
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 13’ (BBk 13) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮತ್ತೊಂದು ಕಾನೂನು ತೊಡಕು ಎದುರಾಗಿದೆ. ಬಿಡದಿ ಬಳಿಯಿರುವ ‘ಜಾಲಿವುಡ್ ಸ್ಟುಡಿಯೋ’ದಲ್ಲಿ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧಿಕೃತ ದೂರು ನೀಡಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ‘ಕಳೆದ ವರ್ಷ ಜಾಲಿವುಡ್ ಸ್ಟುಡಿಯೋದಲ್ಲಿ ನಡೆದಿದ್ದ ಪರಿಸರ ನಿಯಮಗಳ ಉಲ್ಲಂಘನೆ ಹಾಗೂ ಅದಕ್ಕಾಗಿ ವಿಧಿಸಲಾಗಿದ್ದ ಹಳೆಯ ದಂಡವನ್ನು ಇದುವರೆಗೂ ಇತ್ಯರ್ಥಪಡಿಸಿಲ್ಲ. ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸೇರಿದಂತೆ ಕಡ್ಡಾಯ ಪರಿಸರ ನಿಯಮಗಳನ್ನು ಜಾಲಿವುಡ್ ಸ್ಟುಡಿಯೋ ಸಮರ್ಪಕವಾಗಿ ಪಾಲಿಸುತ್ತಿಲ್ಲ’ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.
ಸ್ಟುಡಿಯೋದಲ್ಲಿ ಪ್ರಸ್ತುತ ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಮಂಡಳಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ನಿಯಮ ಪಾಲನೆಯಾಗದ ಹೊರತು ಶೋಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಯಬಿಗ್ ಬಾಸ್ ಶೋ ಅನುಮತಿಗಾಗಿ ಯಾವುದೇ ಅರ್ಜಿ ಬಂದಿಲ್ಲ; ಜಿಲ್ಲಾಧಿಕಾರಿ ಹೇಳಿಕೆ
ಸೆಪ್ಟೆಂಬರ್ 6 ರಂದು ‘ಬಿಗ್ ಬಾಸ್ ಸೀಸನ್ 13’ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ ಆದರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಕೆಯಾಗಿರುವ ಈ ದೂರಿನಿಂದಾಗಿ ಪ್ರಸಾರಕರಿಗೆ ಹಾಗೂ ಸ್ಟುಡಿಯೋ ಆಡಳಿತ ಮಂಡಳಿಗೆ ಬಿಗ್ ಶಾಕ್ ಎದುರಾಗಿದ್ದು, ಶೋ ನಿಗದಿತ ಸಮಯಕ್ಕೆ ಆರಂಭವಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.