‘ರಚಿತಾ ರಾಮ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ, ಅವರನ್ನು ಗಡಿಪಾರು ಮಾಡಿ’; ಕೇಳಿಬಂತು ಆಗ್ರಹ

| Updated By: ರಾಜೇಶ್ ದುಗ್ಗುಮನೆ

Updated on: Jan 21, 2023 | 1:35 PM

ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ರಚಿತಾ ರಾಮ್ ಹೇಳಿಕೆ ಒಂದನ್ನು ನೀಡಿದ್ದರು. ಈ ಹೇಳಿಕೆ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ನಟಿಯ ವಿರುದ್ಧ ದೂರು ನೀಡಲಾಗಿದೆ.

‘ರಚಿತಾ ರಾಮ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ, ಅವರನ್ನು ಗಡಿಪಾರು ಮಾಡಿ’; ಕೇಳಿಬಂತು ಆಗ್ರಹ
Follow us on

ಬಹುತೇಕ ಸೆಲೆಬ್ರಿಟಿಗಳು ವಿವಾದದಿಂದ ಸದಾ ದೂರ ಇರಲು ಬಯಸುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಆಡಿದ ಮಾತಿನಿಂದ ದೊಡ್ಡ ತೊಂದರೆಗೆ ಸಿಲುಕುತ್ತಾರೆ. ಈಗ ನಟಿ ರಚಿತಾ ರಾಮ್ (Rachita Ram) ಅವರಿಗೂ ಹೀಗೆಯೇ ಆಗಿದೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತಿನಿಂದ ಈಗ ಸಮಸ್ಯೆ ಎದುರಾಗಿದೆ. ಅವರ ಹೇಳಿಕೆ ವಿರುದ್ಧ  ದೂರು ದಾಖಲಾಗಿದೆ. ಅವರನ್ನು ಗಡಿಪಾರು ಮಾಡಿ ಎನ್ನುವ ಆಗ್ರಹ ಕೇಳಿಬಂದಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸೂಚನೆ ಸಿಕ್ಕಿದೆ.

ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಚಿತಾ ರಾಮ್​, ‘ಗಣರಾಜ್ಯೋತ್ಸವ ಮರೆಯಿರಿ, ಕ್ರಾಂತಿಯೋತ್ಸವ ಮಾಡಿ’ ಎಂದು ಕರೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿ ನಟಿಯ ವಿರುದ್ಧ ದೂರು ನೀಡಲಾಗಿದೆ.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ ಅವರು ದೂರು ದಾಖಲು ಮಾಡಿದ್ದಾರೆ. ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೂಡ ನಮ್ಮ ದೇಶದ ಸಂವಿಧಾನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಗಳು ಆಗುತ್ತಲೇ ಇವೆ. ಕೆಲವು ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ರಚಿತಾ ರಾಮ್ ಅವರು ಗಣರಾಜ್ಯೋತ್ಸದ ಮರೆತು ಕ್ರಾಂತಿಯೋತ್ಸವ ಮಾಡಿ ಎಂದು ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ’ ಎಂದು ಶಿವಲಿಂಗಯ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ: Rachita Ram: ‘ಹೆಡ್​ ಬುಷ್’​ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ರಚಿತಾ ರಾಮ್​ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ

‘ಬಹಿರಂಗವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು ಸಂವಿಧಾನ ಜಾರಿಯಾದ ದಿನಕ್ಕೆ ಮಾಡಿದ ಅಪಮಾನ. ಆದ ಕಾರಣ ಈ ಹೇಳಿಕೆಯು ದೇಶದ್ರೋಹದ ಹೇಳಿಕೆಯಾಗಿದೆ. ಹೀಗಾಗಿ ನಾವು ಅವರ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಅವರನ್ನು ಈ ದೇಶದಿಂದ ಗಡಿಪಾರು ಮಾಡಬೇಕೆಂದು ಮದ್ದೂರು ಪೋಲಿಸ್ ಠಾಣೆಗೆ ದೂರು ನೀಡಿದ್ದೇವೆ’ ಎಂದು ಶಿವಲಿಂಗಯ್ಯ ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ