ಜನವರಿ 24ಕ್ಕೆ ತೆರೆ ಕಾಣಲಿದೆ ‘ಫಾರೆಸ್ಟ್’ ಸಿನಿಮಾ; ಇದರಲ್ಲಿದೆ ಅಡ್ವೆಂಚರ್‌ ಕಾಮಿಡಿ

ರಂಗಾಯಣ ರಘು, ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯ ಶೆಟ್ಟಿ ಅವರು ‘ಫಾರೆಸ್ಟ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಜ.24ರಂದು ಈ ಸಿನಿಮಾ ತೆರೆ ಕಾಣಲಿದೆ. ಚಂದ್ರಮೋಹನ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು.

ಜನವರಿ 24ಕ್ಕೆ ತೆರೆ ಕಾಣಲಿದೆ ‘ಫಾರೆಸ್ಟ್’ ಸಿನಿಮಾ; ಇದರಲ್ಲಿದೆ ಅಡ್ವೆಂಚರ್‌ ಕಾಮಿಡಿ
Forest Movie Team

Updated on: Jan 20, 2025 | 7:39 PM

ಅಡ್ವೆಂಚರ್‌ ಕಾಮಿಡಿ ಶೈಲಿಯ ‘ಫಾರೆಸ್ಟ್​’ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 24ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಎನ್.ಎಂ. ಕಾಂತರಾಜ್ ಅವರು ‘ಎನ್.ಎಂ.ಕೆ. ಸಿನಿಮಾಸ್’ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಂದ್ರ ಮೋಹನ್ ಅವರು ನಿರ್ದೇಶನ ಮಾಡಿದ್ದಾರೆ. ಅನೀಶ್ ತೇಜೇಶ್ವರ್, ಚಿಕ್ಕಣ್ಣ, ಗುರುನಂದನ್, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು ಅವರು ‘ಫಾರೆಸ್ಟ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

‘ಫಾರೆಸ್ಟ್’ ಎಂಬ ಶೀರ್ಷಿಕೆ ಕೇಳಿದರೆ ಇದು ಕಾಡಿನ ಕಥೆ ಎನಿಸುತ್ತದೆ. ಆ ಬಗ್ಗೆ ನಟ ರಂಗಾಯಣ ರಘು ಮಾತನಾಡಿದರು.‘ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆ ಅಲ್ಲ. ಕಾಡಿನಲ್ಲಿ ಇರುವುದನ್ನು ಹುಡುಕುವ ಕಥೆ. ಇದರಲ್ಲಿ ನನ್ನದು ಮಂತ್ರವಾದಿಯ ಪಾತ್ರ’ ಎಂದು ಅವರು ಹೇಳಿದರು. ‘ಹಳ್ಳಿಯಿಂದ ಕಾಡಿಗೆ ಹೋಗುವ ಅಮಾಯಕರ ಕಥೆಯಿದು’ ಎಂದು ಚಿಕ್ಕಣ್ಣ ಹೇಳಿದರು.

‘ನನ್ನದು ಈ ಸಿನಿಮಾದಲ್ಲಿ ಅಮಾಯಕನ ಪಾತ್ರ’ ಎಂದರು ನಟ ಗುರುನಂದನ್. ‘ಇದೇ ಮೊದಲ ಬಾರಿಗೆ ನಾನು ನನ್ನ ಜಾನರ್​ನ ಹೊರತುಪಡಿಸಿ ಮಾಡಿರುವ ಸಿನಿಮಾ ಇದು’ ಎಂದಿದ್ದಾರೆ ಅನೀಶ್ ತೇಜೇಶ್ವರ್. ನಟಿ ಅರ್ಚನಾ ಕೊಟ್ಟಿಗೆ ಅವರು ‘ಫಾರೆಸ್ಟ್’ ಸಿನಿಮಾದಲ್ಲಿ ಮೀನಾಕ್ಷಿ ಎಂಬ ಪಾತ್ರ ಮಾಡಿದ್ದಾರೆ. ‘ನಾನು ಸಾಹಸ ದೃಶ್ಯಗಳಲ್ಲಿ ನಟಿಸಿರುವುದು ವಿಶೇಷ’ ಎಂದು ಅವರು ಹೇಳಿದರು.

ನಿರ್ದೇಶಕ ಚಂದ್ರಮೋಹನ್ ಮಾತನಾಡಿ, ‘ಮಡಿಕೇರಿಯ ಸಂಪಂಜೆ ಕಾಡಿನಲ್ಲಿ ಈ ಸಿನಿಮಾಗೆ 25 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಮಲೆ ಮಹದೇಶ್ವರ ಬೆಟ್ಟ ಹಾಗೂ ಬೆಂಗಳೂರಿನಲ್ಲೂ ಚಿತ್ರೀಕರಣ ಆಗಿದೆ. ಸತ್ಯ ಶೌರ್ಯ ಸಾಗರ್ ಮತ್ತು ನಾನು ಕಥೆ, ಚಿತ್ರಕಥೆ ಬರೆದಿದ್ದೇವೆ. ಟೀಸರ್, ಹಾಡುಗಳು ಮತ್ತು ಟ್ರೇಲರ್ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಜನವರಿ 24ರಂದು ಸಿನಿಮಾ ಬಿಡುಗಡೆ ಆಗಲಿದೆ’ ಎಂದರು.

ಇದನ್ನೂ ಓದಿ: ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್

‘ನಮ್ಮ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿತರಣೆಯನ್ನೂ ನಾನೇ ಮಾಡುತ್ತಿದ್ದೇನೆ. 250ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಎಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತದೆ ಎಂಬ ಭರವಸೆಯಿದೆ’ ಎಂದು ನಿರ್ಮಾಪಕ ಕಾಂತಾರಾಜ್ ಹೇಳಿದ್ದಾರೆ. ಶರಣ್ಯ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us