ರೀಲ್ಸ್ ಮಾಡಿ ಫೇಮಸ್ ಆಗುವ ತವಕದಲ್ಲಿದ್ದ ಅರುಣ್ ಕಟಾರೆ ಇತ್ತೀಚೆಗೆ ಅರೆಸ್ಟ್ ಆಗಿದ್ದಾರೆ. ಸಾರ್ವಜನಿಕವಾಗಿ ರೀಲ್ಸ್ ಮಾಡಲು ಡಮ್ಮಿ ಗನ್ ಬಳಸಿ ಅವರು ಬೆಂಗಳೂರಿನ ಕೊತ್ತನೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಬೀದಿಬೀದಿಯಲ್ಲಿ ಗನ್ ಹಿಡಿದು ಓಡಾಡಿದ್ದನ್ನು ಕಂಡು ಜನ ಆತಂಕಕ್ಕೊಳಗಾಗಿದ್ದರು. ಈ ಕಾರಣದಿಂದಲೇ ಅರುಣ್ ಅರೆಸ್ಟ್ ಆಗಿದ್ದರು. ಈಗ ಅರುಣ್ ಮಾಡಿದ ತಪ್ಪಿನಿಂದ ಸ್ಯಾಂಡಲ್ವುಡ್ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ತಂತ್ರಜ್ಞ ಸಾಹಿಲ್ ಅವರಿಗೆ ನೋಟಿಸ್ ಬಂದಿದೆ.
ಹೊಂಬಾಳೆ ಫಿಲ್ಮ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್ಗಳ ಸಿನಿಮಾಗಳಿಗೆ ಸಾಹಿಲ್ ಅವರು ಡಮ್ಮಿ ಗನ್ ನೀಡುತ್ತಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಕಬ್ಜ’, ‘ಮಫ್ತಿ’ ಸಿನಿಮಾಗಳಲ್ಲಿ ಭರ್ಜರಿಯಾಗಿ ಗನ್ ಬಳಕೆ ಆಗಿತ್ತು. ಈ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸಿದವರು ಸಾಹಿಲ್. ಅರುಣ್ ಮಾಡಿದ ತಪ್ಪಿನಿಂದ ಇವರಿಗೆ ನೋಟಿಸ್ ಹೋಗಿದೆ.
ಇದನ್ನೂ ಓದಿ: ಮೈಮೇಲೆ ಕೆಜಿಗಟ್ಟಲೇ ಚಿನ್ನ, ಕೈಯಲ್ಲಿ ಎಕೆ 47 ಹಿಡ್ಕೊಂಡು ಸುಂದರಿಯರ ಜತೆ ರೀಲ್ಸ್ ಮಾಡ್ತಿದ್ದವ ಜೈಲುಪಾಲು!
ಅರುಣ್ ಕಟಾರೆ ಅವರು ಡಮ್ಮಿ ಗನ್ನ ಬಾಡಿಗೆ ಪಡೆದಿದ್ದು ಸಾಹಿಲ್ನಿಂದ. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಅರುಣ್ ಕಟಾರೆ ಈ ಗನ್ ಬಳಕೆ ಮಾಡಿಕೊಂಡಿದ್ದರು. ಸಾಹಿಲ್ ಅವರಿಂದ ಸಾರ್ವಜನಿಕರಲ್ಲಿ ಆತಂಕ ಎದುರಾಗಿತ್ತು. ಹೀಗಾಗಿ ಅರುಣ್ ಅವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಅರುಣ್ ಅವರ ವಿಚಾರಣೆ ಮಾಡಿದಾಗ ಡಮ್ಮಿ ಗನ್ನ ಸಾಹಿಲ್ನಿಂದ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊತ್ತನೂರು ಪೊಲೀಸರಿಂದ ಸಾಹಿಲ್ಗೆ ನೊಟೀಸ್ ನೀಡಲಾಗಿದೆ.
ಸಿನಿಮಾದಲ್ಲಿ ಯಥೇಚ್ಛವಾಗಿ ಗನ್ ಬಳಕೆ ಆಗುತ್ತದೆ. ಇವರೆಲ್ಲ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ನಿರ್ದೇಶಕ ಮಂಸೋರೆ ಅವರು ಮಾಹಿತಿ ನೀಡಿದ್ದಾರೆ. ‘ನೀವು ಏಕಾಏಕಿ ಸಾರ್ವಜನಿಕವಾಗಿ ಹೋಗಿ ಗನ್ ತೋರಿಸಿದರೆ ಜನರು ಭಯ ಬೀಳುತ್ತಾರೆ. ಆ ರೀತಿ ಮಾಡುವಂತಿಲ್ಲ. ಸಾರ್ವಜನಿಕವಾಗಿ ಶೂಟ್ ಮಾಡುವಾಗ ಅದರಲ್ಲೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ಸ್ಥಳೀಯ ಪೊಲೀಸರಿಂದ ಒಪ್ಪಿಗೆ ಪಡೆಯಬೇಕು. ಯಾವ ರೀತಿಯಲ್ಲಿ ಶೂಟಿಂಗ್ ನಡೆಯಲಿದೆ ಎಂಬುದನ್ನು ಮೊದಲೇ ಮಾಹಿತಿ ನೀಡಬೇಕು’ ಎಂದಿದ್ದಾರೆ ಮಂಸೋರೆ. ಸ್ಟುಡಿಯೋ ಮೊದಲಾದ ಕಡೆಗಳಲ್ಲಿ ನಕಲಿ ಗನ್ ಬಳಸಿ ಶೂಟಿಂಗ್ ಮಾಡೋದಾದರೆ ಯಾವುದೇ ಒಪ್ಪಿಗೆ ಬೇಡ.
ಮಂಸೋರೆ ಅವರು ಕನ್ನಡದಲ್ಲಿ ಹಲವು ಭಿನ್ನ ಸಿನಿಮಾಗಳನ್ನು ನೀಡಿದವರು. ಅವರಿಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ. ‘ಹರಿವು’, ಆ್ಯಕ್ಟ್ 1878’, ‘ನಾತಿಚರಾಮಿ’ ರೀತಿಯ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Thu, 4 July 24