ದುನಿಯಾ ವಿಜಯ್​ ನಟನೆಯ ‘ಭೀಮ’ ಸಿನಿಮಾ ರಿಲೀಸ್​ ಯಾವಾಗ? ತಂಡದಿಂದ ಸಿಕ್ಕಿದೆ ಸುಳಿವು

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಭೀಮ’ ಕೂಡ ಸ್ಥಾನ ಪಡೆದುಕೊಂಡಿದೆ. ದುನಿಯಾ ವಿಜಯ್ ಅವರ ನಿರ್ದೇಶನ ಎಂಬ ಕಾರಣದಿಂದಲೂ ಹೈಪ್​ ಹೆಚ್ಚಾಗಿದೆ. ಸದ್ಯಕ್ಕೆ ಈ ಸಿನಿಮಾಗೆ ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ರಿಲೀಸ್​ ಡೇಟ್​ ತಿಳಿಸುವ ಬಗ್ಗೆ ಚಿತ್ರತಂಡ ಒಂದು ನಿರ್ಧಾರಕ್ಕೆ ಬಂದಿದೆ.

ದುನಿಯಾ ವಿಜಯ್​ ನಟನೆಯ ‘ಭೀಮ’ ಸಿನಿಮಾ ರಿಲೀಸ್​ ಯಾವಾಗ? ತಂಡದಿಂದ ಸಿಕ್ಕಿದೆ ಸುಳಿವು
ದುನಿಯಾ ವಿಜಯ್​

Updated on: Aug 16, 2023 | 11:34 AM

ನಟ ದುನಿಯಾ ವಿಜಯ್​ (Duniya Vijay) ಅವರು ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ‘ಸಲಗ’ ಸಿನಿಮಾಗೆ ಮೊದಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಆ ಬಳಿಕ ಅವರು ಟಾಲಿವುಡ್​ನ ‘ವೀರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದರು. ಅವರ ನಿರ್ದೇಶನದಲ್ಲಿ ‘ಭೀಮ’ ಸಿನಿಮಾ (Bheema Movie) ಮೂಡಿಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ. ಆದಷ್ಟು ಬೇಗ ‘ಭೀಮ’ ರಿಲೀಸ್​ ಮಾಡಬೇಕು ಎಂಬುದು ವಿಜಯ್​ ಅವರ ಗುರಿ. ಅದಕ್ಕೆ ತಕ್ಕಂತೆಯೇ ಬಿರುಸಿನಿಂದ ಕೆಲಸಗಳು ಸಾಗುತ್ತಿವೆ.

ಟೈಟಲ್​ ಮೂಲಕ ಗಮನ ಸೆಳೆಯುತ್ತಿರುವ ‘ಭೀಮ’ ಚಿತ್ರದ ಕೆಲಸಗಳು ಈಗ ‌ಕೊನೆಯ ಹಂತವನ್ನು ತಲುಪಿವೆ. ಶೀಘ್ರದಲ್ಲೇ ಜನರಿಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಲು ಚಿತ್ರತಂಡ ನಿರ್ಧರಿಸಿದೆ. ಸದ್ಯದ ಪ್ಲ್ಯಾನ್​ ಪ್ರಕಾರ ನವೆಂಬರ್​ ತಿಂಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ತಂಡದ ಆಲೋಚನೆ. ಆ ತಿಂಗಳಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಅದು ಬಿಡುಗಡೆಗೆ ಸೂಕ್ತ ಸಮಯ ಎನ್ನಲಾಗುತ್ತಿದೆ. ಇನ್ನೊಂದು ವಾರದಲ್ಲಿ ‘ಭೀಮ’ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಆಗಲಿದೆ.

ಇದನ್ನೂ ಓದಿ: Duniya Vijay: ಪಕ್ಕಾ ಅಭಿಮಾನಿಗೆ ವಿಶೇಷ ಪ್ರೀತಿ ತೋರಿಸಿದ ನಟ ದುನಿಯಾ ವಿಜಯ್

ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ‘ಭೀಮ’ ಬಳಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಡುಗಡೆ ದಿನಾಂಕವನ್ನು ತಿಳಿಸಿದ ಬಳಿಕ ಬಿರುಸಿನ ಪ್ರಚಾರ ಆರಂಭ ಆಗಲಿದೆ. ಕನ್ನಡ ಚಿತ್ರರಂಗಕ್ಕೆ ಈಗ ಉತ್ತಮ ಸಮಯ ಬಂದಿದೆ. ಈ ವರ್ಷ ಬಿಡುಗಡೆ ಆದ ‘ಡೇರ್​ಡೆವಿಲ್​ ಮುಸ್ತಫಾ’, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯ ಸುಪ್ರಜಾ ರಾಮ’ ಮುಂತಾದ ಸಿನಿಮಾಗಳು ಜನಮೆಚ್ಚುಗೆ ಗಳಿಸಿವೆ. ‘ಭೀಮ’ ಕೂಡ ಭರ್ಜರಿ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಈ ಚಿತ್ರ ಕೂಡ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ಕರ್ನಾಟಕದ ಜನ ಪ್ರಜ್ಞಾವಂತರು ಎಂದ ದುನಿಯಾ ವಿಜಯ್ ಗೆದ್ದ ಪಕ್ಷದ ಬಳಿ ಮಾಡಿದರೊಂದು ಮನವಿ

‘ಭೀಮ’ ಸಿನಿಮಾದಲ್ಲಿನ ಪಾತ್ರವರ್ಗ ಕೂಡ ಗಮನ ಸೆಳೆಯುವಂತಿದೆ. ದುನಿಯಾ ವಿಜಯ್ ಜೊತೆ ಅಚ್ಯುತ್ ಕುಮಾರ್, ರಂಗಾಯಣ ರಘು, ಕಾಕ್ರೋಚ್ ಸುಧಿ, ಅಶ್ವಿನಿ, ಕಲ್ಯಾಣಿ ಹಾಗೂ ಪ್ರಿಯಾ ಶಠಮರ್ಷಣ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವಸೇನಾ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ, ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಆ್ಯಕ್ಷನ್​ ಸಿನಿಮಾಗೆ ಚೇತನ್ ಡಿಸೋಜಾ, ಗೌತಮ್, ವಿನೋದ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಧನು ಅವರು ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us