ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ಗಿಲ್ಲಿ​; ಎರಡು ವಾರದಲ್ಲಿ ಇದು ಸಾಧ್ಯಾನಾ?

ಬಿಗ್ ಬಾಸ್ ಕನ್ನಡ 12ರಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟರ ನಡುವೆ ಹಾವು-ಮುಂಗುಸಿ ಸಂಬಂಧ ಮುಂದುವರಿದಿದೆ. ಗಿಲ್ಲಿ ಕ್ಯಾಪ್ಟನ್ ಆದ ನಂತರ, ಅಶ್ವಿನಿಗೆ ಕ್ಯಾಪ್ಟನ್ ಆಗುವಂತೆ ಸವಾಲು ಹಾಕಿದ್ದಾರೆ. ಅಡುಗೆ ಮನೆ ಕೆಲಸದ ವಿವಾದದಿಂದಾಗಿ ಅವರ ನಡುವೆ ಮತ್ತೆ ಕಿರಿಕ್ ಆರಂಭವಾಗಿದೆ. ಫಿನಾಲೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿದ್ದು, ಅಶ್ವಿನಿ ಕ್ಯಾಪ್ಟನ್ ಆಗಲೇಬೇಕಾದ ಒತ್ತಡದಲ್ಲಿದ್ದಾರೆ.

ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ಗಿಲ್ಲಿ​; ಎರಡು ವಾರದಲ್ಲಿ ಇದು ಸಾಧ್ಯಾನಾ?
ಬಿಗ್ ಬಾಸ್

Updated on: Dec 30, 2025 | 11:38 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಇರೋದು ಹಾವು ಮುಂಗುಸಿ ರೀತಿಯ ಸಂಬಂಧ. ಯಾವಾಗಲೂ ಕಿತ್ತಾಡಿಕೊಳ್ಳುತ್ತಲೇ ಇರುವ ಇವರು ಒಂದಾಗಿದ್ದು ತುಂಬಾನೇ ಕಡಿಮೆ. ಇತ್ತೀಚೆಗೆ ಇಬ್ಬರ ಮಧ್ಯೆ ಸಾಮರಸ್ಯ ಬೆಳೆದಿತ್ತು. ಆದರೆ, ಇವರ ಮಧ್ಯೆ ಮತ್ತೆ ಕಿರಿಕ್ ಉಂಟಾಗಿದೆ. ಅಶ್ವಿನಿ ಗೌಡ ಅವರಿಗೆ ಗಿಲ್ಲಿ ನಟ ಓಪನ್ ಚಾಲೆಂಜ್ ಹಾಕಿದ್ದಾರೆ. ಇದನ್ನು ಸಾಧಿಸೋಕೆ ಅಶ್ವಿನಿ ಬಳಿ ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.

ಗಿಲ್ಲಿ ನಟ ಅವರು ಬಿಗ್ ಬಾಸ್​​ಗೆ ಬಂದು ಮೂರು ತಿಂಗಳು ಕಳೆದರೂ ಒಮ್ಮೆಯೂ ಕ್ಯಾಪ್ಟನ್ ಆಗಲು ಸಾಧ್ಯವಾಗಿರಲಿಲ್ಲ. ಇದು ಅವರನ್ನು ತುಂಬಾನೇ ಕಾಡಿತ್ತು. ಹಲವು ಬಾರಿ ಪ್ರಯತ್ನಿಸಿದ್ದರೂ ಇದು ಸಾಧ್ಯವಾಗಿರಲಿಲ್ಲ. ಬಿಗ್ ಬಾಸ್ ಶುರುವಾಗಿ ಮೂರು ತಿಂಗಳ ಬಳಿಕ ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅಶ್ವಿನಿಗೆ ಇದು ಇನ್ನೂ ಕನಸಾಗಿಯೇ ಉಳಿದಿದೆ. ಅವರಿಗೆ ಕ್ಯಾಪ್ಟನ್ ಆಗುವಂತೆ ಗಿಲ್ಲಿ ಚಾಲೆಂಜ್ ಹಾಕಿದ್ದಾರೆ. ಅಲ್ಲದೆ, ಈ ಚಾಲೆಂಜ್​​ನ ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಅಶ್ವಿನಿಗೆ ಇದೆ.

ಮನೆಯ ಕೆಲಸದ ವಿಷಯ ಚರ್ಚೆಗೆ ಬಂದಿದೆ. ‘ಅಡುಗೆ ಮನೆ ಕ್ಲೀನ್ ಮಾಡಿ ಮಲಗಿ’ ಎಂದು ಗಿಲ್ಲಿ ಅವರು ಅಶ್ವಿನಿ ಬಳಿ ಕೇಳಿಕೊಂಡರು. ಆದರೆ, ಇದಕ್ಕೆ ಅವರು ಒಪ್ಪಿಕೊಳ್ಳಲೇ ಇಲ್ಲ. ಇದು ಗಿಲ್ಲಿ ಕೋಪಕ್ಕೆ ಕಾರಣ ಆಗಿದೆ. ಅವರು ಅಶ್ವಿನಿ ಮೇಲೆ ಕೂಗಾಡಿದ್ದಾರೆ. ಈ ವೇಳೆ ಅಶ್ವಿನಿ ಆಡಿದ ಒಂದು ಮಾತು ಗಿಲ್ಲಿಗೆ ಚುಚ್ಚಿದೆ. ‘ಕ್ಯಾಪ್ಟನ್ ಎಂದರೆ ನಿಮಗೇನು ಕೋಡು ಇರೋದಿಲ್ಲ’ ಎಂದರು ಅಶ್ವಿನಿ. ಆಗ ಗಿಲ್ಲಿ ಓಪನ್ ಚಾಲೆಂಜ್ ಹಾಕಿದರು.

ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಹೊಸ ಎರಡು ಪಾತ್ರಕ್ಕೆ ಬಿಗ್ ಬಾಸ್​​ನಲ್ಲಿ ಆಡಿಷನ್

‘ಮೊದಲು ನೀನು ಕ್ಯಾಪ್ಟನ್ ಆಗಿ ತೋರಿಸು. ಆಮೇಲೆ ಮಾತನಾಡುವಿಯಂತೆ’ ಎಂದು ಗಿಲ್ಲಿ ಸವಾಲು ಹಾಕಿದರು. ಈ ಪ್ರಶ್ನೆ ಕೇಳಿದರೂ ಕೇಳದಿರುವಂತೆ ನಡೆದುಕೊಂಡರು ಅಶ್ವಿನಿ. ಫಿನಾಲೆಗೆ ಉಳಿದಿರೋದು ಮೂರು ವಾರ ಮಾತ್ರ. ಫೈನಲ್ ವಾರದಲ್ಲಿ ಯಾವುದೇ ಕ್ಯಾಪ್ಟನ್ಸಿ ಇರೋದಿಲ್ಲ. ಹೀಗಾಗಿ, ಕ್ಯಾಪ್ಟನ್ ಆದರೆ ಇನ್ನು ಎರಡು ವಾರಗಳಲ್ಲಿ ಆಗಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us