ ಆಸಕ್ತಿ ತೋರಿದ್ದರು. ಬಾಲಿವುಡ್​ನ ಜನಪ್ರಿಯ ಹಾಗೂ ಪ್ರತಿಭಾವಂತ ನಿರ್ದೇಶಕರೊಬ್ಬರು ಸಹ 'ಟೋಬಿ' ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಟೋಬಿ ನೋಡಬೇಕು, ರಾಜ್ ಬಿ ಶೆಟ್ಟಿ ಇನ್ನೂ ತೋರಿಸಿಲ್ಲ: ಬಾಲಿವುಡ್ ನಿರ್ದೇಶಕನ ಬಯಕೆ
'ಟೋಬಿ' ಸಿನಿಮಾ
Follow us on

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ‘ಟೋಬಿ‘ (Toby) ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ರಾಜ್, ಈ ಸಿನಿಮಾವನ್ನು ನಿರ್ದೇಶಿಸಿಲ್ಲವಾದರೂ, ಚಿತ್ರಕತೆ ಅವರದ್ದೇ. ತಮ್ಮ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ ರಾಜ್ ಬಿ ಶೆಟ್ಟಿ. ಹಾಗಾಗಿ ಅವರ ‘ಟೋಬಿ’ ಸಿನಿಮಾ ನೋಡಲು ಹಲವು ರಾಜ್ಯಗಳ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಕರ್ಮಿಗಳು ಸಹ ಆಸಕ್ತಿ ತೋರಿದ್ದರು. ಬಾಲಿವುಡ್​ನ (Bollywood) ಜನಪ್ರಿಯ ಹಾಗೂ ಪ್ರತಿಭಾವಂತ ನಿರ್ದೇಶಕ ಅನುರಾಗ್ ಕಶ್ಯಪ್ ಅವರಲ್ಲೊಬ್ಬರು.

ಅನುರಾಗ್ ಕಶ್ಯಪ್, ಇತ್ತೀಚೆಗೆ ಫಿಲಂ ಕಂಪ್ಯಾನಿಯನ್​ಗೆ ನೀಡಿರುವ ಸಂದರ್ಶನದಲ್ಲಿ ಇತ್ತೀಚೆಗೆ ನೋಡಿದ ಸಿನಿಮಾ, ನೋಡಬೇಕು ಎಂದುಕೊಂಡಿರುವ ಸಿನಿಮಾ ಬಗ್ಗೆ ಮಾತನಾಡುತ್ತಾ, ”ನನಗೆ ಕನ್ನಡದ ‘ಟೋಬಿ’ ಸಿನಿಮಾ ನೋಡಬೇಕೆಂಬ ಬಯಕೆ ಇದೆ. ಆದರೆ ಹತ್ತಿರದಲ್ಲೆಲ್ಲೂ ಆ ಸಿನಿಮಾ ಬಿಡುಗಡೆ ಆಗಿಲ್ಲ. ನಾನು ರಾಜ್ ಬಿ ಶೆಟ್ಟಿಗೆ ಮೆಸೇಜ್ ಮಾಡಿದ್ದೇನೆ, ಹೇಗಾದರೂ ಸಿನಿಮಾ ತೋರಿಸು ಎಂದು ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ” ಎಂದಿದ್ದಾರೆ. ಮುಂದುವರೆದು, ”ನನಗೆ ರಾಜ್ ಬಿ ಶೆಟ್ಟಿ ಬಹಳ ಇಷ್ಟ, ಕನ್ನಡದಲ್ಲಿ ನಾನು ಬಹಳ ನಿರೀಕ್ಷೆ ಇಟ್ಟಿರುವ ನಿರ್ದೇಶಕ ಅವರು” ಎಂದಿದ್ದಾರೆ.

ಅನುರಾಗ್ ಕಶ್ಯಪ್​ರ ಈ ಸಂದರ್ಶನ ಮೂರು ದಿನಗಳ ಹಿಂದೆ ಯೂಟ್ಯೂಬ್​ಗೆ ಅಪ್​ಲೋಡ್ ಆಗಿದೆ. ಶೂಟ್ ಆಗಿದ್ದು ಯಾವ ದಿನ ಎಂಬ ಮಾಹಿತಿ ಇಲ್ಲ. ಹಾಗಾಗಿ ರಾಜ್ ಬಿ ಶೆಟ್ಟಿ, ಅನುರಾಗ್ ಕಶ್ಯಪ್​ಗೆ ತಮ್ಮ ‘ಟೋಬಿ’ ಸಿನಿಮಾ ತೋರಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಜ್ ಬಿ ಶೆಟ್ಟಿ, ತಮ್ಮ ಸಿನಿಮಾವನ್ನು ಅನುರಾಗ್​ಗೆ ತೋರಿಸಿರುವ ಸಾಧ್ಯತೆ ಹೆಚ್ಚಿದೆ. ಅನುರಾಗ್ ಕಶ್ಯಪ್, ರಾಜ್ ಬಿ ಶೆಟ್ಟಿಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಈಗಿನ ಸಂದರ್ಶನದಲ್ಲೂ ಆ ವಿಷಯವನ್ನು ಹೇಳಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಿಡುಗಡೆ ಆದ ಕೆಲವು ದಿನಗಳ ಬಳಿಕ ಅನುರಾಗ್ ಕಶ್ಯಪ್, ರಾಜ್ ಬಿ ಶೆಟ್ಟಿಗಾಗಿ ವಿಶೇಷ ವಿಡಿಯೋ ಮಾಡಿ ಸಿನಿಮಾವನ್ನು ಬಹುವಾಗಿ ಹೊಗಳಿದ್ದರು.

ಇದನ್ನೂ ಓದಿ:ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ನನ್ನ ಸ್ನೇಹಿತರಲ್ಲ…: ಹಿಂಗ್ಯಾಕಂದ್ರು ರಾಜ್ ಬಿ ಶೆಟ್ಟಿ?

‘ಟೋಬಿ’ ಸಿನಿಮಾ ಎರಡು ವಾರಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಟಿಕೆ ದಯಾನಂದ ಕತೆ ಬರೆದಿದ್ದು, ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ರಚಿಸಿದ್ದಾರೆ. ನಿರ್ದೇಶನ ಮಾಡಿರುವುದು ಬಾಸಿಲ್. ವಿಕ್ಷಿಪ್ತ ವ್ಯಕ್ತಿತ್ವದ ಮೂಗ ಹಾಗೂ ಅವನ ಸಾಕು ಮಗಳ ನಡುವಿನ ಭಾವುಕ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಮೊದಲ ಬಾರಿಗೆ ಮಾಸ್ ಎಲಿಮೆಂಟ್​ಗಳನ್ನು ರಾಜ್ ಬಿ ಶೆಟ್ಟಿ ಪ್ರಯತ್ನಿಸಿದ್ದಾರೆ. ಸಿನಿಮಾದಲ್ಲಿ ಅವರ ನಟನೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಸಂಗೀತ ಹಾಗೂ ಸಿನಿಮಾಟೊಗ್ರಫಿ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ