ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆ ಚಂದನ್​ ಶೆಟ್ಟಿ ಸಖತ್​ ಪಾರ್ಟಿ; ಏನಿದು ಸಮಾಚಾರ?

ಗಾಯಕನಾಗಿ ಮಾತ್ರವಲ್ಲದೇ ನಟನಾಗಿಯೂ ಚಂದನ್​ ಶೆಟ್ಟಿ ಅವರಿಗೆ ಡಿಮ್ಯಾಂಡ್​ ಇದೆ. ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಅವುಗಳಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಕೂಡ ಒಂದು. ಈ ಸಿನಿಮಾದ ಬಗ್ಗೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರತಂಡ ಹೊಸ ಸಾಂಗ್​ ಬಿಡುಗಡೆ ಮಾಡಿದ್ದು, ಆ ಬಗ್ಗೆ ಇಲ್ಲಿದೆ ಮಾಹಿತಿ

ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆ ಚಂದನ್​ ಶೆಟ್ಟಿ ಸಖತ್​ ಪಾರ್ಟಿ; ಏನಿದು ಸಮಾಚಾರ?
ಭಾವನಾ ಅಪ್ಪು, ಚಂದನ್​ ಶೆಟ್ಟಿ, ಮನಸ್ವಿ

Updated on: Jun 16, 2024 | 11:16 PM

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಅರುಣ್ ಅಮುಕ್ತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಚಂದನ್​ ಶೆಟ್ಟಿ (Chandan Shetty) ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಭಾಗಿ ಆಗಿದ್ದರು. ಅವರ ಜೊತೆ ಅರುಣ್ ಅಮುಕ್ತ, ಚೇತನ್ ಕುಮಾರ್ ಕೂಡ ಭಾಗಿಯಾಗಿ ಸಿನಿಮಾ ಮತ್ತು ಸಾಂಗ್​ ಬಗ್ಗೆ ಮಾಹಿತಿ ನೀಡಿದರು. ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಚಂದನ್ ಶೆಟ್ಟಿ ಜೊತೆ ಅಮರ್, ಭಾವನಾ, ವಿವಾನ್, ಮನಸ್ವಿ, ಭವ್ಯ, ಅರವಿಂದ್​ ರಾವ್, ಸುನೀಲ್ ಪುರಾಣಿಕ್, ಸಿಂಚನಾ, ಪ್ರಶಾಂತ್ ಸಂಬರ್ಗಿ, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ ಮುಂತಾದವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರತಂಡ ಬಿಡುಗಡೆ ಮಾಡಿರುವ ಸ್ಟೂಡೆಂಟ್ ಪಾರ್ಟಿ ಹಾಡು ರ‍್ಯಾಪ್​ ಶೈಲಿಯಲ್ಲಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ವಿಜೇತ್ ಕೃಷ್ಣ ಧ್ವನಿ ನೀಡಿದ್ದಾರೆ. ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಬಂದ 2ನೇ ಸಾಂಗ್​ ಇದು. ವಿಶೇಷ ಏನೆಂದರೆ, ದಶಕದ ಹಿಂದೆ ವಿಜೇತ್ ಕೃಷ್ಣ, ಚಂದನ್ ಶೆಟ್ಟಿ, ಚೇತನ್ ಕುಮಾರ್ ರೂಮ್​ಮೇಟ್ಸ್​ ಆಗಿದ್ದರಂತೆ. ಈ ಮೊದಲು ವಿಜೇತ್ ಮತ್ತು ಚಂದನ್ ಶೆಟ್ಟಿ ಜೊತೆಯಾಗಿ ‘3 ಪೆಗ್​..’ ಹಾಡು ನೀಡಿದ್ದರು. ಅದು ಪಾರ್ಟಿಪ್ರಿಯರ ಮನ ಗೆದ್ದಿತ್ತು. ಅದೇ ರೀತಿ ಈಗ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಪಾರ್ಟಿ ಸಾಂಗ್​ ಕೂಡ ಹಿಟ್​ ಆಗಲಿದೆ ಎಂಬುದು ತಂಡದ ಭರವಸೆ.

ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಮನೋಜ್ ವಿವಾನ್, ಭಾವನಾ ಅಪ್ಪು, ಮನಸ್ವಿ, ಅಮರ್ ಸಹ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ಅವರು ಮಾತನಾಡಿದರು. ವಿಜೇತ್ ಕೃಷ್ಣ ಅವರ ಸಂಗೀತ ಅಂದ್ರೆ ತಮಗೆ ಇಷ್ಟ ಎಂದು ಅವರು ಹೇಳಿದರು. ಆ ಪ್ರೀತಿಯ ಕಾರಣದಿಂದಲೇ ಈ ಸಾಂಗ್​ ಬರೆದಿರುವುದಾಗಿ ಹೇಳಿದ ಅವರು ಸಾಂಗ್​ ಸೂಪರ್​ ಹಿಟ್​ ಆಗಲಿ ಎಂದು ಶುಭ ಕೋರಿದರು.

ಇದನ್ನೂ ಓದಿ: ರೇವ್​ ಪಾರ್ಟಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ತೆಲುಗು ನಟಿ ಹೇಮಾಗೆ ಸಿಕ್ತು ಜಾಮೀನು

ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ‘ವೆರೈಟಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಭರ್ಜರಿ ಚೇತನ್ ಹಾಗೂ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ಶ್ರೀಕಾಂತ್ ಜಿ. ಕಶ್ಯಪ್ ಅವರು ಕಾರ್ಯಕಾರಿ ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ.

ಕುಮಾರ್ ಗೌಡ ಅವರ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನ ಈ ಚಿತ್ರಕ್ಕಿದೆ. ಟೈಗರ್ ಶಿವು, ನರಸಿಂಹ ಅವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜೇತ್ ಕೃಷ್ಣ ಮತ್ತು ವಾಸು ದೀಕ್ಷಿತ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಬಿಡುಗಡೆ ಆಗಿರುವ ಹಾಡಿಗೆ ಅರುಣ್ ಸುರೇಶ್​ ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us