ಮನೆ ಊಟ, ಹಾಸಿಗೆಗೆ ದರ್ಶನ್ ಬೇಡಿಕೆ: ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ

ನಟ ದರ್ಶನ್ ತೂಗುದೀಪ ಅವರು ತಮಗೆ ಮನೆ ಊಟ ಬೇಕು, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಜುಲೈ 19ಕ್ಕೆ ಮುಂದೂಡಿದೆ.

ಮನೆ ಊಟ, ಹಾಸಿಗೆಗೆ ದರ್ಶನ್ ಬೇಡಿಕೆ: ಶುಕ್ರವಾರಕ್ಕೆ ವಿಚಾರಣೆ ಮುಂದೂಡಿಕೆ

Updated on: Jul 18, 2024 | 2:15 PM

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ತಮಗೆ ಮನೆಯಿಂದ ಊಟ ಬೇಕು, ಮಲಗಲು ಹಾಸಿಗೆ, ಓದಲು ಕೆಲವು ಪುಸ್ತಕಗಳನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ಹೈಕೋರ್ಟ್​ಗೆ ಜುಲೈ 19 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲು ಅಧಿಕಾರಿಗಳು, ಸರ್ಕಾರಕ್ಕೆ ನೊಟೀಸ್ ನೀಡಿ, ವಿಚಾರಣೆಯನ್ನು ಇಂದಿಗೆ ಅಂದರೆ ಜುಲೈ 18ಕ್ಕೆ ಮುಂದೂಡಿತ್ತು. ಆದರೆ ಈಗ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 19 ಅಂದರೆ ನಾಳೆಗೆ ಮುಂದೂಡಲಾಗಿದೆ.

ದರ್ಶನ್​ರ ಊಟ, ಹಾಸಿಗೆ, ಪುಸ್ತಕ ಬೇಡಿಕೆಗೆ ತನಿಖಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ ಸದರಿ ರಿಟ್ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಬಹುದು, ತನಿಖಾಧಿಕಾರಿಗಳು ಆಕ್ಷೇಪಣೆ ಸಲ್ಲಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ನಾಳೆ (ಜುಲೈ 19) ಸರ್ಕಾರದ ಪರ ವಕೀಲ ಕೆ.ಎನ್.ಫಣೀಂದ್ರ ಅವರಿಗೆ ವಾದ ಮಂಡಿಸಲು ಅವಕಾಶ ನೀಡಿದ್ದು, ಅರ್ಜಿಯ ವಿಚಾರಣೆ ನಾಳೆ (ಜುಲೈ 19) ಮಧ್ಯಾಹ್ನ 2:30ಕ್ಕೆ ನಡೆಯಲಿದೆ.

ಪರಪ್ಪರ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಆಗಿರುವ ನಟ ದರ್ಶನ್​ಗೆ ಜೈಲಿನ ಊಟ ಸರಿ ಹೊಂದುತ್ತಿಲ್ಲ. ಇದೇ ಕಾರಣಕ್ಕೆ ದರ್ಶನ್​ಗೆ ಭೇದಿ ಹಾಗೂ ಇತರೆ ಅನಾರೋಗ್ಯ ಉಂಟಾಗಿತ್ತು. ಅಲ್ಲದೆ ಜೈಲಿನಲ್ಲಿ ಮಲಗಲು ಹಾಸಿಗೆ ವ್ಯವಸ್ಥೆ ಇಲ್ಲದ ಕಾರಣ ದರ್ಶನ್​ಗೆ ನಿದ್ರಾಹೀನತೆ ಹಾಗೂ ಬೆನ್ನು ನೋವು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೈ ನೋವು ಸಹ ಕಾಡಿತ್ತು. ಇದೇ ಕಾರಣಕ್ಕೆ ನಟ ದರ್ಶನ್, ತಮಗೆ ಮನೆಯಿಂದ ಊಟ, ಮಲಗಲು ಹಾಸಿಗೆ, ದಿಂಬು ಹಾಗೂ ಕೆಲವು ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಜೈಲು ಸೇರಿರೋ ದರ್ಶನ್ ಹೆಸರನ್ನು ಹಾಳು ಮಾಡಲು ನಡೆದಿದೆ ಹುನ್ನಾರ?

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಕೊನೆಯಾಗಲಿದ್ದು, ಪೊಲೀಸರು ರಿಮ್ಯಾಂಡ್ ಅರ್ಜಿಯನ್ನು ಇಂದು ಸಲ್ಲಿಸಲಿದ್ದಾರೆ. ಇಂದೂ ಸಹ ದರ್ಶನ್​ ಮತ್ತು ಗ್ಯಾಂಗ್​ಗೆ ಜಾಮೀನು ಸಿಗುವುದಿಲ್ಲ ಎನ್ನಲಾಗುತ್ತಿದೆ. ದರ್ಶನ್ ಹಾಗೂ ಇತರೆ 16 ಮಂದಿ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇನ್ನೂ 14 ದಿನ ಮುಂದುವರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us