ಕನ್ನಡಕ್ಕೆ ಬರಲ್ಲ ‘ದೃಶ್ಯಂ 3’; ನಿರ್ದೇಶಕ ಜೀತು ಜೋಸೆಫ್ ಬಿಚ್ಚಿಟ್ಟ ಅಸಲಿ ಕಾರಣ

‘ದೃಶ್ಯಂ 3’ ಕನ್ನಡಕ್ಕೆ ರಿಮೇಕ್ ಆಗದಿರುವ ಕುರಿತು ನಿರ್ದೇಶಕ ಜೀತು ಜೋಸೆಫ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಕನ್ನಡ ಮತ್ತು ತೆಲುಗಿನ ಸ್ಟಾರ್ ನಟರ ಇಮೇಜ್‌ಗೆ ಹೊಂದಿಕೆಯಾಗದ ಕಾರಣ ರಿಮೇಕ್ ಸಾಧ್ಯವಿಲ್ಲ ಎಂದಿದ್ದಾರೆ. ಈ ಹಿಂದಿನ ‘ದೃಶ್ಯಂ’ ಭಾಗಗಳು ಕನ್ನಡದಲ್ಲಿ ರವಿಚಂದ್ರನ್ ಅಭಿನಯದಲ್ಲಿ ಯಶಸ್ವಿಯಾಗಿದ್ದವು. ಆದರೆ, ಮೂರನೇ ಭಾಗ ಹಿಂದಿಯಲ್ಲಿ ಮಾತ್ರ ಬದಲಾವಣೆಗಳೊಂದಿಗೆ ರಿಮೇಕ್ ಆಗುತ್ತಿದೆ.

ಕನ್ನಡಕ್ಕೆ ಬರಲ್ಲ ದೃಶ್ಯಂ 3; ನಿರ್ದೇಶಕ ಜೀತು ಜೋಸೆಫ್ ಬಿಚ್ಚಿಟ್ಟ ಅಸಲಿ ಕಾರಣ
ರವಿಚಂದ್ರನ್
Image Credit source: Zee5

Updated on: Jun 10, 2026 | 6:44 AM

ಮಲಯಾಳಂ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ‘ದೃಶ್ಯಂ’ ಫ್ರಾಂಚೈಸಿಗೆ ಭಾರತೀಯ ಚಿತ್ರರಂಗದಲ್ಲೇ ಸಖತ್ ಕ್ರೇಜ್ ಇದೆ. ಈ ಹಿಂದೆ ಬಂದಿದ್ದ ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳು ಯಶಸ್ಸು ಕಂಡಿದ್ದವು. ಈಗ ‘ದೃಶ್ಯಂ 3’ (Drishyam 3) ರಿಲೀಸ್ ಆಗಿ ದೊಡ್ಡ ಗೆಲುವು ಕಂಡಿದೆ. ಮೊದಲೆರಡು ಸಿನಿಮಾಗಳು ‘ದೃಶ್ಯ’ ಹಾಗೂ ‘ದೃಶ್ಯ 2’ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗಿ, ಇಲ್ಲಿನವರ ಮನಗೆದ್ದು ಸೂಪರ್ ಹಿಟ್ ಆಗಿದ್ದವು. ಕನ್ನಡದಲ್ಲಿ ರವಿಚಂದ್ರನ್ ಅವರು ನಟಿಸಿದ್ದರು. ಮೂರನೇ ಭಾಗವೂ ಕನ್ನಡದಲ್ಲಿ ಬರಬಹುದು ಎಂದು ಕಾಯುತ್ತಿದ್ದ ಕನ್ನಡಿಗರಿಗೆ ಈಗ ನಿರಾಸೆಯಾಗಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮಲಯಾಳಂ ನಿರ್ದೇಶಕ ಜೀತು ಜೋಸೆಫ್, ‘ದೃಶ್ಯಂ 3’ ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಏಕೆ ರಿಮೇಕ್ ಮಾಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ದೃಶ್ಯಂ 3 ಕೇವಲ ಹಿಂದಿಯಲ್ಲಿ ಮಾತ್ರ ರಿಮೇಕ್ ಆಗುತ್ತಿದೆ. ನಮ್ಮ ಚಿತ್ರದ ಕ್ಲೈಮ್ಯಾಕ್ಸ್ ಬೇರೆ ಭಾಷೆಯ ಜನರಿಗೆ ಮತ್ತು ಅಲ್ಲಿನ ಸ್ಟಾರ್ ಇಮೇಜ್ ಇರುವ ಹೀರೊಗಳಿಗೆ ಸೆಟ್ ಆಗುತ್ತಿಲ್ಲ. ಅಲ್ಲಿನ ಹೀರೊಗಳ ಇಮೇಜ್‌ಗೆ ಈ ಕ್ಲೈಮ್ಯಾಕ್ಸ್ ಕೊಂಚ ಸಮಸ್ಯೆಯಾಗಬಹುದು. ಅದಕ್ಕಾಗಿಯೇ ತೆಲುಗು ಮತ್ತು ಕನ್ನಡದಲ್ಲಿ ಇದು ರಿಮೇಕ್ ಆಗುತ್ತಿಲ್ಲ’ ಎಂದು ಜೀತು ಜೋಸೆಫ್ ಹೇಳಿದ್ದಾರೆ.

ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದಿರುವ ಅಜಯ್ ದೇವಗನ್ ತಂಡದವರು ಚಿತ್ರದ ಕಥೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಹಿಂದಿ ಮೇಕರ್ಸ್ ನಮ್ಮ ಮೇಲೆ ಗೌರವ ಇಟ್ಟು, ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವುದಾಗಿ ಕೇಳಿದರು. ಅದಕ್ಕೆ ನಾನು ಗ್ರೀನ್ ಸಿಗ್ನಲ್ ನೀಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಒಟಿಟಿ ರಿಲೀಸ್ ಡೇಟ್ ಫಿಕ್ಸ್? ಇಲ್ಲಿದೆ ಅಪ್‌ಡೇಟ್

ಬಾಕ್ಸ್‌ ಆಫೀಸ್‌ನಲ್ಲಿ ‘ದೃಶ್ಯಂ 3’ ಅಬ್ಬರ

ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ‘ದೃಶ್ಯಂ 3’ ವಿಶ್ವಾದ್ಯಂತ ಬರೋಬ್ಬರಿ Rs 235.55 ಕೋಟಿ ಕಲೆಕ್ಷನ್ ಮಾಡಿ ಅತಿ ಹೆಚ್ಚು ಗಳಿಕೆ ಕಂಡ 4ನೇ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿನಿಮಾದ ಕೊನೆಯಲ್ಲಿ ಬರುವ ಪೋಸ್ಟ್ ಕ್ರೆಡಿಟ್ ಸೀನ್ ನೋಡಿ ಅಭಿಮಾನಿಗಳು ‘ದೃಶ್ಯಂ 4’ ಬರುತ್ತೆ ಎಂದು ಫಿಕ್ಸ್ ಆಗಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿರುವ ಜೀತು ಜೋಸೆಫ್, ‘ಆ ಸೀನ್ ಅನ್ನು ಮೊದಲು ಸಿನಿಮಾದ ಮುಖ್ಯ ಭಾಗದಲ್ಲೇ ಇಡಲಾಗಿತ್ತು. ಆದರೆ ತಂಡದವರ ಸಲಹೆಯಂತೆ ಅದನ್ನು ಪೋಸ್ಟ್ ಕ್ರೆಡಿಟ್ ಸೀನ್ ಆಗಿ ಬದಲಾಯಿಸಲಾಯಿತು. ಸದ್ಯಕ್ಕೆ ನನ್ನ ಬಳಿ ‘ದೃಶ್ಯಂ 4’ ಮಾಡಲು ಯಾವುದೇ ಅಸಾಧಾರಣ ಕಥೆಯ ಎಳೆಯಿಲ್ಲ. ಭವಿಷ್ಯದಲ್ಲಿ ಅದ್ಭುತವಾದ ಐಡಿಯಾ ಸಿಕ್ಕರೆ ಖಂಡಿತಾ ಪಾರ್ಟ್ 4 ಮಾಡ್ತೀನಿ, ಇಲ್ಲದಿದ್ದರೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us