ದರ್ಶನ್​​ಗೆ ಅಭಿಮಾನಿಗಳಿಂದಲೇ ಸಂಕಷ್ಟ? ಪ್ರಕರಣದಲ್ಲಿ ಮುಂದಿನ ಹೆಜ್ಜೆಯೇನು?

ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಹೊರಗೆ ಅವರ ಅಭಿಮಾನಿಗಳು ಮತ್ತೊಮ್ಮೆ ತಮ್ಮ ಹುಚ್ಚಾಟ ಮೆರೆಯುತ್ತಿದ್ದಾರೆ. ಆದರೆ ಅವರಿಂದಲೇ ದರ್ಶನ್​ಗೆ ಸಮಸ್ಯೆಗಳು ಶುರುವಾಗುತ್ತಿವೆ ಎಂಬುದು ಅವರು ಅರಿವಿಗೆ ಬರುತ್ತಿಲ್ಲ.

ದರ್ಶನ್​​ಗೆ ಅಭಿಮಾನಿಗಳಿಂದಲೇ ಸಂಕಷ್ಟ? ಪ್ರಕರಣದಲ್ಲಿ ಮುಂದಿನ ಹೆಜ್ಜೆಯೇನು?

Updated on: Sep 01, 2024 | 12:09 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ಗೆ ಸಂಕಷ್ಟಗಳು ಒಂದರ ಹಿಂದೊಂದು ಹೆಚ್ಚಾಗುತ್ತಲೇ ಇವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನೆಮ್ಮದಿಯ ದಿನ ಕಳೆಯುತ್ತಿದ್ದ ದರ್ಶನ್​ ಈಗ ಸ್ವಯಂಕೃತ ಅಪರಾಧದಿಂದಾಗಿ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ದರ್ಶನ್ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದ್ದು, ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಿರಲಿವೆ ಎನ್ನಲಾಗುತ್ತಿದೆ. ದರ್ಶನ್​ಗೆ ಸುಲಭಕ್ಕೆ ಜಾಮೀನು ಸಹ ಸಿಗುವುದು ಸಾಧ್ಯವಿಲ್ಲ ಎನ್ನಲಾಗುತ್ತಿದ್ದು, ಇದಕ್ಕೆ ಅವರ ಅಭಿಮಾನಿಗಳ ಅತಿರೇಕದ ವರ್ತನೆಯೂ ಕಾರಣ ಎನ್ನಲಾಗುತ್ತಿದೆ.

ದರ್ಶನ್ ಜೈಲಿಗೆ ಹೋದಾಗಿನಿಂದಲೂ ಅವರ ಅಭಿಮಾನಿಗಳ ವರ್ತನೆ ಮಿತಿ ಮೀರಿದೆ. ದರ್ಶನ್ ಹೊರಗಿದ್ದಾಗಲೂ ಅವರ ವರ್ತನೆ ಹಾಗೆಯೇ ಇತ್ತು. ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆಯನ್ನು ಈಗಾಗಲೇ ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ದರ್ಶನ್​ಗೆ ನ್ಯಾಯಾಂಗ ಬಂಧನ ವಿಸ್ತರಿಸಲು ಪೊಲೀಸರು ನೀಡುತ್ತಿದ್ದ ಕಾರಣದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆಯೂ ಒಂದಾಗಿತ್ತು. ಈಗ ಮುಂದೆ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದಾಗಲೂ ಸಹ ಸರ್ಕಾರಿ ವಕೀಲರು ದರ್ಶನ್​ಗೆ ಜಾಮೀನು ನೀಡದಂತೆ ಇದನ್ನೂ ಒಂದು ಕಾರಣವಾಗಿ ನೀಡಲಿದ್ದಾರೆ. ದರ್ಶನ್ ಅಭಿಮಾನಿಗಳನ್ನು ಇತರರನ್ನು ನಿಂದಿಸುತ್ತಿರುವ, ತಮ್ಮ ‘ಬಾಸ್’ ಮಾಡಿದ್ದು ಸರಿ ಎಂದು ವಾದಿಸುತ್ತಿರುವ ವಿಡಿಯೋಗಳನ್ನು ಸಂಗ್ರಹಿಸಿಕೊಂಡಿದ್ದು ಅವನ್ನು ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಜಾಮೀನು ಅರ್ಜಿ ಸಲ್ಲಿಕೆ

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮನೆ ಊಟ, ಹಾಸಿಗೆ ಕೋರಿ ಹೈಕೋರ್ಟ್​ಗೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಮೇಲೆ ಆ ರೀತಿಯ ಯಾವುದೇ ಅರ್ಜಿ ಸಲ್ಲಿಸುವುದಿಲ್ಲ ಎನ್ನಲಾಗುತ್ತಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುತ್ತಿರುವದನ್ನು ವಿರೋಧಿಸಿ ಅರ್ಜಿ ಸಲ್ಲಿಸುವುದನ್ನು ಸಹ ದರ್ಶನ್ ನಿರಾಕರಿಸಿದ್ದರು ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸುವವರೆಗೆ ಕಾದು, ಚಾರ್ಜ್ ಶೀಟ್ ಅನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕವೇ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ನಿರ್ಣಯಿಸಿದ್ದಾರೆ. ಇದೇ ಕಾರಣಕ್ಕೆ ಅದಕ್ಕೆ ಮುಂಚಿತವಾಗಿ ಯಾವುದೇ ಅರ್ಜಿಯನ್ನು ಸಲ್ಲಿಸದಿರಲು ದರ್ಶನ್ ನಿಶ್ಚಯಿಸಿದ್ದಾರೆ.

ಇದನ್ನೂ ಓದಿ:ಮೂರು ತಿಂಗಳಲ್ಲಿ 15 ಕೆಜಿ ತೂಕ ಕಳೆದುಕೊಂಡ ದರ್ಶನ್

ಬಳ್ಳಾರಿ ಜೈಲಿನಲ್ಲಿ ದರ್ಶನ್

ದರ್ಶನ್ ಬಳ್ಳಾರಿ ಜೈಲಿಗೆ ಬಂದು ಇಂದಿಗೆ ನಾಲ್ಕು ದಿನಗಳಾಗಿವೆ. ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಪತಿಯನ್ನು ಕಾಣಲು ಬಂದಿದ್ದರು. ಪತಿಗಾಗಿ ಎರಡು ಚೀಲಗಳಲ್ಲಿ ವಿವಿಧ ವಸ್ತುಗಳನ್ನು ತಂದಿದ್ದರು. ಕೆಲವು ತಿಂಡಿಗಳು, ಡ್ರೈ ಫ್ರೂಟ್ಸ್ ಗಳನ್ನು ತಂದಿದ್ದರು. ಬಟ್ಟೆಗಳನ್ನು ತಂದಿದ್ದರು. ಕಾಣಲು ಬಂದ ವಿಜಯಲಕ್ಷ್ಮಿ ಜೊತೆಗೆ ಸುಮಾರು ಅರ್ಧ ಗಂಟೆ ಕಾಲ ದರ್ಶನ್ ಮಾತನಾಡಿದ್ದಾರೆ. ಆ ನಂತರ ತುಸು ನಿರಾಳವಾಗಿ ಇದ್ದರಂತೆ ದರ್ಶನ್.

ಭಾನುವಾರ ತಿಂಡಿ ಏನು?

ಶನಿವಾರ ರಾತ್ರಿ ಸರಳವಾಗಿ ಊಟ ಮಾಡಿದ ದರ್ಶನ್ ವಾಕಿಂಗ್ ಮಾಡಿದ್ದಾರೆ. ನಿದ್ರಾಹೀನತೆಯಿಂದ ಬಳಲುತ್ತಿರುವ ದರ್ಶನ್ ತಡವಾಗಿ ಮಲಗಿದ್ದಾರೆ. ಬಳಿಕ ಭಾನುವಾರ ಬೆಳಿಗ್ಗೆ 450 ಗ್ರಾಂ ಪುಲಾವ್ ನೀಡಿದ್ದರು. ಅದನ್ನು ಸೇವಿಸಿರುವ ದರ್ಶನ್ ಬಳಿಕ ಪುಸ್ತಕಗಳನ್ನು ಓದುವತ್ತ ಗಮನ ಹರಿಸಿದ್ದಾರೆ. ಬೇರೆ ಸೆಲ್​ನ ಆರೋಪಿಗಳೊಟ್ಟಿಗೆ ದರ್ಶನ್ ಬೆರೆಯುತ್ತಿಲ್ಲ, ಯಾರನ್ನೂ ಮಾತನಾಡಿಸುತ್ತಿಲ್ಲ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us