ರೇಣುಕಾ ಸ್ವಾಮಿ ಕೊಲೆ: ದರ್ಶನ್​ಗೆ ವಿಚಾರಣಾಧೀನ ಕೈದಿ ಸಂಖ್ಯೆ ಕೊಟ್ಟ ಪೊಲೀಸರು

|

Updated on: Jun 22, 2024 | 6:10 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪಗೆ ಇಂದು (ಜೂನ್ 22) ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರಕ್ಕೆ ನಟನನ್ನು ಸ್ಥಳಾಂತರಿಸಲಾಗಿದೆ. ದರ್ಶನ್​ಗೆ ಜೈಲಿನಲ್ಲಿ ಯಾವ ಸಂಖ್ಯೆ ನೀಡಲಾಗಿದೆ? ಇಲ್ಲಿ ತಿಳಿಯಿರಿ.

ರೇಣುಕಾ ಸ್ವಾಮಿ ಕೊಲೆ: ದರ್ಶನ್​ಗೆ ವಿಚಾರಣಾಧೀನ ಕೈದಿ ಸಂಖ್ಯೆ ಕೊಟ್ಟ ಪೊಲೀಸರು
ದರ್ಶನ್-ತೂಗುದೀಪ
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ (Darshan Thoogudeepa) ಇಂದು (ಜೂನ್ 22) ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು, ನ್ಯಾಯಾಲಯದ ಕಲಾಪ ಮುಗಿದೊಡನೆ ದರ್ಶನ್ ಹಾಗೂ ಇತರ ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಬಳಿ ಬಿಗಿ ಬಂಧೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ದರ್ಶನ್​ಗೆ ಈಗಾಗಲೇ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಸಹ ನೀಡಲಾಗಿದೆ.

ದರ್ಶನ್​ಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನ್ನು ನೀಡಲಾಗಿದೆ. ಇನ್ನು ಇಂದು ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಧನರಾಜ್​ಗೆ 6107, ವಿನಯ್​ಗೆ 6108, ಪ್ರದೂಶ್​ಗೆ 6109 ಸಂಖ್ಯೆಗಳನ್ನು ನೀಡಲಾಗಿದೆ. ಭದ್ರತೆ ದೃಷ್ಟಿಯಿಂದ ದರ್ಶನ್​ ಅನ್ನು ವಿಶೇಷ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ಮೂರು ವಿಶೇಷ ಬ್ಯಾರಕ್​ಗಳಿದ್ದು, ಇತರೆ ಕೈದಿಗಳಿಂದ ಅಪಾಯವಿರುವ ಆರೋಪಿಗಳನ್ನು ಈ ಬ್ಯಾರಕ್​ನಲ್ಲಿ ಇಡಲಾಗುತ್ತಿದೆ. ಇದೀಗ ದರ್ಶನ್​ ಅನ್ನು ಮೂರನೇ ಬ್ಯಾರಕ್​ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ:ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಜನವರಿಯಲ್ಲೇ ಹೇಳಿದ್ದೆ; ಮನೋ ವೈದ್ಯೆ

ವಿಚಾರಣಾಧೀನ ಕೈದಿಗಳಿಗೆ ಹಲವು ಪರೀಕ್ಷೆಗಳನ್ನು ಮಾಡಿ ಒಳಗೆ ಸೇರಿಸಿಕೊಳ್ಳಲಾಗುತ್ತದೆ. ಅವರ ದೇಹದ ಮೇಲಿರುವ ಮಚ್ಚೆಯಿಂದ ಹಿಡಿದು ಎಲ್ಲವನ್ನೂ ನೋಡಿ ನಮೂದು ಮಾಡಿಕೊಳ್ಳಲಾಗುತ್ತದೆ. ದರ್ಶನ್​ ಸಹ ಬಟ್ಟೆ ಬಿಚ್ಚಿ ಪೊಲೀಸರೆದುರು ಪರೀಕ್ಷೆಗೆ ಒಳಪಟ್ಟಿದ್ದಾರೆ. ಅದಾದ ಬಳಿಕವೇ ಅವರಿಗೆ ಯುಟಿಪಿ ಸಂಖ್ಯೆಯನ್ನು ನೀಡಲಾಗಿದೆ. ಇತರೆ ಆರೋಪಿಗಳಿಗೆ ಅವರ ಆರೋಪಿ ಕ್ರಮಕ್ಕೆ ಅನುಗುಣವಾಗಿ ಸಂಖ್ಯೆ ನೀಡಿದಂತಿದೆ.

ಎರಡು ದಿನದ ಹಿಂದೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರದ ಮಹಿಳಾ ವಿಭಾಗದ ಡಿ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಪವಿತ್ರಾಗೆ 6024 ಸಂಖ್ಯೆಯನ್ನು ನೀಡಲಾಗಿತ್ತು. ಇಂದು ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಆರೋಪಿಗಳಿಗೆ ಇಂದು ಸೇರಿದಂತೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜುಲೈ 4 ರವರೆಗೆ ದರ್ಶನ್ ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Sat, 22 June 24